ಬೆಂಗಳೂರು: ಜೆಡಿಎಸ್ 120 ಸ್ಥಾನ ಪಡೆಯುವ ಕಾಲವೂ ಬರುತ್ತೆ, ಅಲ್ಲಿಯವರೆಗೂ ನಾನೇನು ಸಾಯೋದಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರಿಗೆ ತಿರುಗೇಟು ಕೊಟ್ಟರು.
ಕುಮಾರಸ್ವಾಮಿ 120 ಸ್ಥಾನ ಗೆದ್ದು ತೋರಿಸಲಿ ಎಂಬ ಚೆಲುವರಾಯಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 20 ವರ್ಷಗಳಿಂದ ಟೀಕೆ ಮಾಡ್ತಾನೇ ಇದ್ದಾರೆ. ನನ್ನ ವಿರುದ್ಧ ವಿಷ ಕಾರುತ್ತಾರೆ. ನೋಡೋಣ 120 ಸೀಟು ಗೆದ್ದು ತೋರಿಸೋ ದಿನ ಬರುತ್ತದೆ. ಅಲ್ಲಿವರೆಗೂ ನಾನೇನು ಸಾಯಲ್ಲ ಎಂದರು.
ಪ್ರಾದೇಶಿಕ ಪಕ್ಷ ಉಳಿಯೋದು ಎಷ್ಟು ಕಷ್ಟ ಅಂತ ಗೊತ್ತಿದೆ. 18 ಸ್ಥಾನ ಗೆದ್ದು ಇನ್ನೂ ಉಳಿದಿದ್ದೇವೆ. ನಿಮ್ಮ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ? ಬಂಗಾಳದಲ್ಲಿ ಏನ್ ಆಯ್ತು? ಕಾಂಗ್ರೆಸ್ 100 ವರ್ಷಗಳ ಪಕ್ಷ, ತಮಿಳುನಾಡಿನಲ್ಲಿ ಡಿಎಂಕೆ ತಲೆ ಮೇಲೆ ಕೈ ಇಟ್ರಿ. ಪಂಜಾಬ್, ಬಿಹಾರದಲ್ಲಿ ಎಲ್ಲಿಗೆ ಬಂದು ನಿಂತಿದ್ದೀರಾ? ನನ್ನದು ಸಣ್ಣ ಪಕ್ಷ 18 ಸ್ಥಾನ ಗೆದ್ದಿದ್ದೇನೆ. ನಿಮ್ಮ ಸ್ಥಾನ ಎಷ್ಟಿದೆ ನೋಡಿಕೊಳ್ಳಿ ಅಂತ ಲೇವಡಿ ಮಾಡಿದ್ರು.
120 ಸ್ಥಾನ ಗೆಲ್ಲುವ ದಿನ ಬರುತ್ತದೆ. ರಾಜ್ಯದ ಜನ ಎಷ್ಟು ದಿನ ಅಂತ ಇವರನ್ನು ಸಹಿಸಿಕೊಳ್ತಾರೆ? 120 ಸ್ಥಾನ ಗೆದ್ದು ತೋರಿಸುವ ದಿನವೂ ಬರಲಿದೆ ಅಂತ ಚೆಲುವರಾಯಸ್ವಾಮಿಗೆ ಕುಮಾರಸ್ವಾಮಿ ತಿರುಗೇಟು ಕೊಟ್ಟರು.