ಕುಮಟಾ: 2024ರ ಲೋಕಸಭೆ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಮೂರನೇ ಬಾರಿಗೆ ಟಿಕೆಟ್ ಸಿಗದೇ ಇದ್ದಾಗ ಡಿ.ಕೆ. ಶಿವಕುಮಾರ್ ಅವರು ಕುಣಿಗಲ್ ಶಾಸಕ ರಂಗನಾಥ್ ಅವರ ಮೊಬೈಲ್ ನಿಂದ ಕರೆ ಮಾಡಿ ಕಾಂಗ್ರೆಸ್ಗೆ ಬಂದುಬಿಡು, ನಿನಗೆ ಟಿಕೆಟ್ ಕೊಡುತ್ತೇವೆ ಎಂದರು ಎಂದು ಮೈಸೂರು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಮ್ಮಪ್ಪನೇ ಆರ್ ಎಸ್ ಎಸ್ , ನಮಗೂ ನಿಮಗೂ ಸಿದ್ಧಾಂತ ಆಗಿಬರಲ್ಲ, ಆಗಲ್ಲ ಎಂದು ತಿರಸ್ಕರಿಸಿದ್ದೆ. 5 ವರ್ಷ ಬಿಟ್ಮೇಲೆ ವಾಪಾಸ್ ಹೋಗು ಬೇಕಾದರೆ, ಆದರೆ ಈಗ ಸರ್ವೈವಲ್ ಮುಖ್ಯ. ಇದಕ್ಕೆ ಒಪ್ಪದೇ ತಿರಸ್ಕರಿಸಿದ್ದೇನೆ ಎಂದರು. ನಂತರ 4 ಮಂದಿ ಕಾಂಗ್ರೆಸ್ ಶಾಸಕರು ಕೂಡ ನನ್ನ ಬೆನ್ನತ್ತಿದ್ದರು, ಆದರೆ ನಾನು ಯಾರ ಮಾತಿಗೂ ಪ್ರಭಾವಿತನಾಗದೆ ಬಿಜೆಪಿಯಲ್ಲಿಯೇ ಮುಂದುವರಿದೆ ಎಂದು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಿನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಂದಿನ ಪರಿಸ್ಥಿತಿಗೆ ಕಾಂಗ್ರೆಸ್ ಗೆ ಹೋಗಿದ್ದರೆ ನಾನೇ ಗೆಲ್ಲುತ್ತಿದ್ದೆ. ನಾನು ಕ್ಷೇತ್ರದಲ್ಲಿ ಮಾಡಿದ್ದ ಕೆಲಸದಿಂದ ಜನರು ಕೈಹಿಡಿಯುತ್ತಿದ್ದರು.ಆದರೆ ಯುವಕರು ನನ್ನ ಬೆನ್ನ ಹಿಂದೆ ಇದ್ದಾರೆ, ನನ್ನ ಬಗ್ಗೆ ಬೇರೆ ರೀತಿ ಯೋಚನೆ ಮಾಡಿದ್ದಾರೆ, ಹಾಗಾಗಿ ಹೋಗಲಿಲ್ಲ, ಆದರೆ ಕಾಂಗ್ರೆಸ್ ನಲ್ಲಿ ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದರು ಎಂದಿದ್ದಾರೆ.
2028ರಲ್ಲಿ ವಿಧಾನಸಭೆ ಚುನಾವಣೆಗೆ ನಿಂತು ಗೆಲ್ಲುತ್ತೇನೆ
2028ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ವಿಧಾನಸೌಧ ಪ್ರವೇಶ ಮಾಡುತ್ತೇನೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ನಾನು ಬಡತನದಿಂದ ಮೇಲೆ ಬಂದವನು. ಬಾಲಕನಾಗಿದ್ದಾಗ ಹೊಟೇಲ್ ಗೆ ಹಾಲು ಹಾಕುತ್ತಿದ್ದೆ, ನಾನು ಇಂದು ಪತ್ರಕರ್ತನಾಗಿ ಹಾಗೂ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದೇನೆ, ಸಾಮಾನ್ಯ ಯುವಕನಾಗಿದ್ದ ನಾನು ಇವತ್ತು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದರೆ ನನ್ನಂಥ ಬಡ, ಸಾಮಾನ್ಯ ಹುಡುಗರು ಮುಂದೆ ಬರಬಹುದು ಎಂಬುದನ್ನು ಇಂದಿನ ಯುವಜನತೆಗೆ ಸಾರಲು ಈ ಮಾತನ್ನು ಹೇಳುತ್ತಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳಿದರು.