ಬೆಂಗಳೂರು: ಖಾತೆಯ ಜವಾಬ್ದಾರಿ ಮತ್ತು ಅಧಿಕಾರಗಳ ಬಗ್ಗೆ ಸ್ಪಷ್ಟತೆ ಸಿಕ್ಕ ಬಳಿಕವೇ ಅಧಿಕಾರ ಸ್ವೀಕರಿಸುತ್ತೇನೆಂದು ಸಚಿವ ಕೃಷ್ಣ ಬೈರೇಗೌಡ ಅವರು ಶನಿವಾರ ಹೇಳಿದ್ದಾರೆ.
ಬೆಂಗಳೂರು ಅಭಿವೃದ್ಧಿ ಸಚಿವರಾಗಿ ನೇಮಕಗೊಂಡಿದ್ದರೂ ಕೃಷ್ಣ ಬೈರೇಗೌಡ ಅವರು ಇನ್ನೂ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿಲ್ಲ.
ಬೆಂಗಳೂರು ಅಭಿವೃದ್ಧಿ ಖಾತೆಗೆ ಸಂಬಂಧಿಸಿದಂತೆ ಪ್ರಮುಖ ಸಂಸ್ಥೆಗಳಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್ಡಿಎ) ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರ ನಿಯಂತ್ರಣದಲ್ಲಿಯೇ ಉಳಿದಿರುವ ಹಿನ್ನೆಲೆಯಲ್ಲಿ ಈ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಕೃಷ್ಣ ಬೈರೇಗೌಡ ಅವರು, "ಬೆಂಗಳೂರು ಅಭಿವೃದ್ಧಿ ಎಂಬುದು ಅತ್ಯಂತ ದೊಡ್ಡ ಜವಾಬ್ದಾರಿ. ಜನರು ಹಾಗೂ ಸರ್ಕಾರ ಹೊಂದಿರುವ ನಿರೀಕ್ಷೆಗಳನ್ನು ಈಡೇರಿಸಲು ಖಾತೆಯ ವ್ಯಾಪ್ತಿ, ಅಧಿಕಾರ ಮತ್ತು ಹೊಣೆಗಾರಿಕೆಗಳ ಬಗ್ಗೆ ಸಂಪೂರ್ಣ ಸ್ಪಷ್ಟತೆ ಅಗತ್ಯ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಯಾವ ಜವಾಬ್ದಾರಿಯನ್ನೇ ವಹಿಸಿಕೊಂಡರೂ ಅದಕ್ಕೆ ಉತ್ತರದಾಯಿತ್ವ ಇರಬೇಕು. ಪಕ್ಷ ಮತ್ತು ಜನರು ನಿರೀಕ್ಷಿಸುವ ಫಲಿತಾಂಶ ನೀಡಬೇಕಾದರೆ ಖಾತೆಯ ಅಧಿಕಾರಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಸ್ಪಷ್ಟತೆ ಇರಬೇಕು ಎಂದು ತಿಳಿಸಿದರು.
ಖಾತೆ ಹಂಚಿಕೆ ಬಗ್ಗೆ ಅಸಮಾಧಾನವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನನಗೆ ಯಾವುದೇ ಅಸಮಾಧಾನ ಇಲ್ಲ. ಆದರೆ, ಮುಖ್ಯಮಂತ್ರಿ ಹಾಗೂ ಪಕ್ಷವು ಬೆಂಗಳೂರಿನ ಅಭಿವೃದ್ಧಿಯಂತಹ ಕಠಿಣ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ಇದನ್ನು ನಾನು ಕೇವಲ ಅಧಿಕಾರದ ಸ್ಥಾನವಾಗಿ ನೋಡುವುದಿಲ್ಲ, ದೊಡ್ಡ ಹೊಣೆಗಾರಿಕೆಯಾಗಿ ಪರಿಗಣಿಸುತ್ತೇನೆ ಎಂದರು.
ಇನ್ನೂ ಸಚಿವಾಲಯದ ಅಧಿಕಾರವನ್ನು ಅಧಿಕೃತವಾಗಿ ವಹಿಸಿಕೊಳ್ಳದ ಕಾರಣ, ಶನಿವಾರ ನಡೆದ ಹಿರಿಯ ಅಧಿಕಾರಿಗಳ ಸಭೆಗೆ ಬೈರೇಗೌಡ ಖಾಸಗಿ ವಾಹನದಲ್ಲೇ ಆಗಮಿಸಿದರು.
ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದ ಅವರು, ಈ ವಿಷಯವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶೀಘ್ರವೇ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ಅಲ್ಲದೆ, ನೀತಿ ಆಯೋಗ ಸಭೆಯಲ್ಲಿ ಡಿಕೆ ಶಿವಕುಮಾರ್ ಅವರೊಂದಿಗೆ ಭಾಗವಹಿಸಿದ್ದ ಬೈರೇಗೌಡ ಅವರು, ಬಳಿಕ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಕಾರ್ಯಕ್ರಮದಲ್ಲೂ ಜೊತೆಯಾಗಿದ್ದರು.