ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಚುನಾವಣಾ ಫಲಿತಾಂಶ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ರೀತಿಯಲ್ಲಿ ನಿರಾಳವನ್ನು ತಂದಿದೆ. ಏಕೆಂದರೆ, ಕಾಂಗ್ರೆಸ್ ಸೋಲು ಸಿಎಂ ಕುರ್ಚಿಯನ್ನು ಬಲಪಡಿಸಿದಂತಾಗಿದೆ.
ಚುನಾವಣಾ ಫಲಿತಾಂಶ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಸಿಎಂ ಮುಂದುವರೆಸಿ, ಸಂಪುಟ ಪುನಾರಚನೆ ಮಾಡಲು ಹಾಗೂ ಮತ್ತಷ್ಟು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ಒಪ್ಪಿಗೆ ಸೂಚಿಸಬಹುದು ಎಂದು ಮೂಲಗಳು ತಿಳಿಸಿವೆ.
ಬಿಹಾರ ಫಲಿತಾಂಶ ಕುರಿತು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ಬಿಹಾರ ಚುನಾವಣೆಯಲ್ಲಿ ಯಾಕೆ ಹಿನ್ನಡೆ ಆಗಿದೆ ಗೊತ್ತಿಲ್ಲ, ನಾನು ಇನ್ನೂ ನೋಡಿಲ್ಲ, ಸರಿಯಾಗಿ ಮಾಹಿತಿ ಪಡೆದು ಮತ್ತೆ ಮಾತನಾಡುತ್ತೇನೆ. ಯಾಕೆ ಜನ ವೋಟ್ ಹಾಕಿಲ್ಲ, NDA ಯಾಕೆ ಇಷ್ಟು ದೊಡ್ಡ ಬಹುಮತದಲ್ಲಿದೆ ಎನ್ನುವುದು ಗೊತ್ತಿಲ್ಲ. ಇಲ್ಲೂ ಮತಗಳ್ಳತನವಾಗಿದೆ. ಆದರೆ ನಾವು ಜನರ ತೀರ್ಪು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಅಜೆಂಡಾ ಓಬಿಸಿ ಅವರೇ ಬಿಹಾರದಲ್ಲಿ ಕೈ ಹಿಡಿದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ನಿತೀಶ್ ಕುಮಾರ್ ಯಾರು? ಅವರು ಓಬಿಸಿ ಅಲ್ಲವಾ? ಸಿಡಿಮಿಡಿಗೊಂಡರು.
ಏತನ್ಮಧ್ಯೆ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಕುರಿತ ವಿಚಾರ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ನಡುವಲ್ಲೇ ದೆಹಲಿಗೆ 3 ದಿನಗಳ ಭೇಟಿ ನೀಡಲು ನಿರ್ಧರಿಸಿದ್ದ ಸಿದ್ದರಾಮಯ್ಯ ಅವರು, ಫಲಿತಾಂಶ ಬೆನ್ನಲ್ಲೇ ಇದೀಗ ಪ್ರವಾಸವನ್ನು 1 ದಿನಕ್ಕೆ ಮೊಟಕುಗೊಳಿಸಿದ್ದಾರೆ. ಹಿರಿಯ ನಾಯಕ ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಷ್ಟೇ ಭಾಗಿಯಾಗಲು ನಿರ್ಧರಿಸಿದ್ದಾರೆ.
ಈ ನಡುವೆ ರಾಹುಲ್ ಗಾಂಧಿಯವರು 10 ದಿನಗಳ ಪ್ರವಾಸಕ್ಕೆಂಡು ಫಿನ್ಲೆಂಡ್'ಗೆ ತೆರಳಿದ್ದು, ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ತಂಗಿದರೂ ಹೈಕಮಾಂಜ್ ಭೇಟಿ ಸಾಧ್ಯವಾಗುವುದಿಲ್ಲ. ಹೀಗಾಗಿ, ಪ್ರವಾಸವನ್ನು ಮೊಟಕುಗೊಳಿಸಿದ್ದಾರೆಂದು ತಿಳಿದುಬಂದಿದೆ.
ಬಿಹಾರ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದು, ಅಧಿಕಾರದಲ್ಲಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ. ಅದನ್ನು ಕಳೆದುಕೊಳ್ಳಲು ಪಕ್ಷ ಬಯಸುವುದಿಲ್ಲ ಎಂದು ಕಾಂಗ್ರೆಸ್ ಶಾಸಕರೊಬ್ಬರು ಹೇಳಿದ್ದಾರೆ.
