ಡಿಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ 
ರಾಜಕೀಯ

ಕಾಂಗ್ರೆಸ್ ಭವನಕ್ಕಾಗಿ ಸರ್ಕಾರಿ ಭೂಮಿ ಗುಳುಂ: ಜನರಿಗಿಲ್ಲದ ಜಾಗ, ಅತ್ಯಂತ ಕಡಿಮೆ ದರದಲ್ಲಿ ಹೇಗೆ ಲಭ್ಯವಾಯಿತು? ಸರ್ಕಾರದ ವಿರುದ್ಧ BJP ಗಂಭೀರ ಆರೋಪ

ರಾಜ್ಯದ ಜನತೆ ತೀವ್ರ ಸಂಕಷ್ಟದಲ್ಲಿದ್ದರೆ, ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ತನ್ನ ಪಕ್ಷದ ಆಸ್ತಿಯನ್ನು ಹೆಚ್ಚಿಸಿಕೊಳ್ಳುವ ಹಪಾಹಪಿ ನಿಲ್ಲುತ್ತಿಲ್ಲ. ಪ್ರತಿ ವಾರ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ತಪ್ಪದೇ ಚರ್ಚೆಗೆ ಬರುವ ವಿಷಯವೇನೆಂದರೆ, ಅದು ಕೇವಲ ಕಾಂಗ್ರೆಸ್ ಭವನಕ್ಕೆ ಜಾಗ ನೀಡುವುದು.

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಪಕ್ಷದ ಕಚೇರಿಗಳನ್ನು ಸ್ಥಾಪಿಸಲು ಕಾಂಗ್ರೆಸ್ 31 ಸರ್ಕಾರಿ ಜಾಗಗಳನ್ನು ಅಕ್ರಮವಾಗಿ ಪಡೆದುಕೊಂಡಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಈ ಕುರಿತು ಮಾತನಾಡಿರುವ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಸರ್ಕಾರ ಪಡೆದುಕೊಂಡ ಜಾಗಗಳನ್ನು ಸಂಬಂಧಿಸಿದ ಇಲಾಖೆಗೆ ಹಿಂತಿರುಗಿಸಬೇಕು ಎಂದು ಆಗ್ರಹಿಸಿದರು.

ಜನರಿಗಿಲ್ಲದ ಜಾಗ, ಅತ್ಯಂತ ಕಡಿಮೆ ದರದಲ್ಲಿ ಕಾಂಗ್ರೆಸ್ ಭವನಕ್ಕೆ ಹೇಗೆ ಲಭ್ಯ? ಇದು ಜನಕಲ್ಯಾಣ ಸರ್ಕಾರವೋ ಅಥವಾ ‘ಕಾಂಗ್ರೆಸ್ ಭವನ’ ಮಂಜೂರಾತಿ ಕಂಪನಿಯೋ? ಪ್ರಸ್ತುತ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಜನಹಿತವನ್ನು ಮರೆತು, ಕೇವಲ ಸ್ವಪಕ್ಷದ ಹಿತಾಸಕ್ತಿಗಷ್ಟೇ ಸೀಮಿತವಾಗಿರುವುದು ಅತ್ಯಂತ ದುರ್ದೈವದ ಸಂಗತಿ. ಅಭಿವೃದ್ಧಿಯ ಮಂತ್ರ ಜಪಿಸಬೇಕಾದ ಸರ್ಕಾರವು ಇಂದು “ಸೈಟ್ ಲೂಟಿ”ಯ ಮಂತ್ರವನ್ನೇ ಜಪಿಸುತ್ತಿದೆ.

ರಾಜ್ಯದ ಜನತೆ ತೀವ್ರ ಸಂಕಷ್ಟದಲ್ಲಿದ್ದರೆ, ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ತನ್ನ ಪಕ್ಷದ ಆಸ್ತಿಯನ್ನು ಹೆಚ್ಚಿಸಿಕೊಳ್ಳುವ ಹಪಾಹಪಿ ನಿಲ್ಲುತ್ತಿಲ್ಲ. ಪ್ರತಿ ವಾರ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ತಪ್ಪದೇ ಚರ್ಚೆಗೆ ಬರುವ ವಿಷಯವೇನೆಂದರೆ, ಅದು ಕೇವಲ “ಕಾಂಗ್ರೆಸ್ ಭವನಕ್ಕೆ ಜಾಗ ನೀಡುವುದು”. ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕಾದ ಸರ್ಕಾರವು ಕೇವಲ “ಜಮೀನು ಲೂಟಿ”ಯ ನೀಲನಕ್ಷೆ ತಯಾರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.

