ಮುಖ್ಯಮಂತ್ರಿ ಸಿದ್ದರಾಮಯ್ಯ 
ರಾಜಕೀಯ

ಕಾಂಗ್ರೆಸ್ ಆಂತರಿಕ ಬಿಕ್ಕಟ್ಟು: ಸಿದ್ದರಾಮಯ್ಯ ಅಧಿಕಾರ ಅಂತ್ಯ ಸನಿಹಕ್ಕೆ?; ದಲಿತ ಸಿಎಂ ಕೂಗು ಮತ್ತೆ ಮುನ್ನೆಲೆಗೆ!

ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಇತ್ತೀಚೆಗೆ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ನಡೆಸಿದ ಮಾತುಕತೆಗಳು ಈ ಊಹಾಪೋಹಗಳಿಗೆ ಪುಷ್ಟಿ ನೀಡಿದೆ.

ಬೆಂಗಳೂರು: ಕಳೆದ 2 ವಾರಗಳಿಂದ ರಾಜ್ಯ ಕಾಂಗ್ರೆಸ್ ಅಲ್ಲೋಲ ಕಲ್ಲೋಲಗೊಂಡಿದೆ. ಶಾಸಕ ಬಿಆರ್ ಪಾಟೀಲ್, ರಾಜೂ ಕಾಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರಿಂದ ಕಾಂಗ್ರೆಸ್ ಪಕ್ಷ ಮುಜುಗರಕ್ಕೊಳಗಾಗುವಂತಾಗಿದೆ. ಈ ನಡುವಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯ ಎರಡೂವರೆ ವರ್ಷಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ದಲಿತ ಮುಖ್ಯಮಂತ್ರಿ ಕೂಗು ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆಗಳಿವೆ.

ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಇತ್ತೀಚೆಗೆ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ನಡೆಸಿದ ಮಾತುಕತೆಗಳು ಈ ಊಹಾಪೋಹಗಳಿಗೆ ಪುಷ್ಟಿ ನೀಡಿದಂತಾಗಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ತಮ್ಮ ಕೈಲಾದಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಬದಲಾವಣೆ ಪರಿಸ್ಥಿತಿ ಉದ್ಭವಿಸಿದ್ದೇ ಆದರೆ, ಸರ್ಕಾರದ ಮೇಲಿನ ತಮ್ಮ ಹಿಡಿತವನ್ನು ಬಿಡದಿರಲು ಪರಮೇಶ್ವರ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಹೆಸರಿಸಲು ಚಿಂತನೆ ನಡೆಸಿದ್ದಾರೆಂದು ನವದೆಹಲಿಗೆ ಭೇಟಿ ನೀಡಿದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಮೂಲಗಳ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ ಸಿದ್ದರಾಮಯ್ಯ ಅವರು, ಈ ಮಾತುಕತೆ ಕುರಿತು ಪರಮೇಶ್ವರ್ ಹಾಗೂ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮಾಹಿತಿ ನೀಡಿರಬಹುದು. ಈ ಮೂಲಕ ಸಿದ್ದು ಪರವಾಗಿರುವ ನಾಯಕರು ಪರಿಸ್ಥಿತಿಗಳ ಎದುರಿಸಲು ಸಿದ್ಧತೆ ಆರಂಭಿಸಿದ್ದಾರೆಂದು ತಿಳಿದುಬಂದಿದೆ.

ಈ ನಡುವೆ ಅಕ್ಟೋಬರ್ ವೇಳೆಗೆ ರಾಜ್ಯಕ್ಕೆ ಹೊಸ ಸಿಎಂ ಬರಲಿದ್ದಾರೆಂಬ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಂಬಿ.ಪಾಟೀಲ್ ಅವರು, ಅಶೋಕ್ ಮೊದಲು ತಮ್ಮ ಹುದ್ದೆಯನ್ನು ಉಳಿಸಿಕೊಳ್ಳಲಿ. ಹೈಕಮಾಂಡ್ ಮತ್ತು ಸಿಡಬ್ಲ್ಯೂಸಿ ನಿರ್ಧಾರ ತೆಗೆದುಕೊಳ್ಳುವುದರಿಂದ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತು ಯಾವುದೇ ಬೆಳವಣಿಗೆಗಳಾಗುತ್ತಿಲ್ಲ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ​​ಮುನಿಯಪ್ಪ ಮಾತನಾಡಿ, ದಲಿತ ಸಿಎಂ ವಿಷಯದ ಕುರಿತ ಚರ್ಚೆ ಬೇಡ, ಅದು ಹಳೆಯ ವಿಚಾರ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರೇಸ್‌ನಲ್ಲಿದ್ದಾಗಿನಿಂದಲೂ ಈ ಬಗ್ಗೆ ಮಾತನಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

