ಜಿ ಪರಮೇಶ್ವರ 
ರಾಜಕೀಯ

ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ವೈಯಕ್ತಿಕ, ಯಾರೂ "ಲಕ್ಷ್ಮಣ ರೇಖೆ" ದಾಟಬಾರದು: ಜಿ ಪರಮೇಶ್ವರ

"ವೈಯಕ್ತಿಕವಾಗಿ, ಅವರು ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ. ಸ್ವಲ್ಪ ಮಟ್ಟಿಗೆ ಅದು ತಪ್ಪು ಎಂದು ನಾನು ಭಾವಿಸುವುದಿಲ್ಲ. ಆದರೆ ಪಕ್ಷ ಹಾಕಿದ ಲಕ್ಷ್ಮಣ ರೇಖೆಯನ್ನು ಯಾರೂ ದಾಟಬಾರದು.

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಆಡಳಿತಾರೂಢ ಕಾಂಗ್ರೆಸ್‌ನ ಕೆಲವು ನಾಯಕರು ನೀಡಿದ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಸೋಮವಾರ ಹೇಳಿದ್ದಾರೆ.

ಈ ವರ್ಷದ ಕೊನೆಯಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳಿಗೆ ಕಾರಣವಾದ ಪಕ್ಷದ ಕೆಲವು ನಾಯಕರ ಇತ್ತೀಚಿನ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಪರಮೇಶ್ವರ ಅವರು, ಯಾರೂ ಪಕ್ಷದ "ಲಕ್ಷ್ಮಣ ರೇಖೆ"ಯನ್ನು ದಾಟಬಾರದು ಎಂದಿದ್ದಾರೆ.

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಎರಡು-ಮೂರು ತಿಂಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಬಹುದು ಎಂದು ಕಾಂಗ್ರೆಸ್ ಶಾಸಕ ಎಚ್ ಎ ಇಕ್ಬಾಲ್ ಹುಸೇನ್ ಅವರು ಹೇಳಿದ್ದಾರೆ. ಅಲ್ಲದೆ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ಸೆಪ್ಟೆಂಬರ್ ನಂತರ ರಾಜ್ಯದಲ್ಲಿ 'ಕ್ರಾಂತಿಕಾರಿ' ರಾಜಕೀಯ ಬದಲಾವಣೆಯಾಗಲಿದೆ ಎಂದಿದ್ದಾರೆ.

ನಾಯಕತ್ವ ಬದಲಾವಣೆಯ ಕುರಿತು ಪಕ್ಷದ ನಾಯಕರ ಹೇಳಿಕೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, "ವೈಯಕ್ತಿಕವಾಗಿ, ಅವರು ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ. ಸ್ವಲ್ಪ ಮಟ್ಟಿಗೆ ಅದು ತಪ್ಪು ಎಂದು ನಾನು ಭಾವಿಸುವುದಿಲ್ಲ. ಆದರೆ ಪಕ್ಷ ಹಾಕಿದ ಲಕ್ಷ್ಮಣ ರೇಖೆಯನ್ನು ಯಾರೂ ದಾಟಬಾರದು. ಆ ಬಗ್ಗೆ ಎಐಸಿಸಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳು ಪರಿಶೀಲಿಸುತ್ತಾರೆ" ಎಂದರು.

ಇನ್ನು ಸೆಪ್ಟೆಂಬರ್ ನಂತರ ರಾಜ್ಯದಲ್ಲಿ 'ಕ್ರಾಂತಿಕಾರಿ' ರಾಜಕೀಯ ಬೆಳವಣಿಗೆಗಳ ಬಗ್ಗೆ ರಾಜಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಅದರ ಬಗ್ಗೆ ತಮಗೆ ಏನೂ ಗೊತ್ತಿಲ್ಲ ಎಂದು ಹೇಳಿದರು.