ಬಡವರಿಗಿಲ್ಲದ ಭೂಮಿ, ಕಾಂಗ್ರೆಸ್ ಭವನಕ್ಕೆ ಹೇಗೆ ಲಭ್ಯ? - ದಶಕಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಲು, ವಸತಿ ರಹಿತ ಬಡವರಿಗೆ ಜಾಗ ನೀಡಲು, ಭೂ ರಹಿತ ಪರಿಶಿಷ್ಟ ವರ್ಗಗಳಿಗೆ ‘ಭೂ ಒಡೆತನ ಯೋಜನೆ’ಯಡಿ ಭೂಮಿ ಹಂಚಲು ಸರ್ಕಾರಕ್ಕೆ ಭೂಮಿ ಕೊರತೆ ಎಂಬ ಸಮಸ್ಯೆಯಿದೆ.

ಆದರೆ, ಜಮೀನು ಮಂಜೂರು ಮಾಡಲು ಕಾನೂನಿನಲ್ಲಿ ಯಾವುದೇ ಅವಕಾಶ ಇಲ್ಲದಿದ್ದರೂ, ಸರ್ಕಾರಿ ಇಲಾಖೆಗಳು ಕಾಂಗ್ರೆಸ್ ಭವನಕ್ಕೆ ಜಮೀನನ್ನು ಮಂಜೂರು ಮಾಡುವ ಪ್ರಸ್ತಾವವನ್ನು ತಿರಸ್ಕರಿಸಿದರೂ ಕೂಡಾ, ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, ಪ್ರತಿ ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕಾಂಗ್ರೆಸ್ ಭವನ ನಿರ್ಮಿಸಲು ಮಾತ್ರ ಅತ್ಯಂತ ಕಡಿಮೆ ದರದಲ್ಲಿ ಸರ್ಕಾರಿ ಜಮೀನುಗಳು ರಾಜಾರೋಷವಾಗಿ ಮಂಜೂರಾಗುತ್ತಿವೆ ಎಂಬುದು ಸರ್ಕಾರವೇ ಸದನಕ್ಕೆ ಅಧಿಕೃತವಾಗಿ ನೀಡಿದ ಉತ್ತರದಿಂದ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಸರ್ಕಾರದ ಬೊಕ್ಕಸದಿಂದ ಅಥವಾ ಸಾರ್ವಜನಿಕ ಆಸ್ತಿಯಿಂದ ನಿರ್ಮಾಣವಾಗುವ ಈ ಭವನಗಳಿಂದ ಜನಸಾಮಾನ್ಯರಿಗೆ ಸಿಗುವ ಲಾಭವೇನು ಎಂಬುದಕ್ಕೆ ಸರ್ಕಾರ ಉತ್ತರಿಸಬೇಕು.

ಇದು ನಿರ್ಗತಿಕರಿಗೆ ಆಸರೆ ನೀಡುವ ಪುನರ್ವಸತಿ ಕೇಂದ್ರವೇ? ಹಸಿದವರಿಗೆ ಅನ್ನ ನೀಡುವ ಅನ್ನಪೂರ್ಣ ತಾಣವೇ?ಮಕ್ಕಳಿಗೆ ಅಕ್ಷರ ಕಲಿಸುವ ಶಿಕ್ಷಣ ಸಂಸ್ಥೆಯೇ? ಯುವಕರಿಗೆ ಉದ್ಯೋಗ ನೀಡುವ ಕೌಶಲ್ಯಾಭಿವೃದ್ಧಿ ಕೇಂದ್ರವೇ? ಕ್ರೀಡಾಪಟುಗಳ ಭವಿಷ್ಯ ರೂಪಿಸುವ ಕ್ರೀಡಾಂಗಣವೇ? ಇದು ಸಾರ್ವಜನಿಕ ಆಸ್ತಿಯ ಅಧಿಕೃತ ಲೂಟಿ ಅಲ್ಲವೇ? ಯಾರ ಹಿತಕ್ಕಾಗಿ ಈ ಕಾಂಗ್ರೆಸ್ ಭವನ? ಮಾನ್ಯ ಮುಖ್ಯಮಂತ್ರಿಗಳೇ, ಈ ಕಾಂಗ್ರೆಸ್ ಭವನದಿಂದ ಜನಸಾಮಾನ್ಯರಿಗೆ ಸಿಗುವ ಪ್ರಯೋಜನಗಳೇನು? ಸರ್ಕಾರಿ ಜಮೀನನ್ನು ನಿಮ್ಮ ಪಕ್ಷದ ಆಸ್ತಿಯನ್ನಾಗಿ ಮಾಡಿಕೊಳ್ಳಲು ನಿಮಗೆ ಯಾವ ಹಕ್ಕಿದೆ? ಇದು ಕಾಂಗ್ರೆಸ್ ಸರ್ಕಾರವು ಬಡವರ ಜೀವನದ ಮೇಲೆ ನಡೆಸುತ್ತಿರುವ ಸವಾರಿ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇವುಗಳಲ್ಲಿ ಯಾವುದೂ ಅಲ್ಲದೆ, ಕೇವಲ ರಾಜಕೀಯ ಪಿತೂರಿ ಮತ್ತು ಪಕ್ಷದ ಕಾರ್ಯಕರ್ತರ ಗುಂಪುಗಾರಿಕೆಗೆ ಸೀಮಿತವಾಗುವ ಈ ‘ಭವನ’ಗಳಿಗಾಗಿ ಸಾರ್ವಜನಿಕರ ಆಸ್ತಿಯನ್ನು ಬಲಿ ಕೊಡುತ್ತಿರುವುದು ಅಕ್ಷಮ್ಯ ಅಪರಾಧವಲ್ಲವೇ?

