ತೀವ್ರ ಬೆಂಕಿ ಹೊತ್ತಿಸಿದ 'ಉತ್ತರಾಧಿಕಾರಿ' ಕಿಡಿ 
ರಾಜಕೀಯ

ತೀವ್ರ ಬೆಂಕಿ ಹೊತ್ತಿಸಿದ 'ಉತ್ತರಾಧಿಕಾರಿ' ಕಿಡಿ: ಯತೀಂದ್ರ ದಾಳಕ್ಕೆ 'ಕೈ' ನಾಯಕರು ಸಿಡಿಮಿಡಿ; ಮುಂದುವರಿದ ಡಿಕೆಶಿ 'ಮೌನಕ್ರಾಂತಿ'!

ಯತೀಂದ್ರ ಹುಚ್ಚನಾಗಿದ್ದಾನೆ. ಶಿವಕುಮಾರ್ ಸಿಎಂ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ, ಈ ಸಂಬಂಧ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಮದ್ದೂರು ಶಾಸಕ ಉದಯ್ ಕದಲೂರು ತಿಳಿಸಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಎಂಎಲ್‌ಸಿ ಡಾ. ಯತೀಂದ್ರ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ತಂದೆಯ ಸೈದ್ಧಾಂತಿಕ ಉತ್ತರಾಧಿಕಾರಿಯಾಗಲು ಅರ್ಹರು ಎಂದು ಹೇಳಿರುವುದು ರಾಜಕೀಯ ವಲಯಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಬಿಹಾರ ವಿಧಾನಸಭಾ ಚುನಾವಣೆಯ ನಂತರ ನವೆಂಬರ್ ಮಧ್ಯದಲ್ಲಿ ಬದಲಾವಣೆಯ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಸಿದ್ದರಾಮಯ್ಯ ಅವರ ಸಂಪುಟ ಪುನರ್ರಚನೆ ಅಥವಾ ಅಧಿಕಾರ ವರ್ಗಾವಣೆಯಾಗಲಿದೆ ಎಂಬ ಮಾತುಗಳು ಪಕ್ಷದೊಳಗೆ ಕೇಳಿ ಬರುತ್ತಿವೆ. ಇದೆಲ್ಲದರ ನಡುವೆ ಸಿಎಂ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣಗಳು ನಾಯಕತ್ವ ಸಂಬಂಧ ಜಗಳ ಮುಂದುವರಿಸಿವೆ.

ನಾನು ಯತೀಂದ್ರ ಅವರನ್ನು ಕೇಳಿದೆ ಮತ್ತು ಅವರು ಮುಂದಿನ ಸಿಎಂ ಯಾರು ಆಗಬೇಕು ಎಂಬುದರ ಬಗ್ಗೆ ಮಾತನಾಡಿಲ್ಲ, ಬದಲಾಗಿ ಸೈದ್ಧಾಂತಿಕ ನೆಲೆಯಲ್ಲಿ ಮಾತನಾಡಿದ್ದಾರೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ನವೆಂಬರ್ 20, 2025 ರಂದು ಸಿದ್ದರಾಮಯ್ಯ ತಮ್ಮ ಎರಡೂವರೆ ವರ್ಷ ಅಧಿಕಾರ ಪೂರ್ಣಗೊಳಿಸಿದ ನಂತರ ಮುಖ್ಯಮಂತ್ರಿಯಾಗುವ ನಿರೀಕ್ಷೆಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, "ನಮ್ಮ ಪಕ್ಷದಲ್ಲಿ ಶಿಸ್ತಿಗೆ ಆದ್ಯತೆ. ನಾನು ಈಗ ಮಾತನಾಡುವುದಿಲ್ಲ, ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ" ಎಂದು ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಎಲ್ಲದಕ್ಕೂ ನಿರ್ಲಿಪ್ತವಾಗಿರುವ ಶಿವಕುಮಾರ್ ಸಮಯ ಬಂದಾಗ ಮಾತನಾಡುವುದಾಗಿ, ಅಲ್ಲಿಯವರೆಗೂ ಮೌನ ಕ್ರಾಂತಿ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆ. ಇದರರ್ಥ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಮತ್ತು ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಚರ್ಚಿಸುವ ಸಾಧ್ಯತೆಯಿದೆ.