ಶಾಸಕರ ಅಸಮಾಧಾನ ಮುಂದುವರಿಕೆ ವಿಚಾರವಾಗಿ ಮಾತನಾಡಿ, ಶಾಸಕರಿಗೆ ಸುರ್ಜೇವಾಲಾ ಕಟ್ಟುನಿಟ್ಟಾಗಿ ಮಾತನಾಡದಂತೆ ಹೇಳಬಹುದು. ರಾಜ್ಯಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸ ಆದಾಗ ಹೈಕಮಾಂಡ್ ಸರಿಪಡಿಸುತ್ತೆ. ಹಿಂದೆಯೂ ಇಲಾಖಾ ಪ್ರಗತಿ ಬಗ್ಗೆ ಹೈಕಮಾಂಡ್​ ​ನವರು ಬಂದು ಮಾಹಿತಿ ಪಡೀತಿದ್ರು. ನಮಗೆಲ್ಲ ಮಾರ್ಗದರ್ಶನ ಮಾಡೋರೇ ಹೈಕಮಾಂಡ್. ಹಾಗಂತ ಸಿಎಂ ಅವರು ಹಿಡಿತ ಕಳ್ಕೊಂಡಿದ್ದಾರೆ ಅಂತ ಅನ್ಕೋಬಾರದು. ಹೈಕಮಾಂಡ್​​ನವರು ಬಂದಾಗ ನಮ್ಮ ಆಡಳಿತ ಹೇಗಿದೆ ಅಂತ ಅರಿವಾಗುತ್ತದೆ ಎಂದರು.

ಸುರ್ಜೇವಾಲಾ ಅವರನ್ನು ಯಾವ ಉದ್ದೇಶಕ್ಕೆ ಕರೆಸಿದ್ದಾರೆ ಅಂತ ಗೊತ್ತಿಲ್ಲ. ಪಕ್ಷ ಸಂಘಟನೆ ಬಗ್ಗೆ ಸುರ್ಜೇವಾಲಾ ಮಾತಾಡಬಹುದು. ಜಿ.ಪಂ, ತಾ.ಪಂ ಚುನಾವಣೆ ಬರ್ತಿದೆ. ಅದರ ಬಗ್ಗೆ ಮಾತಾಡಬಹುದು.‌ ಕೆಲವು ಸಂದರ್ಭದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡ್ತಾರೆ. ಅದು ಅವರ ಕೆಲಸ. ಸಣ್ಣಪುಟ್ಟ ವ್ಯತ್ಯಾಸಗಳು ಬಂದಾಗ ಹೈಕಮಾಂಡ್​​ನವರು ಮಾತನಾಡುವುದು ಸಹಜ. ನಾನು ಸುರ್ಜೇವಾಲಾರ ಭೇಟಿಗೆ ಸಮಯ ಕೇಳಿದ್ದೇನೆ. ನಾಳೆ ಮಧ್ಯಾಹ್ನ ಬರುವಂತೆ ಸುರ್ಜೇವಾಲಾ ಹೇಳಿದ್ದಾರೆ. ನನ್ನ ಭೇಟಿ ವಿಚಾರ ವೈಯಕ್ತಿಕ ಎಂದು ಸ್ಪಷ್ಟಪಡಿಸಿದರು.

ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು ತೆಗೆಯಬೇಕು ಎಂದು ಆಗ್ರಹಿಸಿದ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಗೆ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಸ್ಪಷ್ಟ ಕಾರಣಗಳಿಗಾಗಿ ತುರ್ತು ಪರಿಸ್ಥಿತಿಯ ವಿಷಯವನ್ನು ಜೀವಂತವಾಗಿಟ್ಟಿವೆ. ಇದು ಅವರು ತೆಗೆದುಕೊಂಡ ರಾಜಕೀಯ ನಿರ್ಧಾರ ಮತ್ತು ಎಐಸಿಸಿ ಅದನ್ನು ಎದುರಿಸುತ್ತದೆ ಎಂದು ಪರಮೇಶ್ವರ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

SCROLL FOR NEXT