ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಸಿಎಂ ಹುದ್ದೆ ಬದಲಾವಣೆ ಕುರಿತು ಚರ್ಚೆಗಳು ತೀವ್ರಗೊಂಡಿದ್ದು, ಈ ನಡುವೆ ಸಚಿವ ಕೆ. ವೆಂಕಟೇಶ್ ಅವರು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಬಣ ಕುರಿತು ಟೀಕೆ ಮಾಡಿದ್ದಾರೆ.
ಸಿಎಂ ಆಗಬೇಕೆಂಬ ಆಸೆ ಹೊಂದುವುದು ತಪ್ಪಲ್ಲ, ಆದರೆ. ಆ ಹುದ್ದೆ ಈಗ ಖಾಲಿ ಇಲ್ಲ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನಮಾನ ಬಲವಾಗಿದ್ದು, ನಾಯಕತ್ವ ಬದಲಾವಣೆಯ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಹೇಳಿದ್ದಾರೆ.
ಸಚಿವ ಸಂಪುಟ ಪುನರ್ರಚನೆ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ಕುರಿತ ನಿರ್ಧಾರ ಪಕ್ಷದ ಹೈಕಮಾಂಡ್ ಕೈಯಲ್ಲಿದ್ದು, ಸರಿಯಾದ ಸಮಯದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. “ಈಗ ಆ ಸಮಯ ಬಂದಿಲ್ಲ” ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಾಯಕ ಸಲೀಮ್ ಅಹ್ಮದ್ ಅವರು ಸಚಿವ ಸಂಪುಟದ 50 ಶೇಕಡಾ ಸದಸ್ಯರನ್ನು ಕೈಬಿಡಬೇಕು ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅದು ವೈಯಕ್ತಿಕ ಅಭಿಪ್ರಾಯ ಮಾತ್ರ, ಪಕ್ಷದ ಅಧಿಕೃತ ನಿಲುವಲ್ಲ ಎಂದರು.
ಸಿಎಂ ಮತ್ತು ಡಿಸಿಎಂ ನಡುವೆ ಅಧಿಕಾರ ಹಂಚಿಕೆ ಒಪ್ಪಂದವಿದೆ ಎಂಬ ವರದಿಗಳ ಬಗ್ಗೆ ಮಾತನಾಡಿ, ತಮಗೆ ಅಂತಹ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.
ಸಚಿವರನ್ನು ಉಳಿಸಿಕೊಳ್ಳುವುದು ಅಥವಾ ಕೈಬಿಡುವುದು ಸಂಪೂರ್ಣವಾಗಿ ಹೈಕಮಾಂಡ್ ತೀರ್ಮಾನವಾಗಿದ್ದು, ಯಾವುದೇ ನಿರ್ಧಾರಕ್ಕೂ ತಾವು ಸಿದ್ಧ ಎಂದು ತಿಳಿಸಿದರು.
ಇದೇ ವೇಳೆ ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳನ್ನು ಅವರು ತಳ್ಳಿಹಾಕಿದ ಅವರು, ಪಕ್ಷದ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಬಳಿಕ ಪಶುಸಂಗೋಪನಾ ಇಲಾಖೆಯ ಪ್ರಮುಖ ಯೋಜನೆಗಳನ್ನು ಸಚಿವರು ವಿವರಿಸಿದರು. ಪಶುಗಳಲ್ಲಿ ಕಾಣಿಸಿಕೊಳ್ಳುವ ಕಾಲು-ಬಾಯಿ ರೋಗ ತಡೆಯಲು ವರ್ಷಕ್ಕೆ ಎರಡು ಬಾರಿ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.
ಮೈಸೂರು ಭಾಗದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡ ಈ ಅಭಿಯಾನವನ್ನು ಶನಿವಾರ ಬೆಳಗಾವಿಯಲ್ಲಿ ಆರಂಭಿಸಲಾಗಿದೆ ಎಂದರು.
ಪಶು ಮಾಲೀಕರಿಗೆ ಪರಿಹಾರವಾಗಿ ಗೋವು ಸತ್ತಲ್ಲಿ ರೂ.15,000 ಹಾಗೂ ಕುರಿ/ಮೇಕೆ ಸತ್ತಲ್ಲಿ ರೂ.5,000 ನೀಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 30 ಗೋಶಾಲೆಗಳನ್ನು ಸ್ಥಾಪಿಸಲಾಗಿದ್ದು, ಖಾಸಗಿ ಗೋಶಾಲೆಗಳಿಗೆ ಸಹ ಸರ್ಕಾರ ಅಗತ್ಯ ನೆರವು ಒದಗಿಸುತ್ತಿದೆ ಎಂದು ಹೇಳಿದರು.