ಬೆಂಗಳೂರು: ಒಂದೋ ಬಾಯಿ ಮುಚ್ಚಿಕೊಂಡು, ಒಗ್ಗಟ್ಟಿನಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ. ಇಲ್ಲವೇ, ಬೇರೆ ದಾರಿ ನೋಡಿಕೊಳ್ಳಿ ಎಂದು ಕಚ್ಚಾಟದಲ್ಲಿ ತೊಡಗಿಕೊಂಡಿರುವ ನಾಯಕರಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗರ್ವಾಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಚಿಕ್ಕಬಳ್ಳಾಪುರ ಸಂಸದ ಕೆ.ಸುಧಾಕರ್, ಮಾಜಿ ಸಚಿವ ಹೊನ್ನಾಳಿಯ ಎಂ.ಪಿ.ರೇಣುಕಾಚಾರ್ಯ ಅವರನ್ನು ಪಕ್ಷದ ಬೆಂಗಳೂರು ಕಚೇರಿಗೆ ಕರೆಯಿಸಿಕೊಂಡು ಪ್ರತ್ಯೇಕವಾಗಿ ಮಾತನಾಡಿದ್ದಾರೆ.
ಪ್ರತಿಯೊಬ್ಬರ ಜತೆಗೂ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ. ಕೊನೆಯಲ್ಲಿ ಎಲ್ಲರನ್ನು ಒಟ್ಟಿಗೆ ಕೂರಿಸಿಕೊಂಡು ಮಾತನಾಡಿದ್ದಾರೆ.
ವಿಧಾನಪರಿಷತ್ ಚುನಾವಣೆ ಬಳಿಕ ವಿವಿಧ ನಾಯಕರ ಆರೋಪ– ಪ್ರತ್ಯಾರೋಪಗಳನ್ನು ಉಲ್ಲೇಖಿಸಿ ಪಕ್ಷದ ವರಿಷ್ಠರಿಗೆ ವರದಿ ಕಳುಹಿಸಲಾಗಿತ್ತು. ಇದರ ಬೆನ್ನಲ್ಲೇ ರಾಧಾಮೋಹನ್ ದಾಸ್ ಅವರು ಬೆಂಗಳೂರಿಗೆ ಬಂದು ಗುರುವಾರ ಸುಮಾರು ಮೂರರಿಂದ ನಾಲ್ಕು ತಾಸು ಸಭೆ ನಡೆಸಿದರು.
ನಿಮ್ಮ ಮಾತುಗಳು ಮತ್ತು ನಡವಳಿಕೆಗಳು ಅತಿಯಾಗಿವೆ. ಪಕ್ಷದ ವರಿಷ್ಠರು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ನಿಮಗೆ ಗಂಭೀರವಾಗಿ ವರ್ತಿಸಲು ಏಕೆ ಸಾಧ್ಯವಿಲ್ಲ. ಮಾಧ್ಯಮಗಳ ಮುಂದೆ ಏಕೆ ಮಾತನಾಡಬೇಕು. ಇದರಿಂದ ಪಕ್ಷಕ್ಕೆ ಹಾನಿಯಾಗುವುದಿಲ್ಲವೇ ಎಂದು ನಾಯಕರನ್ನು ಅಗರ್ವಾಲ್ ಪ್ರಶ್ನಿಸಿದರು. ತಪ್ಪಾಗಿದೆ. ಇನ್ನು ಮುಂದೆ ಆ ರೀತಿ ಆಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ನಾಲ್ವರೂ ರಾಧಾಮೋಹನ್ ದಾಸ್ ಅವರಿಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಪಕ್ಷದ ನಾಯಕರು ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಳ್ಳದೇ ಇರುವ ಬಗ್ಗೆಯೂ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದೂ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಮತ್ತು ಅದರ ಜತೆ ಗುರುತಿಸಿಕೊಂಡಿರುವ ವಿವಿಧ ಸಂಘಟನೆಗಳು ಎಸ್ಐಆರ್ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿವೆ. ಬಿಜೆಪಿ ಈ ವಿಚಾರದಲ್ಲಿ ಹಿಂದಕ್ಕೆ ಬಿದ್ದಿದೆ ಎಂಬ ದೂರುಗಳು ಬಂದಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.