ಮಂಡ್ಯ : ಬಿಜೆಪಿ ರಾಜ್ಯಸಭಾ ಟಿಕೆಟ್ ಘೋಷಣೆ ಬಳಿಕ ಒಕ್ಕಲಿಗರಿಗೆ ಅನ್ಯಾಯವಾಗ್ತಿದೆ ಎನ್ನುವ ಕೂಗು ಕೇಳಿ ಬರ್ತಿದೆ. ಕ್ಷೇತ್ರವನ್ನೇ ತ್ಯಾಗ ಮಾಡಿದ ಸುಮಲತಾ ಅಂಬರೀಷ್ ಅವರಿಗೆ ರಾಜ್ಯಸಭಾ ಟಿಕೆಟ್ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಆರೋಪಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಟಿಶ್ಯೂ ಪೇಪರ್ ತರ ಯೂಸ್ ಮಾಡಿ ಬಿಸಾಕೋದೆ ಬಿಜೆಪಿ ಕೆಲಸ. ಜೆಡಿಎಸ್ಗೆ ಬಿಸ್ಕೆಟ್ ತರ ಕೇಂದ್ರ ಮಂತ್ರಿ ಸ್ಥಾನ ಕೊಟ್ಟು ಕೂರಿಸಿದ್ರು. ಇದೀಗ ಬಿಜೆಪಿಯವರು ಮಂಡ್ಯಕ್ಕೆ ಚಪ್ಪಡಿಕಲ್ಲು ಎಳೆದು ಒಕ್ಕಲಿಗರನ್ನು ಮುಗಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಂಡ್ಯ ಜನರಿಗೆ ಅಂಬರೀಶಣ್ಣನ ಕುಟುಂಬ ಮತ್ತು ದೇವೇಗೌಡರ ಮೇಲೆ ಅಪಾರ ಪ್ರೀತಿ ಇದೆ. ನಿಖಿಲ್ ಕುಮಾರಸ್ವಾಮಿ ಅವರನ್ನ ಎಂಪಿ ಚುನಾವಣೆಗೆ ನಿಲ್ಲಿಸಿದ್ರು. ಅವ್ರ ವಿರುದ್ದ ಸುಮಲತಾ 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಅಂದಿನ ಮುಖ್ಯಮಂತ್ರಿ ಮಗನ ವಿರುದ್ದ ಗೆಲ್ಲೋದು ಸುಲಭವಲ್ಲ. ಆದ್ರೂ ಸ್ವತಂತ್ರವಾಗಿ ಸುಮಲತಾ ಅಂಬರೀಶ್ ಗೆದ್ದಿದ್ದರು.
ಬಿಜೆಪಿ ಸೇರಿದ ಬಳಿಕ ಮಾಜಿ ಸಂಸದೆ ಸುಮಲತಾ ಅವರು ತ್ಯಾಗಮಯಿಯಂತೆ ಕುಮಾರಸ್ವಾಮಿಗೆ ಕ್ಷೇತ್ರ ಬಿಟ್ಟುಕೊಟ್ಟರು. ಕಾಂಗ್ರೆಸ್ ಸೇರಿದ್ರೆ ನಮ್ಮ ಪಕ್ಷದಿಂದ ನಿಲ್ತಿದ್ರು. ಆದರೆ ಬಿಜೆಪಿ ಸೇರಿದ್ದರಿಂದ ತ್ಯಾಗ ಮಾಡಬೇಕಾಯಿತು. ಬಿಜೆಪಿ ಅಂಬರೀಶಣ್ಣನ ಕುಟುಂಬಕ್ಕೆ ರಾಜ್ಯಸಭೆ ಟಿಕೆಟ್ ಕೊಡದೆ, ದೇವೇಗೌಡರಿಗೆ ಕೊಡದೆ ಒಕ್ಕಲಿಗರಿಗೆ ಅನ್ಯಾಯ ಮಾಡಿದೆ ಎಂದು ಗಣಿಗ ರವಿಕುಮಾರ್ ಅವರು ಸುಮಲತಾ ಪರ ಬ್ಯಾಟಿಂಗ್ ಮಾಡಿದ್ದಾರೆ.