ರಾಮನಗರ: ಬಿಡದಿ ಟೌನ್ಶಿಪ್ ಯೋಜನೆ ಹಾಗೂ ನೈಸ್ (NICE) ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿರುವ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರು ಭಾನುವಾರ ಸಚಿವ ಎಚ್ಸಿ ಬಾಲಕೃಷ್ಣ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಎಚ್ಸಿ ಬಾಲಕೃಷ್ಣ ಅಕ್ರಮವಾಗಿ 500 ಕೋಟಿ ರೂ. ಹಣ ಲೂಟಿ ಮಾಡಿ, ನನ್ನ ಕಾಲು ಹಿಡಿಯಲು ಬಂದಿದ್ದ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
"ಈಗ ನನ್ನ ವಿರುದ್ಧ ಮಾತನಾಡುತ್ತಿರುವ ಇಲ್ಲಿನ ಶಾಸಕ ಎಚ್ಸಿ ಬಾಲಕೃಷ್ಣ, ಈ ಹಿಂದೆ ಕಾಂಟ್ರ್ಯಾಕ್ಟರ್ ನೆಪದಲ್ಲಿ 500ರಿಂದ 600 ಕೋಟಿ ರೂಪಾಯಿ ಲೂಟಿ ಹೊಡೆದಿದ್ದರು. ಈ ಬಗ್ಗೆ ಮಾತನಾಡದಂತೆ ನನ್ನ ಕಾಲು ಹಿಡಿದು ಬೇಡಿಕೊಂಡಿದ್ದರು. ಆ ದಿನಗಳನ್ನು ಬಹುಶಃ ಅವರು ಮರೆತಿರಬೇಕು. ಇವರಿಂದ ನಾನು ಕಲಿಯುವಂತದ್ದು ಏನೂ ಇಲ್ಲ" ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಡಿನ ರೈತರ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗುವ ಶಕ್ತಿಯನ್ನು ಭಗವಂತ ನಮಗೆ ಕರುಣಿಸಿದ್ಧಾನೆ. ನಾವು ಈ ಶಕ್ತಿಯನ್ನು ಬಳಸಿಕೊಂಡು ಜನರ ಪರವಾಗಿ ಹೋರಾಟ ಮಾಡುತ್ತೇವೆ. ಬಿಡದಿ ಟೌನ್ಶಿಪ್ ವಿವಾದ, ನೈಸ್ ಅಕ್ರಮ ಟೋಲ್ಗೆ ಸಂಬಂಧಿಸಿದಂತೆ ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ನೈಸ್ ರಸ್ತೆ ಟೋಲ್ ನಿಲ್ಲಿಸುವಂತೆ ನಾನೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಕಾಂಗ್ರೆಸ್ ಮಹಾನುಭಾವರು ಸಲಹೆ ನೀಡಿದ್ದಾರೆ. ಇದು ಅವರ ಜ್ಞಾನದ ಕೊರತೆಯನ್ನು ಎತ್ತಿ ತೋರಿಸುತ್ತದೆ. ನೈಸ್ ರಸ್ತೆ ಸಂಪೂರ್ಣವಾಗಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿಯೇ ಇಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ನಾವು ತೊಡೆ ತಟ್ಟಿದ್ದೇವೆ" ಎಂದು ಹೇಳಿದರು.