ಬೆಂಗಳೂರು: ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಮತ್ತು ರಾಜಕೀಯ ಲಾಭಕ್ಕಾಗಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಮೊದಲ ಬಜೆಟ್ನಿಂದಲೇ ಲ್ಯಾಂಡ್ ಸ್ಟಾಂಪ್ ಡ್ಯೂಟಿ, ಅಬಕಾರಿ ತೆರಿಗೆ, ಮೋಟಾರ್ ವಾಹನ ತೆರಿಗೆಗಳನ್ನು ಹೆಚ್ಚಿಸಿ ತೆರಿಗೆ ಭಾರವನ್ನು ಹೆಚ್ಚಿಸಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ಬಸವರಾಜ ಬೊಮ್ಮಾಯಿಯವರು ತೀವ್ರವಾಗಿ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಲ ಮಾಡುವುದರಲ್ಲಿ ದಾಖಲೆಯ ವೀರ. ಯಾರ ಅವಧಿಯಲ್ಲಿ ಎಷ್ಟು ಸಾಲ ಮಾಡಲಾಗಿದೆ ಎನ್ನುವ ಎಲ್ಲ ದಾಖಲೆಗಳನ್ನು ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದರು.
ನಮ್ಮ ಕಾಲದಲ್ಲಿ 50 ಸಾವಿರ ಕೋಟಿ ಸಾಲ ಮಾಡಿದ್ದರೆ, ಅವರ ಅವಧಿಯಲ್ಲಿ 1 ಲಕ್ಷ 40 ಸಾವಿರ ಕೋಟಿ ಸಾಲ ಮಾಡಲಾಗಿದೆ; ಇದನ್ನು ಅವರೇ ಬಜೆಟ್ನಲ್ಲಿ ಮಂಡಿಸಿದ್ದಾರೆ. ಈಗ ಚುನಾವಣೆ ಸಂದರ್ಭದಲ್ಲಿ ಸುಳ್ಳು ಹೇಳಿ ವಾಸ್ತವಾಂಶವನ್ನು ಮರೆಮಾಚುವ ಬದಲು, ದಾಖಲೆಗಳ ಆಧಾರದಲ್ಲಿ ನಿಜವನ್ನು ಮಾತನಾಡಬೇಕು ಎಂದು ಹೇಳಿದ್ದಾರೆ.
14ನೇ ಹಣಕಾಸು ಆಯೋಗದ ಷರತ್ತುಗಳನ್ನು ನಿರ್ಧರಿಸುವಾಗ ನಿಮ್ಮದೇ ಸರ್ಕಾರ ಇತ್ತು. ಅದನ್ನು ಅಂತಿಮಗೊಳಿಸುವಾಗ ನಿಮ್ಮ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಐದು ಮಂದಿ ಕಾಂಗ್ರೆಸ್ ಸಚಿವರು ಇದ್ದರು. ಆಗ ಮೌನವಾಗಿದ್ದವರು, ಈಗ ಅನ್ಯಾಯವಾಗಿದೆ ಎಂದು ಹೇಳುವುದು ಬೂಟಾಟಿಕೆ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಜಿಎಸ್ಟಿಯನ್ನು ಮೊದಲು ತಂದಿದ್ದು ಯುಪಿಎ ಸರ್ಕಾರ. ಅದರ ಕಾನೂನುಗಳು ಅವರ ಅವಧಿಯಲ್ಲೇ ಜಾರಿಗೆ ಬಂದವು. ಜಿಎಸ್ಟಿ ಕುರಿತ ಎಲ್ಲಾ ನಿರ್ಧಾರಗಳು ಜಿಎಸ್ಟಿ ಕೌನ್ಸಿಲ್ನಲ್ಲಿ ಆಗುತ್ತವೆ. ಜಿಎಸ್ ಟಿ ಕೌನ್ಸಿನಲ್ ನಲ್ಲಿ ಶಾಸ್ವತ ಸದಸ್ಯರಾಗಿ ರಾಜ್ಯ ಸರ್ಕಾರ ಇರುತ್ತದೆ. ಇಂತಹ ಪ್ರಮುಖ ವಿಚಾರ ಇದ್ದಾಗ ಮುಖ್ಯಮಂತ್ರಿ ಗಳು ಒಂದು ಬಾರಿಯೂ ಜಿಎಸ್ ಟಿ ಕೌನ್ಸಿಲ್ ಸಭೆಗೆ ಹೋಗಿಲ್ಲ. ಅಲ್ಲಿ ಕಳಿಸಿರುವ ನಮ್ಮ ರಾಜ್ಯದ ಪ್ರತಿನಿಧಿಗಳು ರಾಜ್ಯದ ಹಿತ ಕಾಪಾಡಲು ಏನು ಕ್ರಮ ತೆಗೆದುಕೊಂಡಿದ್ದಾರೆ. ಅಲ್ಲಿ ಏನೂ ಮಾತನಾಡದೇ ಹೊರಗಡೆ ರಾಜಕಾರಣಕ್ಕಾಗಿ ಈ ಮಾತುಗಳನ್ನಾಡುವಂಥದ್ದು ಸರಿಯಲ್ಲ.
