ಬೆಂಗಳೂರು: ನಾನ್ಯಾಕೆ ಜೆಡಿಎಸ್ ಪಕ್ಷಕ್ಕೆ ಹೋಗಲಿ, ಬಿಟ್ಟು ಬಂದ ಪಕ್ಷಕ್ಕೆ ನಾನ್ಯಾಕೆ ಮತ್ತೆ ಹೋಗಲಿ, ಕಾಂಗ್ರೆಸ್ ಪಕ್ಷ ನನಗೇನು ಕಡಿಮೆ ಮಾಡಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಕೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳ ನಂತರ ಜಮೀರ್ ಅಹ್ಮದ್ ಖಾನ್ ಪಕ್ಷ ತೊರೆಯುತ್ತಾರೆ ಎಂಬ ವದಂತಿಗೆ ಪ್ರತಿಕ್ರಿಯಿಸಿದರು.
2017ರಲ್ಲಿ ನಾನು ಕಾಂಗ್ರೆಸ್ ಗೆ ಬಂದೆ. 2018ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ನಾನು ಮಂತ್ರಿಯಾಗುತ್ತೇನೆ ಎಂದು ನಿರೀಕ್ಷೆನೂ ಇಟ್ಟಿರಲಿಲ್ಲ, ಯಾರ ಬಳಿ ಕೇಳಿರಲಿಲ್ಲ ಕೂಡ. ಆಗ ನನ್ನನ್ನು ಮಂತ್ರಿ ಮಾಡಿ ಕಾಂಗ್ರೆಸ್ ಪಕ್ಷ ನನಗೆ 5 ಖಾತೆ ಕೊಟ್ಟಿತ್ತು. ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ನನಗೆ ವಕ್ಫ್ ಖಾತೆ ಕೊಟ್ಟಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ನನಗೆ 5 ಪ್ರಮುಖ ಖಾತೆಗಳನ್ನು ಕೊಟ್ಟು ಸಚಿವರನ್ನಾಗಿ ಮಾಡಿದರು. ಮತ್ತೆ 2023ರಲ್ಲಿ ನನಗೆ 4 ಖಾತೆ ಕೊಟ್ಟರು. ಜೆಡಿಎಸ್ ಗೆ ಹೋಗಲು ಕಾಂಗ್ರೆಸ್ ನನಗೆ ಏನು ಕಡಿಮೆ ಮಾಡಿದೆ ಎಂದರು.