ಸಿದ್ದರಾಮಯ್ಯ 
ರಾಜಕೀಯ

'ಕಾಂಗ್ರೆಸ್‌ನೊಳಗೆ ಯಾವುದೇ ಬಣಗಳಿಲ್ಲ, ನಾನು ಸೇರಿದಂತೆ ಎಲ್ಲಾ ಲಿಂಗಾಯತ ನಾಯಕರು ಸಿದ್ದರಾಮಯ್ಯ ಅವರನ್ನೇ ಬೆಂಬಲಿಸುತ್ತೇವೆ'!

ಕಾಂಗ್ರೆಸ್ ಒಳಗೆ ಯಾವುದೇ ಬಣಗಳಿಲ್ಲ ಮತ್ತು ಸಿದ್ದರಾಮಯ್ಯ ಅಥವಾ ಶಿವಕುಮಾರ್ ಅವರನ್ನು ಬೆಂಬಲಿಸುವ ಪ್ರತ್ಯೇಕ ಗುಂಪುಗಳಿಲ್ಲ. ಎಲ್ಲರೂ ಕಾಂಗ್ರೆಸ್‌ಗೆ ಸೇರಿದವರು.

ಕೊಪ್ಪಳ: ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಹೆಚ್ಚುತ್ತಿರುವ ಅಸಮಾಧಾನದ ನಡುವೆ, ಆರು ಬಾರಿ ಶಾಸಕ ಮತ್ತು ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮಂಗಳವಾರ, ರಾಜ್ಯದಲ್ಲಿ ಯಾವುದೇ ಅಧಿಕಾರ ಹಂಚಿಕೆ ಒಪ್ಪಂದವಾಗಿಲ್ಲ ಮತ್ತು ಐದು ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ಹೇಳಿದರು.

ಹಾಲಿ ಮುಖ್ಯಮಂತ್ರಿಯನ್ನು ಬದಲಾಯಿಸುವ ಯಾವುದೇ ಪ್ರಯತ್ನವನ್ನು ತಾನು ಸಕ್ರಿಯವಾಗಿ ಪ್ರಶ್ನಿಸುವುದಾಗಿ ರಾಯರೆಡ್ಡಿ ಒತ್ತಿ ಹೇಳಿದರು.

ವರದಿಗಾರರೊಂದಿಗೆ ಮಾತನಾಡಿದ ಅವರು, 'ಅಧಿಕಾರ ಹಂಚಿಕೆಯ ಕುರಿತು ತಮ್ಮ ನಡುವೆಯೇ ಅಗ್ರಿಮೆಂಟ್ ಮಾಡಿಕೊಂಡರೆ, ಅದನ್ನು ಕಾಂಟ್ರಾಕ್ಟ್ ಎಂದು ಪರಿಗಣಿಸಬೇಕೇ?. ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇನ್ನೂ ಅಧಿಕೃತವಾಗಿ ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ' ಎಂದರು.

'ಯಾವುದೇ ಬದಲಾವಣೆಗಳನ್ನು ಮಾಡಬೇಕಾದರೆ, ಅವುಗಳನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಮಾಡಬೇಕು. ಬದಲಾವಣೆಗಳು ಅಗತ್ಯವಿದೆ ಎಂದು ಅವರು ನಮಗೆ ಹೇಳಿದರೆ, ಈ ಬದಲಾವಣೆಗಳು ಏಕೆ ಅಗತ್ಯ ಎಂದು ನಾನು ಪ್ರಶ್ನಿಸುತ್ತೇನೆ. ಮೊದಲೇ ಭರವಸೆ ನೀಡಲಾಗಿತ್ತು ಎಂದು ಅವರು ಹೇಳಿದರೆ, ಅದನ್ನು ಮೊದಲು ಏಕೆ ತಿಳಿಸಿಲ್ಲ ಎಂದು ನಾನು ಮತ್ತಷ್ಟು ಪ್ರಶ್ನಿಸುತ್ತೇನೆ' ಎಂದು ಹೇಳಿದರು.

'ವ್ಯಕ್ತಿಗಳ ನಡುವಿನ ಖಾಸಗಿ ಒಪ್ಪಂದಗಳನ್ನು ಔಪಚಾರಿಕ ಒಪ್ಪಂದಗಳೆಂದು ಪರಿಗಣಿಸಲಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆ. ನನಗೆ ತಿಳಿದ ಮಟ್ಟಿಗೆ, ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ' ಎಂದು ಆರೋಪಿಸಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹುಮತದ ಬೆಂಬಲವನ್ನು ಪಡೆದ ನಂತರ, ಮೇ 20, 2023 ರಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹೆಚ್ಚಿನ ಸದಸ್ಯರ ಬೆಂಬಲದೊಂದಿಗೆ ಅವರು ಆಯ್ಕೆಯಾಗಿದ್ದರೆ, ಈಗ ಅವರನ್ನು ಬದಲಿಸುವ ಬಗ್ಗೆ ಚರ್ಚೆಗಳು ಏಕೆ? ಎಂದು ಪ್ರಶ್ನಿಸಿದರು.