ಯತೀಂದ್ರ ಅವರ ಹೇಳಿಕೆಯಿಂದ ಶಿವಕುಮಾರ್ ಗೆ ಅನುಕೂಲವಾಗಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಶಿವಕುಮಾರ್ ಬೆಂಬಲಿಗರಿಗಿಂತ ಸಿದ್ದರಾಮಯ್ಯ ಬಣದ ನಾಯಕರು ಈ ಅಧಿಕಾರದ ಆಟದಲ್ಲಿ ಮಿತಿಮೀರಿ ವರ್ತಿಸುತ್ತಿದ್ದಾರೆ. ಹೀಗಾಗಿ ಯತೀಂದ್ರ ಅವರ ಹೇಳಿಕೆಯಿಂದ ಮುಂದಿನ ವಿಧಾನಸಭಾ ಚುನಾವಣೆ ನಡೆಯುವ 2028 ರಲ್ಲಿಯೂ ತಮ್ಮ ನಾಯಕನಿಗೆ ಪ್ರಮುಖ ಹುದ್ದೆ ಸಿಗದಿರಬಹುದು ಎಂದು ಶಿವಕುಮಾರ್ ಅವರ ನಿಷ್ಠಾವಂತ ಶಾಸಕರು ಚಿಂತಿತರಾಗಿದ್ದಾರೆ.

ರಾಮನಗರದ ಶಾಸಕರಾದ ಇಕ್ಬಾಲ್ ಹುಸೇನ್ ಮತ್ತು ಚನ್ನಗಿರಿಯ ಬಸವರಾಜು ವಿ. ಶಿವಗಂಗಾ ಅವರು ಯತೀಂದ್ರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿಕೆ ನೀಡಿದ್ದಕ್ಕಾಗಿ ಇಬ್ಬರಿಗೂ ಈ ಹಿಂದೆ ಶೋಕಾಸ್ ನೋಟಿಸ್ ನೀಡಲಾಗಿದೆ.

ಯತೀಂದ್ರ ಹೇಳಿಕೆ 'ಚಮತ್ಕಾರ' (ಮ್ಯಾಜಿಕ್) ಮಾಡಿದರೆ ನಮ್ಮ ಹೇಳಿಕೆ 'ಬಲತ್ಕಾರ' (ಬಲವಂತ)ವೇ" ಎಂದು ಇಕ್ಬಾಲ್ ಹುಸೇನ್ ಪ್ರಶ್ನಿಸಿದ್ದಾರೆ. ಯತೀಂದ್ರ ಅವರ ಹೇಳಿಕೆ ಅಪಕ್ವವಾಗಿದೆ. ಅವರು ಮುಖ್ಯಮಂತ್ರಿಯ ಮಗನಾಗಿ ಅದನ್ನು ಹೇಳಬಾರದಿತ್ತು. ಅವರು ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

ಮಾಜಿ ಶಾಸಕರಾಗಿ ಮತ್ತು ಈಗ ಎಂಎಲ್‌ಸಿ ಆಗಿರುವ ಯತೀಂದ್ರ ಅವರ ಹೇಳಿಕೆ ಬಾಲಿಶವಾಗಿದೆ. ನನ್ನಂತಹ ಇತರರ ನಾಯಕರು ಅವರನ್ನೇ ಅನುಸರಿಸಿ ಇದೇ ರೀತಿಯ ಹೇಳಿಕೆಗಳನ್ನು ನೀಡುತ್ತಾರೆ. ಅವರು ಸಿಎಂ ಮಗ ಎಂದ ಮಾತ್ರಕ್ಕೆ ಹೈಕಮಾಂಡ್ ಕ್ರಮ ಕೈಗೊಳ್ಳದಿದ್ದರೇ ಹೇಗೆ ಎಂದು ಶಿವಗಂಗಾ ಪ್ರಶ್ನಿಸಿದ್ದಾರೆ.

ಯತೀಂದ್ರ ಹುಚ್ಚನಾಗಿದ್ದಾನೆ. ಶಿವಕುಮಾರ್ ಸಿಎಂ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ, ಈ ಸಂಬಂಧ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಮದ್ದೂರು ಶಾಸಕ ಉದಯ್ ಕದಲೂರು ತಿಳಿಸಿದ್ದಾರೆ.

ಯತೀಂದ್ರ ಅವರ ಮಾತು ಮಿತಿಯಲ್ಲಿ ಇರಬೇಕು, ಜವಾಬ್ದಾರಿಯುತವಾಗಿ ಮಾತನಾಡಬೇಕು. ಏನೇನೋ ಹೇಳಿ, ಪಕ್ಷದಲ್ಲಿ ಗೊಂದಲ ಮೂಡಿಸಬಾರದು. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿ ಎಂದು ಹೈಕಮಾಂಡ್‌ ಹೇಳಿದರೆ ಅದನ್ನು ನಾವು ಪಾಲಿಸುತ್ತೇವೆ ಎಂದು ಕುಣಿಗಲ್ ಶಾಸಕ ಡಾ. ರಂಗನಾಥ್ ಹೇಳಿದ್ದಾರೆ.

