ಕೊಯಮತ್ತೂರು: ಇಂಡಿಯಾ ಒಕ್ಕೂಟ ಒಟ್ಟಾಗಿ ಉಪ ರಾಷ್ಟ್ರಪತಿ ಚುನಾವಣೆ ಎದುರಿಸಲಿದೆ. ನಾವು ಆತ್ಮಸಾಕ್ಷಿಯ ಮತಗಳನ್ನು ಕೋರಿದ್ದೇವೆ. ಇಂಡಿಯಾ ಒಕ್ಕೂಟ ಮತ್ತು ವಿರೋಧ ಪಕ್ಷಗಳು NDA ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ವಿರುದ್ಧ ಮತ ಚಲಾಯಿಸುತ್ತವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ತಮಿಳುನಾಡಿನ ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಮಂಗಳವಾರದಂದು ಉಪರಾಷ್ಟ್ರಪತಿ ಚುನಾವಣೆಯ ಬಗ್ಗೆ ಮಾತನಾಡಿದ ಅವರು, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನವಾಗುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ, ನಾನು ಆತ್ಮಸಾಕ್ಷಿಯ ಮತಗಳ ಬಗ್ಗೆ ನಂಬಿಕೆಯಿಟ್ಟಿದ್ದೇನೆ. ಅಡ್ಡ ಮತದಾನದ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ” ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಆಧಾರ್ ಗುರುತಿನ ಚೀಟಿ 12ನೇ ದಾಖಲೆ ಎಂದು ಪರಿಗಣಿಸಿರುವ ಬಗ್ಗೆ ಕೇಳಿದಾಗ, “ಹೌದು, ಆಧಾರ್ ಗುರುತಿನ ಚೀಟಿ ಪ್ರತಿಯೊಬ್ಬ ಭಾರತೀಯರಿಗೂ ಅತ್ಯವಶ್ಯವಾದ ದಾಖಲೆ. ಈ ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದ ಈ ಯೋಜನೆ ಪ್ರತಿಯೊಬ್ಬ ನಾಗರಿಕರಿಗೂ ಅನುಕೂಲ ಮಾಡಿದೆ” ಎಂದು ಹೇಳಿದರು.