ಹಾಸನ: ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಅಲ್ಲಿನ ಶಿಸ್ತು ಪಾಲನಾ ಸಮಿತಿಯು ಪಕ್ಷದ ಒಳಗಿನ ಬೆಳವಣಿಗೆಗಳ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ. ಮಿತ್ರ ಪಕ್ಷಗಳ ಕಾರ್ಯಕರ್ತರು ಬೀದಿಯಲ್ಲಿ ನಿಂತು ಪರಸ್ಪರ ಗೌರವ ಕಳೆದುಕೊಳ್ಳುವಂತೆ ವರ್ತಿಸಬಾರದು ಎಂದು ಜೆಡಿಎಸ್ ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ ಬಗ್ಗೆ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮಲ್ಲಿರುವಂತೆ ಶಿಸ್ತುಪಾಲನಾ ಸಮಿತಿಯೂ ಬಿಜೆಪಿಯಲ್ಲೂ ಇದೆ. ಪಕ್ಷದ ವಿರುದ್ಧ ಅಶಿಸ್ತು ತೋರುವವರಿಗೆ, ಬೀದಿ ರಂಪಾಟ ಮಾಡುವವರಿಗೆ ಶಿಸ್ತು ಸಮಿತಿ ತಿದ್ದಿ, ಬುದ್ಧಿ ಹೇಳಲಿದೆ ಅಂದುಕೊಂಡಿದ್ದೇನೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.
ಇನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಾ.ರಾ. ಮಹೇಶ್ ಸ್ಪರ್ಧಿಸುತ್ತಾರೆಯೇ ಎಂಬ ಪ್ರಶ್ನೆಗೆ, ಸದ್ಯಕ್ಕೆ ಈ ವಿಷಯ ಅಪ್ರಸ್ತುತ. ಎಲ್ಲವೂ ಕಾಲವೇ ನಿರ್ಣಯಿಸುತ್ತದೆ ಎಂದರು. ಮುಂದಿನ ಚುನಾವಣೆಯು ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲೇ ನಡೆಯಲಿದೆ ಎಂಬುದು ಜನರ ಆಶಯವಾಗಿದೆ ಎಂದು ಹೇಳಿದರು.
ಈ ವೇಳೆ ವರಿಷ್ಠರು ಕಾರ್ಯಕರ್ತರ ಗೌರವ ಕಾಪಾಡುವ ಹಾಗೂ ಕ್ಷೇತ್ರ ಉಳಿಸಿಕೊಳ್ಳಲು ಆಯಾ ಸಂದರ್ಭಕ್ಕೆ ಒಳ್ಳೆಯ ತೀರ್ಮಾನ ತೆಗೆದು ಕೊಳ್ಳುತ್ತಾರೆಂದು ನಂಬಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
2028 ರ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ 130 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ರಾಜ್ಯಕ್ಕೆ ಬಿಜೆಪಿ ಸಿಎಂ ಇರುತ್ತಾರೆ ಎಂದು ಇತ್ತೀಚೆಗೆ ಪ್ರೀತಂ ಗೌಡ ಹೇಳಿದ್ದರು.
ಕುಮಾರಸ್ವಾಮಿ ರಾಜ್ಯ ರಾಜಕೀಯಕ್ಕೆ ಮರಳುತ್ತಾರೆಯೇ ಮತ್ತು ಮುಖ್ಯಮಂತ್ರಿಯಾಗುತ್ತಾರೆಯೇ ಎಂಬ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಿಖಿಲ್ ಹೇಳಿದರು. ಮೈತ್ರಿ ಬಗ್ಗೆ ಪ್ರೀತಂ ಮಾತನಾಡಲು ಅವರೇನು ಬಿಜೆಪಿ ಹೈಕಮಾಂಡ್ ಆಗಿದ್ದಾರೆಯೇ ಎಂದು ಅರಕಲಗೂಡು ಜೆಡಿಎಸ್ ಶಾಸಕ ಎ ಮಂಜು ಪ್ರಶ್ನಿಸಿದ್ದಾರೆ.