ಡಿ ಕೆ ಶಿವಕುಮಾರ್  
ರಾಜಕೀಯ

'ಸಂಪುಟಕ್ಕೆ ಹೊಸ ಪೀಳಿಗೆ, ಹೊಸ ಆಲೋಚನೆ ಇರುವವರು ಸೇರಬೇಕು, ನಾವು ಎಷ್ಟು ದಿನ ಗೂಟ ಹೊಡೆದುಕೊಂಡು ಕೂರಲು ಸಾಧ್ಯ'?: ಡಿ ಕೆ ಶಿವಕುಮಾರ್

ಮೊದಲ ಬಾರಿಗೆ ಆಯ್ಕೆಯಾದ ಶಾಸಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂಬ ಶಾಸಕರ ಬೇಡಿಕೆಯನ್ನು ಬೆಂಬಲಿಸಿದರು.

ಬೆಂಗಳೂರು: ಸಚಿವ ಸಂಪುಟಕ್ಕೆ ಹೊಸಬರನ್ನು ಸೇರಿಸುವ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಲವಾಗಿ ಸಮರ್ಥಿಸಿದರು. ಹಳೆಯ ನಾಯಕತ್ವವು ಸದಾಕಾಲ ಮುಂದುವರಿಯಲು ಸಾಧ್ಯವಿಲ್ಲ, ಪಕ್ಷದ ಭವಿಷ್ಯಕ್ಕಾಗಿ ಹೊಸ ಚಿಂತನೆ ಇರುವವರು, ಹೊಸ ಉತ್ಸಾಹ ಇರುವವರು ಹೊಸ ಪೀಳಿಗೆಯ ಹುರುಪಿನಿಂದ ಕೆಲಸ ಮಾಡುವ ನಾಯಕರು ಬರಬೇಕು ಎಂದು ಹೇಳಿದರು.

ಬೆಂಗಳೂರಿನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ಆಯ್ಕೆಯಾದ ಶಾಸಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂಬ ಶಾಸಕರ ಬೇಡಿಕೆಯನ್ನು ಬೆಂಬಲಿಸಿದರು.
ಪಕ್ಷಕ್ಕೆ ಹೊಸ ರಕ್ತ ಮತ್ತು ಹೊಸ ಚಿಂತನೆ ಅಗತ್ಯ. ಹೊಸಬರನ್ನು ಒಳಗೊಳ್ಳುವುದನ್ನು ನಾನು ಬೆಂಬಲಿಸುತ್ತೇನೆ ಎಂದು ಹೇಳಿದರು. ತಲೆಮಾರಿನ ಬದಲಾವಣೆಯ ಅಗತ್ಯವನ್ನೂ ಅವರು ಒತ್ತಿಹೇಳಿದರು.
ಹಳೆಯ ನಾಯಕತ್ವ ಸದಾಕಾಲ ಇರಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷರೂ ಆಗಿರುವ ಶಿವಕುಮಾರ್ ಹೇಳಿದರು.

ಸಚಿವ ಸಂಪುಟ ಪುನರ್ರಚನೆ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಪ್ರಾತಿನಿಧಿತ್ವ ನೀಡುವಂತೆ ಮೊದಲ ಬಾರಿಗೆ ಆಯ್ಕೆಯಾದ ಶಾಸಕರು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಪತ್ರ ಬರೆದಿರುವ ಕುರಿತು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಶಾಸಕರು ಬರೆದ ಪತ್ರದಲ್ಲಿ ಏನಿದೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ನಾಯಕತ್ವ ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಸಿದ ಮನವಿಯಲ್ಲಿ, ಕನಿಷ್ಠ ಐದು ಮೊದಲ ಬಾರಿಗೆ ಆಯ್ಕೆಯಾದ ಶಾಸಕರನ್ನು ಸಚಿವರಾಗಿ ಸೇರಿಸಬೇಕು ಎಂದು ಮನವಿ ಮಾಡಿದ್ದಾರೆ.

ನಿಮಗೆ ತಿಳಿದಿರುವಂತೆ, ಕರ್ನಾಟಕದ ಜನರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ 38 ಸದಸ್ಯರನ್ನು ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆ ಮಾಡಿದ್ದಾರೆ. ಇದರಿಂದ ವಿಧಾನಸಭೆಯಲ್ಲಿ ಹೊಸ ಯುವ ಮುಖಗಳನ್ನು ನೋಡಲು ಜನರು ಬಯಸುತ್ತಿದ್ದಾರೆ ಎಂಬ ಸ್ಪಷ್ಟ ಸಂದೇಶ ದೊರಕಿದೆ ಎಂದು ಶಾಸಕರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ದಲಿತ ಮುಖ್ಯಮಂತ್ರಿ ವಿಷಯವಾಗಿ ಸಚಿವ ಸಂಪುಟದ ಸಹೋದ್ಯೋಗಿ ಡಾ ಹೆಚ್.ಸಿ. ಮಹದೇವಪ್ಪ ನೀಡಿದ ಹೇಳಿಕೆಗಳಿಗೂ ಶಿವಕುಮಾರ್ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದರು. ಮಹದೇವಪ್ಪ ಅವರ ಹೇಳಿಕೆಯನ್ನು ನೋಡಿದ್ದೇನೆ. ಅವರು ನಮ್ಮ ಹೈಕಮಾಂಡ್ ಭಾಗವಾಗಿದ್ದಾರೆ. ಅವರಿಗೆ ಯಾವುದಾದರೂ ಮಾಹಿತಿ ಇರಬಹುದು. ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.

ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಿಮ್ಮನ್ನು ದೆಹಲಿಗೆ ಕರೆಯಿತೇ ಎಂಬ ಪ್ರಶ್ನೆಗೆ, “ನನಗೆ ಯಾವುದೇ ಕರೆ ಬಂದಿಲ್ಲ. ನನ್ನ ಇಲಾಖೆಗೆ ಸಂಬಂಧಿಸಿದ ಕೆಲವು ಕೆಲಸಗಳಿಗಾಗಿ ದೆಹಲಿಗೆ ಹೋಗಬೇಕಿದೆ,” ಎಂದು ಸ್ಪಷ್ಟಪಡಿಸಿದರು.

ನಗರಾಭಿವೃದ್ಧಿಗೆ ಕೇಂದ್ರದಿಂದ ನೀಡಲಾಗುತ್ತಿರುವ ನಿಧಿಗಳ ಕುರಿತು ಮಾತನಾಡಿದ ಅವರು, ಕೇಂದ್ರವು 1 ಲಕ್ಷ ಕೋಟಿ ರೂಪಾಯಿ ಬಿಡುಗಡೆ ಮಾಡುತ್ತಿದ್ದರೂ, ಅದು ದೊಡ್ಡ ನಗರಗಳಿಗೆ ಅಲ್ಲ ಎಂದು ಸೂಚಿಸಿರುವುದಾಗಿ ಹೇಳಿದರು. ನಾನು ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿ, ರಾಜ್ಯದ ಎರಡನೇ ಮತ್ತು ಮೂರನೇ ಹಂತದ ನಗರಗಳಿಗೆ ಪ್ರಸ್ತಾವನೆ ತಯಾರಿಸಲು ಹೇಳುತ್ತೇನೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅವರು ಸಚಿವರ ಹೇಳಿಕೆಗಳ ಕುರಿತು ಮೌನವಾಗಿದ್ದಾರೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಸಚಿವರು ಮತ್ತು ಶಾಸಕರನ್ನು ನಿಯಂತ್ರಿಸುವ ಜವಾಬ್ದಾರಿ ಮುಖ್ಯಮಂತ್ರಿಯವರದ್ದು. ಅದನ್ನು ಪಕ್ಷಕ್ಕೆ ತಿಳಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೃಷಿ ಭೂಮಿ ಸೇರಿದಂತೆ ಎಲ್ಲಾ ಸ್ವತ್ತಿಗೂ ಸ್ವಯಂ ಚಾಲಿತ ಮ್ಯುಟೇಷನ್‌: ಕಂದಾಯ ಸಚಿವ ಕೃಷ್ಣಬೈರೇಗೌಡ

ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ವಯೋಮಿತಿ 5 ವರ್ಷ ಸಡಿಲಿಕೆ; ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದ CM

'ದೇಶದ ಘನತೆಗೆ ಮಾಡಿದ ಭೀಕರ ದ್ರೋಹ': ಕಾಂಗ್ರೆಸ್ಸಿಗರ ಅರೆಬೆತ್ತಲೆ ಪ್ರತಿಭಟನೆಗೆ ಜಡ್ಜ್‌ಗಳು ಸೇರಿ 270 ನಿವೃತ್ತ ಅಧಿಕಾರಿಗಳ ಖಂಡನೆ!

T20 World Cup 2026: ಬ್ರೂಕ್ ಭರ್ಜರಿ ಶತಕ; ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಇಂಗ್ಲೆಂಡ್​

ಪ್ರಧಾನಿ ಮೋದಿ ಇಸ್ರೇಲ್ ಭೇಟಿಗೂ: ಇಸ್ಲಾಮಿಕ್ ಉಗ್ರವಾದದ ವಿರುದ್ಧ ಷಡ್ಭುಜ ಕೂಟ ಘೋಷಿಸಿದ ನೆತನ್ಯಾಹು!

SCROLL FOR NEXT