ಕಾಂಗ್ರೆಸ್ ನಾಯಕರು  
ರಾಜಕೀಯ

BJP ಪಾದಯಾತ್ರೆಗೆ ಕೌಂಟರ್‌ ಕೊಡಲು ಕಾಂಗ್ರೆಸ್‌ ಮಾಸ್ಟರ್‌ ಪ್ಲ್ಯಾನ್; ನಾಗೇಂದ್ರ ಬೆನ್ನಿಗೆ ನಿಂತ ‘ಕೈ’ ಪಡೆ, ST ಸಮುದಾಯದ ಅಸ್ತ್ರ ಪ್ರಯೋಗಕ್ಕೆ ಮುಂದು..!

ತಾವು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಅವಕಾಶ ನೀಡುವಂತೆ ನಾಗೇಂದ್ರ ಪಕ್ಷದ ನಾಯಕತ್ವಕ್ಕೆ ಮನವಿ ಮಾಡಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಬಿಜೆಪಿಯನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗಲಿದೆ ಎಂಬುದು ಅವರ ವಾದವಾಗಿದೆ ಎನ್ನಲಾಗಿದೆ.

ಬೆಂಗಳೂರು: ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧ ಬಿಜೆಪಿ ನಡೆಸುತ್ತಿರುವ ಅಭಿಯಾನಕ್ಕೆ ರಾಜಕೀಯವಾಗಿ ತಿರುಗೇಟು ನೀಡಲು ಆಡಳಿತಾರೂಢ ಕಾಂಗ್ರೆಸ್‌ ತಂತ್ರ ರೂಪಿಸುತ್ತಿದೆ.

ನಾಗೇಂದ್ರ ಅವರನ್ನು ಗುರಿಯಾಗಿಸುವ ಮೂಲಕ ಬಿಜೆಪಿ ದಲಿತ ಹಾಗೂ ಪರಿಶಿಷ್ಟ ಪಂಗಡ (ST) ನಾಯಕರೊಬ್ಬರನ್ನು ಟಾರ್ಗೆಟ್‌ ಮಾಡುತ್ತಿದೆ ಎಂದು ಬಿಂಬಿಸಿ, ಆ ಸಮುದಾಯದ ಬೆಂಬಲ ಗಳಿಸಲು ಕಾಂಗ್ರೆಸ್‌ ಮುಂದಾಗಿದೆ ಎನ್ನಲಾಗಿದೆ.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿ ಒತ್ತಡ ಹೆಚ್ಚಿಸಿದ ಹಿನ್ನೆಲೆಯಲ್ಲಿ ನಾಗೇಂದ್ರ ಶುಕ್ರವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದರ ಬೆನ್ನಲ್ಲೇ ಕಾಂಗ್ರೆಸ್‌ ಸರ್ಕಾರದ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಬಿಜೆಪಿ ಸೆಪ್ಟೆಂಬರ್‌ 1ರಿಂದ ರಾಯಚೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸಿದೆ.

ಮೂಲಗಳ ಪ್ರಕಾರ, ಪರಿಶಿಷ್ಟ ಪಂಗಡದ ನಾಯಕ ಹಾಗೂ ನಾಯಕ ಸಮುದಾಯಕ್ಕೆ ಸೇರಿದ ನಾಗೇಂದ್ರ ಅವರು ರಾಜ್ಯದ 15 ಎಸ್‌ಟಿ ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಬಿಜೆಪಿಗೆ ತಿರುಗೇಟು ನೀಡುವ ಅಭಿಯಾನ ನಡೆಸುವ ಸಾಧ್ಯತೆಯಿದೆ. ಈ ಸಂಬಂಧ ಕಾಂಗ್ರೆಸ್‌ ಹೈಕಮಾಂಡ್‌ ಅನುಮತಿಗಾಗಿ ಅವರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಅಲ್ಲದೆ, ತಾವು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಅವಕಾಶ ನೀಡುವಂತೆ ನಾಗೇಂದ್ರ ಪಕ್ಷದ ನಾಯಕತ್ವಕ್ಕೆ ಮನವಿ ಮಾಡಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಬಿಜೆಪಿಯನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗಲಿದೆ ಎಂಬುದು ಅವರ ವಾದವಾಗಿದೆ ಎನ್ನಲಾಗಿದೆ. ಆದರೆ, ಹೈಕಮಾಂಡ್‌ ಈ ಬೇಡಿಕೆಯನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದ್ದು, ಬದಲಾಗಿ ಈ ಬೆಳವಣಿಗೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಹಾಗೂ ನಾಯಕ ಸಮುದಾಯದ ಆತಂಕಗಳನ್ನು ನಿವಾರಿಸುವ ಮಾರ್ಗಗಳ ಬಗ್ಗೆ ಕಾಂಗ್ರೆಸ್‌ ಚಿಂತನೆ ನಡೆಸುತ್ತಿದೆ.

