ಬೆಂಗಳೂರು: ಕೇಂದ್ರದ ಆಡಳಿತಾರೂಢ ಮೋದಿ ಸರ್ಕಾರದಿಂದ ರಾಜಭವನಕ್ಕೆ ಯಾವ ಸೂಚನೆಗಳು ಬರುತ್ತವೆಂಬುದು ನಮಗೆ ಗೊತ್ತಿದೆ. ಬಿಜೆಪಿ ಆಡಳಿತವಿಲ್ಲದ ರಾಜ್ಯಗಳಲ್ಲಿ ರಾಜ್ಯಪಾಲರ ನಡೆ ಕುರಿತು ದೇಶವ್ಯಾಪಿ ಚರ್ಚೆ ನಡೆಯುತ್ತಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಶುಕ್ರವಾರ ಹೇಳಿದ್ದಾರೆ.
ಶುಕ್ರವಾರ ವಿಧಾನಸಭೆ ಕಲಾಪದಲ್ಲಿ ಜಂಟಿ ಅಧಿವೇಶನ ಸಂದರ್ಭದಲ್ಲಿ ರಾಜ್ಯಪಾಲರು ಭಾಷಣ ಕುರಿತು ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ರಾಜಭವನಗಳು (ಲೋಕಭವನಗಳು) ಕೇಂದ್ರ ಸರ್ಕಾರದಿಂದ ಯಾವ ರೀತಿಯ ಸೂಚನೆಗಳನ್ನು ಪಡೆಯುತ್ತಿವೆ ಎಂಬುದರ ಬಗ್ಗೆ ನಾನು ಮಾತನಾಡಬಲ್ಲೆ. ರಾಜ್ಯಪಾಲರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ನನಗೆ ತಿಳಿದಿದೆ ಎಂದು ಹೇಳಿದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್, ರಾಜ್ಯ ಸರ್ಕಾರದಿಂದ ವಿಧಾನಸಭಾ ಸ್ಪೀಕರ್ ಕಚೇರಿಗೆ ಎಷ್ಟು ಕರೆಗಳು ಬಂದಿವೆ ಎಂದು ಪ್ರಶ್ನಿಸಿದರು. ಇದು ಕೆಲಕಾಲ ಸದನದಲ್ಲಿ ಗೊಂದಲಕ್ಕೆ ಕಾರಣವಾಯಿತು.
ಬಳಿಕ ಮಾತನಾಡಿದ ಸಚಿವರು, ರಾಜ್ಯಪಾಲರು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕೆಂದು. ರಾಜ್ಯಪಾಲರು ಸಂವಿಧಾನದ ಸಂರಕ್ಷಕರಾಗಿದ್ದಾರೆ. ಆದರೆ, ಸಂವಿಧಾನಕ್ಕಿಂತ ಮೇಲಲ್ಲ. ಈ ವಿಷಯದ ಬಗ್ಗೆ ದೇಶಾದ್ಯಂತ, ವಿಶೇಷವಾಗಿ ದಕ್ಷಿಣ ಭಾರತದ ಬಿಜೆಪಿಯೇತರ ರಾಜ್ಯಗಳಲ್ಲಿ ಚರ್ಚೆ ನಡೆಯುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಸಂವಿಧಾನ ಉಲ್ಲಂಘಿಸಿರುವ ಹಲವು ಉದಾಹರಣೆಗಳನ್ನು ನಾನು ನೀಡಬಲ್ಲೆ. ರಾಜ್ಯಪಾಲರ ಕಚೇರಿಗೆ ಕೇಂದ್ರದಿಂದ ಎಷ್ಟು ಕರೆಗಳು ಬರುತ್ತವೆ ಎಂಬುದನ್ನೂ ವಿವರಿಸಬಲ್ಲೆ ಎಂದು ಹೇಳಿದರು.
ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಮಾತನಾಡುವಾಗ ನಿಯಮಾನುಸಾರ ವರ್ತಿಸಬೇಕೆಂದು. ಮನಸ್ಸಿಗೆ ಬಂದಂತೆ ಬಂದು ಹೋಗಲು ಸಾಧ್ಯವಿಲ್ಲ. ಇದರಿಂದ ಸಂವಿಧಾನದ ಬಲದ ಕುರಿತು ಚರ್ಚೆಗಳು ಆರಂಭವಾಗಿದೆ. ರಾಜ್ಯಪಾಲರು ಸದನಕ್ಕೂ ಸಂವಿಧಾನಕ್ಕೂ ಅವಮಾನ ಮಾಡಿದ್ದಾರೆ. ಕಾನೂನು ಉಲ್ಲಂಘಿಸಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯಪಾಲರು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.
ಸಂವಿಧಾನದ 163ನೇ ವಿಧಿಯಂತೆ ರಾಜ್ಯಪಾಲರ ಭಾಷಣವನ್ನು ರಾಜ್ಯ ಸಚಿವ ಸಂಪುಟ ಸಿದ್ಧಪಡಿಸುತ್ತದೆ. “ಆ ಭಾಷಣವನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಯಾವ ಆಧಾರದ ಮೇಲೆ ತಿರಸ್ಕರಿಸಿದರು?” ಎಂದು ಪ್ರಶ್ನಿಸಿದರು.
ರಾಜ್ಯಪಾಲರ ಭಾಷಣವು ಪ್ರಜಾಪ್ರಭುತ್ವದ ವೇದಿಕೆಯಾಗಿದೆ. ನಾವು ರಾಜ್ಯಪಾಲರನ್ನು ಖುಷಿಪಡಿಸಲು ಭಾಷಣ ಸಿದ್ಧಪಡಿಸಿಲ್ಲ. ರಾಜ್ಯಪಾಲರ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಸದಸ್ಯರು ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ನಿನ್ನೆ ರಾಜ್ಯಪಾಲರು ಸದನದಿಂದ ಓಡಿ ಹೋದರು ಎಂದು ನಾನು ಹೇಳಿದ್ದೆ. ಆ ಹೇಳಿಕೆಗೆ ಇಂದೂ ಬದ್ಧನಾಗಿದ್ದೇನೆಂದು ತಿಳಿಸಿದರು.
ರಾಜ್ಯಪಾಲರಿಗೆ ಸರ್ಕಾರ ಅವಮಾನಿಸಿದೆ ಎಂಬ ಬಿಜೆಪಿ ಆರೋಪ ಕುರಿತು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಸೇರಿದಂತೆ ಸಂಪುಟದ ಸಚಿವರು ರಾಜ್ಯಪಾಲರಿಗೆ ಹಸ್ತಲಾಘವ ನೀಡಿ ಕಾರಿನಲ್ಲಿ ಕೂರಿಸಿ ಗೌರವಯುತವಾಗಿ ಬೀಳ್ಕೊಟ್ಟಿದ್ದೇವೆ. ಎಲ್ಲಿಯೂ ಅವರಿಗೆ ಅಪಮಾನ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.
ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ಮಾತನಾಡಿ, ರಾಜ್ಯಪಾಲರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ. ಕೇಂದ್ರ ಸರ್ಕಾರ ವಿಬಿ-ಜಿ ರಾಮ್ ಜಿ ಮಸೂದೆಯನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕರಿಸಿ, ರಾಷ್ಟ್ರಪತಿಯ ಅನುಮೋದನೆ ಕೂಡ ಪಡೆದಿದೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ಆ ಮಸೂದೆಗೆ ವಿರುದ್ಧವಾಗಿ ಮಾತನಾಡಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಷ್ಟ್ರಗೀತೆ ಮುಗಿದ ನಂತರ ರಾಜ್ಯಪಾಲರು ಸದನವನ್ನು ತೊರೆಯಬೇಕಿತ್ತು ಎಂದು ಹೇಳಿದರು.