ಸರ್ಕಾರಿ ಜಮೀನು ಎನ್ನುವುದು ಜನಸಾಮಾನ್ಯರ ಆಸ್ತಿ. ಅದನ್ನು ರಾಜಕೀಯ ಪಕ್ಷದ ಕಚೇರಿಗಳಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡುವುದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹ. ಕಾಂಗ್ರೆಸ್ ಸರ್ಕಾರವು ಕೂಡಲೇ ತನ್ನ ಈ ಭೂ ಹಂಚಿಕೆ ಆದೇಶಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ, ಬೀದಿಗಿಳಿದು ನಿಮ್ಮ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ನಿಶ್ಚಿತ. ‘ವಿಫಲ ಸರ್ಕಾರ’ ಎಂಬ ಬಿರುದಿಗೆ ಅರ್ಹವಾಗಿರುವ ಈ ಆಡಳಿತವು ರಾಜ್ಯದ ಹಿತದೃಷ್ಟಿಯಿಂದ ಅತಿ ಅಪಾಯಕಾರಿಯಾಗಿದೆ.

ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರ ಹಿತಕ್ಕಿಂತ ತನ್ನ ಪಕ್ಷದ ಹಿತವೇ ಮುಖ್ಯ ಎಂದು ಭಾವಿಸಿದೆ. ಸಾರ್ವಜನಿಕರ ಆಸ್ತಿಯನ್ನು ಕೊಳ್ಳೆ ಹೊಡೆದು ‘ವಿಫಲ ಸರ್ಕಾರ’ ಎಂಬ ಕಿರೀಟವನ್ನು ನೀವು ಈಗಾಗಲೇ ತೊಟ್ಟುಕೊಂಡಿದ್ದೀರಿ. ಬಡವರ ಹೊಟ್ಟೆ ಮೇಲೆ ಹೊಡೆದು ನಿಮ್ಮ ಪಕ್ಷದ ಭವನ ನಿರ್ಮಿಸುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಧಿಕಾರ ಹಸ್ತಾಂತರ ಗೊಂದಲ, ನಾಯಕರ ಹೇಳಿಕೆಗಳು: ವಿದೇಶಕ್ಕೆ ಹಾರಿದ ಸಿದ್ದು ಬಣದ 11 ಮಂದಿ 'ಕೈ' ಶಾಸಕರು

SSLC, PUC Exam 2026: ಪರೀಕ್ಷೆ ಜೊತೆಗೆ ಫಲಿತಾಂಶ ದಿನಾಂಕ ಪ್ರಕಟ, 16 ಲಕ್ಷ ವಿದ್ಯಾರ್ಥಿಗಳು ನೋಂದಣಿ

'ನಾಯಕತ್ವ ಬದಲಾವಣೆ ವಿಚಾರವಾಗಿ ಸಮಯ ಬಂದಾಗ ಸಿದ್ದರಾಮಯ್ಯನವರೇ ಮಾತನಾಡುತ್ತಾರೆ': ಡಿ ಕೆ ಶಿವಕುಮಾರ್

ರೈತರ ಹಿತ ರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ

ಭಾರತಕ್ಕೆ ಭೇಟಿ ನೀಡುವಂತೆ ತಾರಿಕ್ ರೆಹಮಾನ್‌ಗೆ ಪ್ರಧಾನಿ ಮೋದಿ ಆಹ್ವಾನ!

SCROLL FOR NEXT