2023 ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಮುನಿಯಪ್ಪ ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಆದರೆ, ಈಗ ಖರ್ಗೆ ರಾಜ್ಯ ರಾಜಕೀಯಕ್ಕೆ ಮರಳುವ ಸಾಧ್ಯತೆಗಳು ದೂರವಿದೆ. ಪಕ್ಷದಲ್ಲಿ ಬದಲಾವಣೆಗಳು ಅನಿವಾರ್ಯವಿದ್ದು, ನಾಯಕರು ದಲಿತ ನಾಯಕನ ಹೆಸರನ್ನು ಪ್ರಸ್ತಾಪಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಈ ನಡುವೆ ಡಿಕೆ.ಶಿವಕುಮಾರ್ ಅವರ ನಿಷ್ಠಾವಂತ ಮತ್ತು ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮುಂದಿನ ಎರಡು ಮೂರು ತಿಂಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಸಿಗಬಹುದು ಎಂದು ಹೇಳಿದ್ದರೆ, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಪ್ರತಿಪಾದಿಸಿದ್ದಾರೆ.

ಪರಮೇಶ್ವರ ಅವರು ಡಿಕೆ.ಶಿವಕುಮಾರ್ ಅವರನ್ನು ಭೇಟಿಯಾದಾಗ ನಾಲ್ಕು ಎಂಎಲ್‌ಸಿಗಳ ನಾಮನಿರ್ದೇಶನ ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚಿಸಿರಬಹುದು, ಇದಕ್ಕೆ ಹೈಕಮಾಂಡ್ ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೌನ್ಸಿಲ್ ಸ್ಥಾನಕ್ಕೆ ತಮ್ಮ ನಿಷ್ಠಾವಂತ ಮತ್ತು ಹಿಂದುಳಿದ ಸಮುದಾಯದ ನಾಯಕ ಎಂಸಿ ವೇಣುಗೋಪಾಲ್ ಅವರಿಗೆ ಸ್ಥಾನ ಒದಗಿಸಲು ಪರಮೇಶ್ವರ್ ಅವರು ಯತ್ನಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

16ನೇ ದಿನಕ್ಕೆ ಯುದ್ಧ: ಮೊದಲ ಬಾರಿಗೆ 'Dancing Missile' ಉಡಾಯಿಸಿದ Iran, 2 ಸಾವಿರ ಕಿ.ಮೀ ವ್ಯಾಪ್ತಿ.. ಅಮೆರಿಕಕ್ಕೆ ತಲೆನೋವು!

ನನಗೆ ಇರೋದ್ 5 ಬೆರಳು: ಸಾವಿನ ವದಂತಿ ಮಧ್ಯೆ ಚಹಾ ಕುಡಿಯುತ್ತ ಕಾಣಿಸಿಕೊಂಡ ಇಸ್ರೇಲ್ ಪ್ರಧಾನಿ, ಇರಾನ್‌ಗೆ ಮುಖಭಂಗ, Video!

ಹಳ್ಳ ಹಿಡಿದ ಇರಾನ್ ಆರ್ಥಿಕತೆ! 1 ಲೀಟರ್ ಹಾಲಿನ ಬೆಲೆ 8 ಲಕ್ಷ, ಬ್ರೆಡ್‌ನ 6.6 ಲಕ್ಷ, 1 ಕೆಜಿ ಅಕ್ಕಿಗೆ 32 ಲಕ್ಷ ರಿಯಾಲ್!

ಮಿತ್ರಪಕ್ಷಗಳಿಂದ DMK ಮೈತ್ರಿಕೂಟ ತೊರೆಯುವ ಬೆದರಿಕೆ: ಇದು ಸೋಲಿನ ಭೀತಿ, ಕಾಂಗ್ರೆಸ್ ನಾಯಕನ ಆಕ್ರೋಶ!

ತಮಿಳುನಾಡು ಮತ್ತು ಬಂಗಾಳ ಸೇರಿದಂತೆ 5 ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ!

SCROLL FOR NEXT