'ಚರ್ಚೆಗಳು ನಡೆದಿವೆ ಎಂದು ಅವರು ಹೇಳುತ್ತಾರೆ, ಆದರೆ ನಮಗೆ ಅವುಗಳ ಬಗ್ಗೆ ಎಂದಾದರೂ ತಿಳಿಸಲಾಗಿದೆಯೇ? ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅಧಿಕಾರ ಹಂಚಿಕೆ ಮಾಡಿಕೊಳ್ಳುತ್ತಾರೆ ಎಂದು ನಮಗೆ ತಿಳಿಸಿಲ್ಲ. ಪರಿಸ್ಥಿತಿ ಹೀಗಿರುವಾಗ, ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಶಿವಕುಮಾರ್ ಕೂಡ ಮುಖ್ಯಮಂತ್ರಿಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಟಿಕೆಟ್ ಹಂಚಿಕೆಯ ಸಮಯದಲ್ಲಿ ಅವರು ತಮ್ಮ ಆಪ್ತರನ್ನು ಬೆಂಬಲಿಸಿರಬಹುದು ಮತ್ತು ಅವರೀಗ ಶಿವಕುಮಾರ್ ಅವರ ಹೆಸರು ತೆಗೆದುಕೊಂಡು ಹುದ್ದೆಗೆ ಬೇಡಿಕೆ ಇಡುವುದು ಸಹಜ' ಎಂದು ರಾಯರೆಡ್ಡಿ ಹೇಳಿದರು.

ಕಾಂಗ್ರೆಸ್ ಒಳಗೆ ಯಾವುದೇ ಬಣಗಳಿಲ್ಲ ಮತ್ತು ಸಿದ್ದರಾಮಯ್ಯ ಅಥವಾ ಶಿವಕುಮಾರ್ ಅವರನ್ನು ಬೆಂಬಲಿಸುವ ಪ್ರತ್ಯೇಕ ಗುಂಪುಗಳಿಲ್ಲ. ಎಲ್ಲರೂ ಕಾಂಗ್ರೆಸ್‌ಗೆ ಸೇರಿದವರು. ಯಾವುದೇ ನಾಯಕರು ಮುಖ್ಯಮಂತ್ರಿ ಅಥವಾ ಸಚಿವರಾಗಲು ಆಶಿಸುವುದು ಸಹಜ. ಸರ್ಕಾರ ಎರಡೂವರೆ ವರ್ಷಗಳನ್ನು ಪೂರೈಸಿದ ನಂತರ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂಬ ಯಾವುದೇ ಪ್ರಸ್ತಾಪದ ಬಗ್ಗೆ ನನಗೆ ತಿಳಿದಿಲ್ಲ ಎಂದು ಅವರು ಹೇಳಿದರು.

'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಲ್ಲ ಲಿಂಗಾಯತ ಶಾಸಕರು ಮತ್ತು ಸಮುದಾಯದ ಬೆಂಬಲವಿದೆ. ಲಿಂಗಾಯತ ಸಮುದಾಯದ ಯಾರಾದರೂ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿದ್ದಾರೆಯೇ? ಸಮುದಾಯದ ಎಲ್ಲ ಪ್ರಮುಖ ಸ್ವಾಮೀಜಿಗಳು ಇತ್ತೀಚೆಗೆ ಅವರನ್ನು ಆಶೀರ್ವದಿಸಿದ್ದಾರೆ. ಸಿದ್ದರಾಮಯ್ಯ ಒಬ್ಬ ಸಮಾಜವಾದಿ ಮತ್ತು ಬಸವಣ್ಣನವರ ಬೋಧನೆಗಳನ್ನು ಅನುಸರಿಸುತ್ತಾರೆ. ಅವರು ಯಾವುದೇ ಇತರ ಲಿಂಗಾಯತ ನಾಯಕರಿಗಿಂತ ಹೆಚ್ಚಾಗಿ ಬಸವಣ್ಣನವರ ಆದರ್ಶಗಳನ್ನು ಎತ್ತಿಹಿಡಿಯುತ್ತಾರೆ. ಈ ಕಾರಣಕ್ಕಾಗಿ, ನಾನು ಸೇರಿದಂತೆ ಎಲ್ಲ ಲಿಂಗಾಯತರು ಅವರನ್ನು ಬೆಂಬಲಿಸುತ್ತೇವೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT