ಇತ್ತೀಚಿಗೆ ದೆಹಲಿಯಲ್ಲಿ ಉಗ್ರ ಪ್ರತಿಭಟನೆ ನಡೆಸಿದ ಜೆನ್-ಝಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ವಿರುದ್ಧ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್ ನಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಮಾಜಿ ಸಂಸದೆ ರಮ್ಯಾ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಬೆಂಬಲ ನೀಡಿದ್ದರು.
ಇದೀಗ ಯುವಜನತೆ, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಮಮಂದಿರದ ವಿಚಾರವನ್ನು ಉಲ್ಲೇಖಿಸಿ ಕಂಗನಾ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಮ್ಯಾ, "ಗೌರವದ ಬಗ್ಗೆ ಉಪದೇಶ ನೀಡುವ ಮೊದಲು ತಮ್ಮ ಹಿಂದಿನ ಹೇಳಿಕೆಗಳನ್ನು ನೆನಪಿಸಿಕೊಳ್ಳಬೇಕು" ಎಂದು ತಿರುಗೇಟು ನೀಡಿದ್ದಾರೆ.
ರಮ್ಯಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕಂಗನಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "2026ರ ಪ್ರಮುಖ ಹೈಲೈಟ್ ಎಂದರೆ ಕಂಗನಾ ರಣಾವತ್ ಜನರೇಷನ್ Zಗೆ ಗೌರವದ ಬಗ್ಗೆ ಪಾಠ ಮಾಡಿರುವುದು. ಕೆಲವರಿಗೆ ಮೋದಿ ದೇವರಂತಿದ್ದಾರೆ, ಹೀಗಾಗಿ ಅವರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಅವರು ಹೇಳುತ್ತಾರೆ" ಎಂದು ವ್ಯಂಗ್ಯವಾಡಿದ್ದಾರೆ.
ಇದರ ಜೊತೆಗೆ, 2020ರ ರೈತರ ಪ್ರತಿಭಟನೆ ವೇಳೆ ಕಂಗನಾ ಕೊಟ್ಟ ವಿವಾದಾತ್ಮಕ ಹೇಳಿಕೆಯನ್ನು ರಮ್ಯಾ ಮತ್ತೆ ನೆನಪಿಸಿದ್ದಾರೆ. ಆ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 82 ವರ್ಷದ ವಯೋವೃದ್ಧ ರೈತ ಮಹಿಳೆಯ ಬಗ್ಗೆ ಕಂಗನಾ "100 ರೂಪಾಯಿಗೆ ಸಿಗುವ ಮಹಿಳೆ" ಎಂದು ಹೇಳಿಕೆ ನೀಡಿದ್ದರು. ಅದನ್ನೇ ಉಲ್ಲೇಖಿಸಿರುವ ರಮ್ಯಾ, "ಕೋಟ್ಯಂತರ ಭಾರತೀಯರಿಗೆ ಆ ರೈತ ಮಹಿಳೆ ಅನ್ನದಾತೆ, ದೇವರ ಸಮಾನ. ಆಗ ಯಾರ ಭಾವನೆಗೂ ಧಕ್ಕೆಯಾಗಲಿಲ್ಲವೇ?" ಎಂದು ರಮ್ಯಾ ಕಟುವಾಗಿ ಪ್ರಶ್ನಿಸಿದ್ದಾರೆ.
ಇದರೊಂದಿಗೆ ರಾಮಮಂದಿರದ ವಿಚಾರವನ್ನೂ ಪ್ರಸ್ತಾಪಿಸಿರುವ ರಮ್ಯಾ, "ರಾಮ ನನ್ನ ಪಾಲಿಗೆ ಭಗವಂತ. ಒಬ್ಬ ಹಿಂದುವಾಗಿ ರಾಮಮಂದಿರದ ವಿಚಾರದಲ್ಲಿ ನನ್ನ ಧಾರ್ಮಿಕ ಭಾವನೆಗಳಿಗೆ ನೋವಾಗಿದೆ. ಅದಕ್ಕೆ ಎಲ್ಲಿದೆ ಆಕ್ರೋಶ?" ಎಂದು ಪ್ರಶ್ನಿಸುವ ಮೂಲಕ ಕಂಗನಾ ಅವರ ದ್ವಂದ್ವ ನಿಲುವಿನ ಬಗ್ಗೆ ಕಿಡಿಕಾರಿದ್ದಾರೆ.
ರಮ್ಯಾ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಕೆಲವರು ರಮ್ಯಾ ಅವರ ಅಭಿಪ್ರಾಯವನ್ನು ಬೆಂಬಲಿಸುತ್ತಿದ್ದರೆ, ಇನ್ನೂ ಕೆಲವರು ಕಂಗನಾ ಪರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.