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಎಂಎಲ್‌ಸಿ-ಮಗ ರಾಜೇಂದ್ರ ಯತೀಂದ್ರ ಹೇಳಿಕೆಯನ್ನು ಸಮರ್ಥಿಸಿಕೊಂಡರು, ಅಹಿಂದ ಸಮುದಾಯದ ಸದಸ್ಯ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಆಗಬೇಕೆಂದು ಯತೀಂದ್ರ ಬಯಸಿದ್ದರು. ಸತೀಶ್ ಸಿಎಂ ಆದರೆ ನಮಗೂ ಸಂತೋಷ. ಬಿಹಾರ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಮತ್ತಷ್ಟು ರಾಜಕೀಯ ಬೆಳವಣಿಗೆಗಳಾಗುತ್ತವೆ, ತಮ್ಮ ತಂದೆ ಮತ್ತೆ ಸಂಪುಟಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಆಶಾವಾದ ವ್ಯಕ್ತ ಪಡಿಸಿದ್ದಾರೆ.

ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ ಮಾತನಾಡಿ, ನಾನು ಯಾವುದೇ ಬಣಕ್ಕೆ ಸೇರಿದವನಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ಅವರನ್ನು ಸಮಾನವಾಗಿ ನೋಡುತ್ತೇನೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ಗೆ ಯಾರೂ ಅನಿವಾರ್ಯವಲ್ಲ. "ಮಾಜಿ ಪ್ರಧಾನಿ ಇಂದಿರಾ ಗಾಂಧಿ ನಿಧನರಾದಾಗ, ಅವರ ನಂತರ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬ ಗೊಂದಲವಿತ್ತು. ಅನೇಕ ನಾಯಕರು ಹೊರಹೊಮ್ಮಿದರು. ಕಾಂಗ್ರೆಸ್ ಸಿದ್ಧಾಂತಕ್ಕೆ ಬದ್ಧರಾಗಿರುವ ಅನೇಕ ನಾಯಕರಿದ್ದಾರೆ ಮತ್ತು ಅಂತಹ ಪರಿಸ್ಥಿತಿ (ಮುಖ್ಯಮಂತ್ರಿ ಹುದ್ದೆಯಲ್ಲಿ ಬದಲಾವಣೆ) ಎದುರಾದರೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ನೀಡಿರುವ ಹೇಳಿಕೆ ಕೂತೂಹಲ ಮೂಡಿಸಿದೆ. ಒಟ್ಟಾರೆ ಎಲ್ಲರ ಕಣ್ಣು ಈಗ ನವೆಂಬರ್ ಕ್ರಾಂತಿಯತ್ತ ನೆಟ್ಟಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆಗ ಸಿದ್ಧಾರ್ಥ್, ಈಗ CJ Roy': 'ತೆರಿಗೆ ಭಯೋತ್ಪಾದನೆ'; ಐಟಿ ದಾಳಿ ಕುರಿತು ಕೇಂದ್ರಕ್ಕೆ ಉದ್ಯಮಿ Mohandas Pai ಪತ್ರ! Video

CCL 2026: ಬೆಂಗಾಲ್ ಟೈಗರ್ಸ್ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಗೆಲುವು

T20 World Cup 2026: 'ಟೂರ್ನಿ ಆಡ್ತೇವೆ.. ಆದ್ರೆ ಭಾರತದ ವಿರುದ್ಧ ಆಡಲ್ಲ'.. ಫೆ.15ರ ಪಂದ್ಯ ನಿಷೇಧ, ಐಸಿಸಿಗೆ PCB ಹೊಸ ತಲೆನೋವು!

U19 World Cup: ಪಾಕಿಸ್ತಾನವನ್ನು ಬಗ್ಗು ಬಡಿದು ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಭಾರತ, ಸೆಮಿಸ್‌ನಲ್ಲಿ ಅಫ್ಘಾನ್ ಜೊತೆ ಗುದ್ದಾಟ!

ಇನ್ಮುಂದೆ ಷೇರು ಮರುಖರೀದಿ ಲಾಭಕ್ಕೂ ತೆರಿಗೆ! capital gain tax ಎಂದು ಪರಿಗಣಿಸುವ ಘೋಷಣೆ

SCROLL FOR NEXT