ಬೆಂಗಳೂರು: ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತು ಬಿಜೆಪಿ ನಾಯಕ ಆರ್. ಅಶೋಕ್ ನಡುವೆ 'ಬಿಡದಿ ಟೌನ್ಶಿಪ್' ಭೂಸ್ವಾಧೀನ ವಿಚಾರವಾಗಿ ತೀವ್ರ ರಾಜಕೀಯ ಜಟಾಪಟಿ ಏರ್ಪಟ್ಟಿದೆ.
ಕಳೆದ ಮೂರು ವರ್ಷಗಳಿಂದ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂದು ಪ್ರತಿಪಾದಿಸುತ್ತಾ, ನಿರಂತರವಾಗಿ ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡುತ್ತಾ, ಒಂಟಿ ಕಣ್ಣಿನಿಂದ ಕಣ್ಣೀರು ಸುರಿಸುತ್ತಿದ್ದ ಮಾಗಡಿ ಶಾಸಕ ಬಾಲಕೃಷ್ಣ, ಈಗ ಸಚಿವ ಸ್ಥಾನ ಸಿಗದ ಕಾರಣ ಹತಾಶೆಯಿಂದ ವಿರೋಧ ಪಕ್ಷದ ನಾಯಕರನ್ನು ಅವಮಾನಿಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
ಅಶೋಕ್ ಅವರೇ, ನೀನೇನು ಕುಬೇರನ ಅಥವಾ ಟಾಟಾ-ಬಿರ್ಲಾ ಮಗನಾ, ನೀನು ಮಂತ್ರಿ ಆದ ಮೇಲೆಯೇ ತಾನೇ ಇಷ್ಟೊಂದು ಆಸ್ತಿ ಮಾಡಿದ್ದು. ನಾನು ಎಲ್ಲೂ ಹಣವನ್ನು ಪಡೆದಿಲ್ಲ ಎಂದು ಪ್ರಮಾಣ ಮಾಡಿ ಎಂದು ಬಾಲಕೃಷ್ಣ ಅವರು ಸವಾಲು ಹಾಕಿದ್ದರು.
ಬಾಲಕೃಷ್ಣ ಅವರ ಹೇಳಿಕೆಗೆ ಎಕ್ಸ್ ಮೂಲಕ ತಿರುಗೇಟು ನೀಡಿರುವ ಅಶೋಕ್ ಅವರು, ನನ್ನನ್ನು ನಿಂದಿಸುವ ಮೂಲಕ ಅಥವಾ ವೈಯಕ್ತಿಕ ದಾಳಿ ಮಾಡುವ ಮೂಲಕ ಸಚಿವ ಸ್ಥಾನ ಪಡೆಯಬಹುದು ಎಂದುಕೊಂಡಿದ್ದಾರೆ. ನಿಮ್ಮದು ಎಲುಬಿಲ್ಲದ ನಾಲಿಗೆ ಎಂದು ಟೀಕಿಸಿದ್ದಾರೆ.
ಅವರ ಮೂರು ವರ್ಷಗಳ ಅಚಲ ನಿಷ್ಠೆಗಾಗಿ ಅಲ್ಲದಿದ್ದರೂ, ಕನಿಷ್ಠ ನನ್ನನ್ನು ನಿಂದಿಸಿದ್ದಕ್ಕಾಗಿಯಾದರೂ, ಡಿ.ಕೆ. ಶಿವಕುಮಾರ್, ಬಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಲಿ ಎಂದು ಹೇಳುತ್ತೇನೆ ಮತ್ತು ಅವರು ಸಚಿವರಾದ ನಂತರ, ಆ ಮಾಗಡಿ ರಂಗನಾಥಸ್ವಾಮಿ ಭಕ್ತ ಬಾಲಕೃಷ್ಣ ಅವರಿಗೆ ಸ್ವಲ್ಪವಾದರೂ ಒಳ್ಳೆಯ ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಆರ್ ಅಶೋಕ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.