ಶೇ.52 ಎಸ್ಜಿಎಸ್ಟಿಯಾಗಿ ರಾಜ್ಯಕ್ಕೆ ಬರುತ್ತದೆ, ಶೇ.40 ಸಿಜಿಎಸ್ಟಿಯಾಗಿ ಕೇಂದ್ರಕ್ಕೆ ಹೋಗುತ್ತದೆ. ಇದು ಸಿಎಂ ಸಿದ್ದರಾಮಯ್ಯ ಅವರಿಗೆ ಕಾಣುತ್ತಿಲ್ಲವೇ? ಈ ಕಾನೂನಿನ ಮೂಲಕರ್ತರಾದ ಕಾಂಗ್ರೆಸ್ಸಿಗರೇ ಕರ್ನಾಟಕಕ್ಕೆ ಆಗಿರುವ ಅನ್ಯಾಯದಲ್ಲಿ ದೊಡ್ಡ ಪಾತ್ರವಹಿಸಿದ್ದಾರೆ ಎಂಬುದನ್ನು ಯಾರೂ ಮರೆಯಲಾರರು. ಕರ್ನಾಟಕವು ಮೊದಲಿನಿಂದಲೂ ಅತಿ ಹೆಚ್ಚು ತೆರಿಗೆ ಕೊಡುವ ರಾಜ್ಯವಾಗಿದೆ. ಸೆಸ್ ಅನ್ನು ಸಂವಿಧಾನಬದ್ದವಾಗಿ ನಿರ್ದಿಷ್ಟ ಉದ್ದೇಶಕ್ಕಾಗಿ ಸಂಗ್ರಹಿಸುವ ವ್ಯವಸ್ಥೆಯನ್ನು ತಂದವರೇ ಕಾಂಗ್ರೆಸ್. 1960ರ ದಶಕದಲ್ಲಿ ತಂದಿರುವ ಈ ಸೆಸ್ ಈಗ ಅನ್ಯಾಯವಾಗಿದೆ ಎಂದು ಹೇಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
ಸಿಎಂ ಆರ್ಥಿಕ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇತ್ತೀಚಿನ ಸಿಎಜಿ ವರದಿಯಲ್ಲಿ ಸುಮಾರು 25 ಸಾವಿರ ಕೋಟಿ ಬಾಕಿ ಇರುವುದಾಗಿ ಉಲ್ಲೇಖಿಸಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಏನು ಹೇಳುತ್ತಾರೆ? ಶ್ರೀಮಂತರಿಂದ ಬಾಕಿ ಇರುವ ಈ ತೆರಿಗೆಯನ್ನು ವಸೂಲಿ ಮಾಡಲು ಅವರಿಗೆ ಧೈರ್ಯ ಇಲ್ಲವೇ ಅಥವಾ ಮನಸ್ಸಿಲ್ಲವೇ?
ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಮತ್ತು ರಾಜಕೀಯ ಲಾಭಕ್ಕಾಗಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಮೊದಲ ಬಜೆಟ್ನಿಂದಲೇ ಲ್ಯಾಂಡ್ ಸ್ಟಾಂಪ್ ಡ್ಯೂಟಿ, ಅಬಕಾರಿ ತೆರಿಗೆ, ಮೋಟಾರ್ ವಾಹನ ತೆರಿಗೆಗಳನ್ನು ಹೆಚ್ಚಿಸಿ ತೆರಿಗೆ ಭಾರವನ್ನು ಹೆಚ್ಚಿಸಿದ್ದಾರೆ. ಅಭಿವೃದ್ಧಿಯನ್ನು ನಿಲ್ಲಿಸಿ ಸಾಲ ಹೆಚ್ಚಿಸಿರುವ ಶ್ರೇಯಸ್ಸು ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಂಸದರ ಮೇಲೆ ಆರೋಪ ಮಾಡುವುದು ಎಷ್ಟು ಸರಿ?
ಕೇಂದ್ರದಿಂದ ರೈಲ್ವೆ ಯೋಜನೆಗಳಿಗೆ ಯುಪಿಎ ಅವಧಿಯಲ್ಲಿ 700 ಕೋಟಿ ಬರುತ್ತಿದ್ದರೆ, ಈಗ 7000 ಕೋಟಿ ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಕಳೆದ ಆರು ವರ್ಷಗಳಲ್ಲಿ ಸುಮಾರು 30 ಸಾವಿರ ಕೋಟಿ ಬಂದಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಸುಮಾರು 62 ಲಕ್ಷ ರೈತರಿಗೆ ಸಾವಿರಾರು ಕೋಟಿ ರೂಪಾಯಿ ನೆರವು ದೊರೆತಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಆರೋಗ್ಯ ಸೇವೆಗಳೂ ಲಭ್ಯವಾಗುತ್ತಿವೆ. ಹೀಗೆ ಕೇಂದ್ರದಿಂದ ಬರುತ್ತಿರುವ ಅನೇಕ ಯೋಜನೆಗಳನ್ನು ಜನರಿಗೆ ತಿಳಿಸಲಾಗುತ್ತಿಲ್ಲ. ಜನರ ಬದುಕು ದುಸ್ತರವಾಗಿದ್ದು, ಅದರ ಹೊರೆ ಕಾಂಗ್ರೆಸ್ ಸರ್ಕಾರದ ಮೇಲೆ ಇದೆ. ಈ ಸರ್ಕಾರವನ್ನು ಯಾವಾಗ ಬದಲಿಸುತ್ತೇವೆ ಎಂಬ ನಿರೀಕ್ಷೆಯಲ್ಲಿ ಕರ್ನಾಟಕದ ಜನತೆ ಇದ್ದಾರೆ ಎಂಬುದನ್ನು ಮರೆಯಬಾರದು ಎಂದು ತಿರುಗೇಟು ನೀಡಿದ್ದಾರೆ.