ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆ ಆರಂಭವಾಗಿದ್ದು, ಸಿಎಂ ಬದಲಾವಣೆ ಮತ್ತು ಸಂಪುಟ ಪುನಾರಚನೆ ಸೇರಿದಂತೆ ಏನೇ ರಾಜಕೀಯ ಬದಲಾವಣೆಗಳಿದ್ದರೂ ಕಾಂಗ್ರೆಸ್ನಲ್ಲಿ ನಾಲ್ವರ ನಿರ್ಧಾರವೇ ಅಂತಿಮವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸಿದ್ದರಾಮಯ್ಯನವರೇ ಮುಂದಿನ ಎರಡು ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಎಂದು ಗೃಹ ಸಚಿವ ಪರಮೇಶ್ವರ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ನಾಯಕತ್ವ ಬದಲಾವಣೆ ವಿಚಾರವಾಗಿ ನಾನು ಅಥವಾ ಬೇರೆ ಯಾರೇ ಆಗಲಿ ಏನೇ ಹೇಳಿಕೆ ನೀಡಿದರೂ ಅದು ಅಪ್ರಸ್ತುತ. ಅದಕ್ಕೆ ಯಾವುದೇ ಮಹತ್ವ ಇರುವುದಿಲ್ಲ ಎಂದರು.
ನಾಯಕತ್ವ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರು ನಿರ್ಧಾರ ಮಾಡುತ್ತಾರೆ. ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದುವೇ ಅಂತಿಮ ಎಂದರು.
ಇದೇ ವೇಳೆ ಗ್ಯಾಸ್ ಸಮಸ್ಯೆ ಬಗ್ಗೆ ಮಾತನಾಡಿದ ಸಚಿವರು, “ಆಟೋ ಚಾಲಕರು, ಸಾಮಾನ್ಯ ಜನರು, ಸಣ್ಣಪುಟ್ಟ ಕಾರ್ಖಾನೆಗಳು ಇವತ್ತು ಆತಂಕದಲ್ಲಿದ್ದಾರೆ. ಇದಕ್ಕೆ ಯಾರು ಕಾರಣ? ಕೇಂದ್ರ ಸರ್ಕಾರ ತಾನೇ ಕಾರಣ. ರಾಜ್ಯ ಸರ್ಕಾರ ಅನಿಲ ಉತ್ಪಾದನೆ ಮಾಡುವುದಿಲ್ಲ. ಪೆಟ್ರೋಲಿಯಂ ಉತ್ಪನ್ನಗಳನ್ನು ಉತ್ಪಾದನೆ ಹಾಗೂ ಪೂರೈಕೆಯನ್ನು ರಾಜ್ಯ ಸರ್ಕಾರ ಮಾಡುವುದಿಲ್ಲ. ಎಲ್ಲ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ ಎಂದರು.
ಬಿಜೆಪಿ ನಾಯಕರು ಸಂಸತ್ತಿನಲ್ಲಿ ಪೆಟ್ರೋಲ್ ಉತ್ಪನ್ನಗಳ ದಾಸ್ತಾನು 75 ರಿಂದ 100 ದಿನಕ್ಕೆ ಆಗುವಷ್ಟು ಇದೆ ಅಂತ ಹೇಳಿಕೆ ಕೊಟ್ಟಿದ್ದಾರೆ. ಹರ್ದೀಪ್ ಸಿಂಗ್ ಪೂರಿ ಅವರು ಎಲ್ಲಿ ಓಡಿ ಹೋಗಿದ್ದಾರೆ ಸ್ವಾಮಿ ಇವಾಗ? ಎಂದು ತರಾಟೆಗೆ ತೆಗೆದುಕೊಂಡರು.
ದೇಶದಲ್ಲಿ ಇವರ ಪ್ರಕಾರ ಎಲ್ಲನೂ ಸರಿ ಇದೆ, ಯಾವುದೇ ಸಮಸ್ಯೆ ಇಲ್ಲ ಎಂದಾದರೆ ಏಕಾಏಕಿ ಪ್ರಧಾನಿ ನರೇಂದ್ರ ಮೋದಿ ಅವರು ಯಾಕೆ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ? ಕೋವಿಡ್ ಮಾದರಿಯಲ್ಲಿ ಯುದ್ದ ಪರಿಸ್ಥಿತಿಯನ್ನು ನಿರ್ವಹಣೆ ಮಾಡೋಣ ಎಂದು ಯಾಕಾಗಿ ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.