ರಾಮನಗರ: ಗುತ್ತಿಗೆದಾರರೊಬ್ಬರ ₹600 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬಾಲಕೃಷ್ಣ ಅವರು ನನ್ನ ಕಾಲಿಡಿಯಲು ಬಂದಿದ್ದರು ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಅಸಹ್ಯಕರವಾದುದು. ಅದರಲ್ಲಿ ನನ್ನ ತಪ್ಪಿರುವುದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವೆ. ಇಲ್ಲದಿದ್ದರೆ ಅವರು ನಿವೃತ್ತಿ ಪಡೆಯುತ್ತಾರಾ?’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಬಾಲಕೃಷ್ಣ ಸವಾಲು ಹಾಕಿದರು.
ರಾಮನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಾನು ತಪ್ಪು ಮಾಡಿದ್ದರೆ ಅವರ ಕಾಲು ಹಿಡಿಯುತ್ತೇನೆ. ಆದರೆ ತಪ್ಪೇ ಮಾಡದೆ ಏಕೆ ಕಾಲು ಹಿಡಿಯಬೇಕು? ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿ ಆರೋಪ ಸಾಬೀತುಪಡಿಸದಿದ್ದರೆ ಅವರೇ ರಾಜಕೀಯದಿಂದ ನಿವೃತ್ತಿಯಾಗಬೇಕು ಎಂದರು.
ಕುಮಾರಸ್ವಾಮಿ ಅವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು. ಆಧಾರರಹಿತ ಆರೋಪ ಹಾಗೂ ಉಡಾಫೆ ಮಾತುಗಳನ್ನು ಜನರು ಕೇಳುವುದಿಲ್ಲ ಎಂದು ತಿಳಿಸಿದರು.
ನೈಸ್ ರಸ್ತೆ ವಿಚಾರವಾಗಿ ಜೆಡಿಎಸ್ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಬಾಲಕೃಷ್ಣ, ನೈಸ್ ರಸ್ತೆಗೂ ಸರ್ಕಾರಕ್ಕೂ ನೇರ ಸಂಬಂಧವಿಲ್ಲ ಎಂದರು.
ನೈಸ್ ವಿಚಾರದಲ್ಲಿ ಸರ್ಕಾರ ಸಬ್ ಕಮಿಟಿ ರಚಿಸಿದ್ದು, ಸಭೆ ಕರೆದ ಬಳಿಕ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುವುದು. ನ್ಯಾಯಾಲಯದಲ್ಲಿ ಏನು ತೀರ್ಮಾನವಾಗಿದೆ ಎಂಬುದರ ಆದೇಶವನ್ನು ತೋರಿಸಲಿ ಎಂದು ಅವರು ಸವಾಲು ಹಾಕಿದರು.
ನೈಸ್ ಯೋಜನೆಯನ್ನು ರಾಜ್ಯಕ್ಕೆ ತಂದವರು ಸನ್ಮಾನ್ಯ ದೇವೇಗೌಡರು. ಅವರು ಅಂಕಿತ ಹಾಕಿದ ಕೂಸು ಇಂದು ಬೃಹದಾಕಾರವಾಗಿ ಬೆಳೆದಿದೆ. ಹೀಗಾಗಿ ಈ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕು ಎಂದರು.
ನಮ್ಮ ನಾಯಕ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಕುಮಾರಸ್ವಾಮಿಗೆ ಹೊಟ್ಟೆ ತೊಳೆಸಿದಂತಾಗಿದೆ. ಅದಕ್ಕಾಗಿ, ನಿತ್ಯ ಒಬ್ಬೊಬ್ಬರ ಮೇಲೆ ಒಂದೊಂದು ಆರೋಪ ಮಾಡಿಕೊಂಡು ತಿರುಗುತ್ತಾರೆ. ಹಿಂದೆ ಮಹಾರಾಜರು ತೆಗಳುವುದಕ್ಕಾಗಿಯೇ ಕೆಲವರನ್ನು ನೇಮಿಸಿಕೊಳ್ಳುತ್ತಿದ್ದರು. ಅದೇ ರೀತಿ, ಕುಮಾರಸ್ವಾಮಿ ಅವರನ್ನು ನಾವು ನೇಮಿಸಿಕೊಂಡಿದ್ದೇವೆ ಎಂದು ವ್ಯಂಗ್ಯವಾಡಿದರು.
ಡಿ.ಕೆ. ಶಿವಕುಮಾರ್ ಅವರು ನೈಸ್ ರಸ್ತೆಯನ್ನು ವಶಕ್ಕೆ ಪಡೆಯುತ್ತಿದ್ದಾರೆ ಎಂಬ ಆರೋಪಕ್ಕೆ ಆಧಾರವೇನು ಎಂದು ಪ್ರಶ್ನಿಸಿದ ಅವರು, ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಸಾಕಷ್ಟು ಕೆಲಸಗಳಿವೆ. ಅದನ್ನು ಬಿಟ್ಟು ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಟೀಕಿಸುವುದೇ ಕೆಲಸವಾಗಿದೆ ಎಂದು ವ್ಯಂಗ್ಯವಾಡಿದರು.