ಆದರೆ, ಡಿಕೆ.ಶಿವಕುಮಾರ್ ಆಪ್ತ ಬಳಗವು ಪಕ್ಷದ ಹೈಕಮಾಂಡ್ ಒಬಿಸಿ ಮತ್ತು ಅಲ್ಪಸಂಖ್ಯಾತರ ಜೊತೆಗೆ ಮುಂದುವರಿದ ಜಾತಿಗಳನ್ನೂ ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ವಾದಿಸುತ್ತಿದೆ.
ಮುಖ್ಯಮಂತ್ರಿ ಬದಲಾವಣೆ ವಿಳಂಬವಾಗಬಹುದು, ಆದರೆ ಹೈಕಮಾಂಡ್ ತನ್ನ ಮಾತನ್ನು ಉಳಿಸಿಕೊಳ್ಳಬೇಕಾಗಿರುವುದರಿಂದ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಮತ್ತೊಬ್ಬನಾಯಕರು ಹೇಳಿದ್ದಾರೆ.
ಬಿಹಾರ ಚುನಾವಣೆ ರಾಜ್ಯ ಬಿಜೆಪಿಯ ನೈತಿಕತೆಯನ್ನು ಹೆಚ್ಚಿಸಲಿದ್ದು, ಕಾಂಗ್ರೆಸ್ ನಾಯಕತ್ವವನ್ನು ದುರ್ಬಲಗೊಳಿಸುತ್ತದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಪಾಳಯಗಳು ಎರಡೂ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು. ಹೀಗಾಗಿ ಇದು ಹೈಕಮಾಂಡ್ ಮತ್ತು ರಾಜ್ಯ ಘಟಕ ಎರಡಕ್ಕೂ ಒಂದು ಸೂಕ್ಷ್ಮ ಪರಿಸ್ಥಿತಿಯಾಗಿದೆ. ಫಲಿತಾಂಶಗಳು ಸಿದ್ದರಾಮಯ್ಯಗೆ ವರದಾನವಾಗಬಹುದು, ಆದರೆ, ಪಕ್ಷದಲ್ಲಿ ಕೆಲವು ಅನಿಶ್ಚಿತತೆಗೆ ಕಾರಣವಾಗಬಹುದು ಎಂದು ರಾಜಕೀಯ ವಿಶ್ಲೇಷಕ ಡಾ. ಸಂದೀಪ್ ಶಾಸ್ತ್ರಿ ಹೇಳಿದ್ದಾರೆ.
ಪ್ರತಿಯೊಂದು ರಾಜ್ಯದ ರಾಜಕೀಯವೂ ವಿಭಿನ್ನವಾಗಿರುತ್ತದೆ. ಬಿಹಾರದಲ್ಲಿ ಎನ್ಡಿಎ ಉತ್ತಮವಾಗಿ ಕಾರ್ಯನಿರ್ವಹಿಸಿದರು ಎಂಬ ಕಾರಣಕ್ಕೆ ಕರ್ನಾಟಕದಲ್ಲಿ ಪರಿಸ್ಥಿತಿ ಬದಲಾಗುವುದಿಲ್ಲ. ಇದು ಖಂಡಿತವಾಗಿಯೂ ಕಾಂಗ್ರೆಸ್ ತನ್ನ ಕಾರ್ಯತಂತ್ರವನ್ನು ಮರುಮೌಲ್ಯಮಾಪನ ಮಾಡುವಂತೆ ಒತ್ತಾಯಿಸುತ್ತದೆ.
ಕರ್ನಾಟಕ ಮತ್ತು ತೆಲಂಗಾಣವನ್ನು ಹೊರತುಪಡಿಸಿದರೆ, ಉಳಿದೆಡೆ ಪಕ್ಷವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ. ತಮಿಳುನಾಡಿನಂತಹ ರಾಜ್ಯಗಳಲ್ಲಿಯೂ ಸಹ ಡಿಎಂಕೆಯನ್ನು ಬೆಂಬಲಿಸುತ್ತಿದ್ದಾರೆ. ಪಕ್ಷ, ಸರ್ಕಾರವನ್ನು ಹೇಗೆ ರಕ್ಷಿಸುವುದು ಮತ್ತು ಆಡಳಿತವನ್ನು ಹೇಗೆ ಮುಂದಕ್ಕೆ ಕೊಂಡೊಯ್ಯುವುದು ಎಂಬುದನ್ನು ನೋಡಬೇಕಾಗಿದೆ ಎಂದು ತಿಳಿಸಿದ್ದಾರೆ.