ಬೆಂಗಳೂರು: ದ್ವೇಷ ಭಾಷಣ, ನಕಲಿ ಸುದ್ದಿ, ತಪ್ಪು ಮಾಹಿತಿಯ ಹರಡುವಿಕೆ ಹಾಗೂ ದುರುದ್ದೇಶಿತಪೂರಿತ ಪ್ರಚಾರಗಳನ್ನು ತಡೆಗಟ್ಟಲು ಕೃತಕ ಬುದ್ಧಿಮತ್ತೆ (AI) ಆಧಾರಿತ ‘ಸೋಷಿಯಲ್ ಮೀಡಿಯಾ ಅನಾಲಿಟಿಕ್ಸ್ ಸೊಲ್ಯೂಷನ್’ ಅಭಿವೃದ್ಧಿಪಡಿಸುವ ಸರ್ಕಾರದ ನಿರ್ಧಾರವನ್ನು ಬಿಜೆಪಿ ಟೀಕಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು, ಸದ್ದಿಲ್ಲದೇ ಸಾರ್ವಜನಿಕರ ಮೇಲೆ ಕಣ್ಗಾವಲಿಡುವ ವ್ಯವಸ್ಥೆ ಜಾರಿ ಮಾಡುತ್ತಿದ್ದಾರೆಂದು ಟೀಕಿಸಿದ್ದಾರೆ.
ಸುಳ್ಳು ಸುದ್ದಿ ಮತ್ತು ಹಾನಿಕಾರ ಮಾಹಿತಿಯನ್ನು ಪತ್ತೆ ಮಾಡುವುದಕ್ಕಾಗಿ ಎಂದರೂ, ಜನ ಸಾಮಾನ್ಯರ ಸಾಮಾಜಿಕ ಮತ್ತು ವೈಯಕ್ತಿಕ ಡಿಜಿಟಲ್ ಸಂವಹನದೊಳಗೆ ಈ ತಂತ್ರಾಂಶ ಮೂಗು ತೂರಿಸುತ್ತದೆ ಎಂದು ಹೇಳಿದ್ದಾರೆ.
ಇದು ಸರ್ಕಾರಿ ಪ್ರಾಯೋಜಿತ ಕಣ್ಗಾವಲು. ಇದು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ಮತ್ತು ಖಾಸಗಿತನದ ಮೇಲಿನ ದಾಳಿ. ಕರ್ನಾಟಕವನ್ನು ಪೊಲೀಸ್ ರಾಜ್ಯವಾಗಿಸುವ ನಿಟ್ಟಿನಲ್ಲಿ ಒಂದು ಕ್ರೂರ ಹೆಜ್ಜೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರಕ್ಕೆ ಜನರ ಮುಕ್ತ ಅಭಿಪ್ರಾಯ ಮತ್ತು ಆಲೋಚನೆಗಳ ಬಗ್ಗೆ ಭಯವಿದೆ. ಹೀಗಾಗಿ ನಿಗಾ ಮತ್ತು ರಕ್ಷಣೆ ಇತ್ಯಾದಿ ಪದಗಳನ್ನು ಬಳಸುತ್ತಿದೆ. ಈ ಮೂಲಕ ಜನರನ್ನು ಬೆದರಿಸುವ, ಮಾಹಿತಿ ಸಂಗ್ರಹಿಸುವ ಮತ್ತು ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಿದೆ. ಇದನ್ನು ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ. ಈ ಹುನ್ನಾರವನ್ನು ಬಯಲಿಗೆಳೆಯುವ ಮೂಲಕ ಪ್ರಬಲವಾಗಿ ವಿರೋಧಿಸಲಾಗುವುದು ಎಂದು ಹೇಳಿದ್ದಾರೆ.