ಇದೇ ವೇಳೆ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ. ಶ್ರೀರಾಮುಲು ಅವರು ನಾಯಕ ಸಮುದಾಯದಲ್ಲಿ ಮತ್ತೆ ಪ್ರಮುಖ ನಾಯಕರಾಗಿ ಹೊರಹೊಮ್ಮುವ ಸಾಧ್ಯತೆಯೂ ಇದೆ. ಸತತ ಚುನಾವಣಾ ಸೋಲುಗಳನ್ನು ಕಂಡಿರುವ ಶ್ರೀರಾಮುಲು, 2023ರ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ನಾಗೇಂದ್ರ ವಿರುದ್ಧವೂ ಸೋಲು ಅನುಭವಿಸಿದ್ದರು. ಇದೀಗ 2028ರ ಚುನಾವಣೆಯಲ್ಲಿ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ಸದ್ಯಕ್ಕೆ ನಾಗೇಂದ್ರ ಅವರನ್ನು ನೇರವಾಗಿ ಎದುರಿಸಲು ಅವರು ಉತ್ಸುಕರಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಇದೀಗ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ತಮ್ಮ ರಾಜಕೀಯ ಹಿಡಿತವನ್ನು ಅವರು ಮುಂದುವರಿಸಿಕೊಳ್ಳಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಇದರ ನಡುವೆ ಕಾಂಗ್ರೆಸ್‌ನ ಕೆಲ ನಾಯಕರಿಂದ ನಾಗೇಂದ್ರ ಅವರಿಗೆ ಅನುಕಂಪವೂ ವ್ಯಕ್ತವಾಗುತ್ತಿದೆ. ನಾಯಕ ಸಮುದಾಯಕ್ಕೆ ಸೇರಿದ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಶನಿವಾರ ಮಾತನಾಡಿ, ನಾಗೇಂದ್ರ ವಿರುದ್ಧದ ಪ್ರಕರಣ ಬಾಕಿ ಇರುವಾಗ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಬಾರದಿತ್ತು ಎಂದು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಕಚೇರಿಯಲ್ಲಿ ಭೇಟಿಯಾದ ಬಳಿಕ ಮಾತನಾಡಿದ ರಾಜಣ್ಣ, ನಾಗೇಂದ್ರ ಅವರನ್ನು ಎರಡನೇ ಬಾರಿಗೆ ‘ಬಲಿಪಶು’ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು.

ಮೊದಲನೆಯದಾಗಿ ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬಾರದಿತ್ತು. ಅವರ ರಾಜೀನಾಮೆಗೆ ಕಾರಣವಾಗಿದ್ದ ಪ್ರಕರಣ ಇನ್ನೂ ಜೀವಂತವಾಗಿದೆ. ನಾಗೇಂದ್ರ ಅವರ ಬಗ್ಗೆ ನನಗೆ ಅನುಕಂಪವಿದೆ. ಅವರನ್ನು ಎರಡನೇ ಬಾರಿಗೆ ಬಲಿಪಶು ಮಾಡಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಪ್ರವಾಹದ ರೌದ್ರಾವತಾರ; 5ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ; ಸಾವಿನ ಸಂಖ್ಯೆ 734ಕ್ಕೆ ಏರಿಕೆ, 2,498 ಮಂದಿ ನಾಪತ್ತೆ..!

ನೇಪಾಳ ಜಲಪ್ರಳಯ: ಕಠ್ಮಂಡು ತಲುಪಿದ ಭಾರತದ ಪರಿಹಾರ ಸಾಮಗ್ರಿ ಹೊತ್ತ 4ನೇ ವಿಮಾನ, ರಕ್ಷಣಾ ಸಾಧನ–ವಿಧಿವಿಜ್ಞಾನ ತಜ್ಞರ ತಂಡ ರವಾನೆ..!

Yash's 'Toxic: ಬಿಡುಗಡೆಯಾದ ನಾಲ್ಕನೇ ದಿನ ಧುರಂಧರ್' ದಾಖಲೆ ಉಡೀಸ್! ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?

ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ರು, ಇನ್ನೂ ಲೋಕಭವನಕ್ಕೆ ತಿಳಿಸದ ಸಿಎಂ ಡಿಕೆ ಶಿವಕುಮಾರ್! ಕುತೂಹಲಕಾರಿ ನಡೆ

ಅರ್ಬಾಜ್ ಪಟೇಲ್ ಗೆ ನಿಕ್ಕಿ ತಂಬೋಲಿ ಮೋಸ ಮಾಡಿದ್ರಾ? ಇನ್‌ಸ್ಟಾಗ್ರಾಮ್‌ನಲ್ಲಿ 'ಅನ್‌ಫಾಲೋ' ಬ್ರೇಕಪ್ ವದಂತಿ!