ಬೆಂಗಳೂರು: ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಸೋಲಿನ ಬಗ್ಗೆ ಕೇಂದ್ರ ಸಚಿವ ಹೆಚ್ಡಿ ಮಾರಸ್ವಾಮಿ ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದರು. ಅಡ್ಡ ಮತದಾನ ನಡೆಯುತ್ತದೆ ಎಂಬುದು ತಮಗೆ ಮೊದಲೇ ತಿಳಿದಿತ್ತು ಎಂದು ಹೇಳಿದ್ದಾರೆ. ಅತಿಯಾದ ನಂಬಿಕೆ ನಮಗೆ ಆಘಾತ ತಂದಿದೆ ಎಂದು ಬೇಸರ ಹೊರಹಾಕಿದ್ದಾರೆ.
ಶಾಸಕರ ತುರ್ತು ಸಭೆ ಕರೆದ ಕುಮಾರಸ್ವಾಮಿ
ಜೆಡಿಎಸ್ ಪಕ್ಷ ಇನ್ನು ಮುಂದೆ ಯುವಕರು ಹಾಗೂ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ನಿರ್ಧಾರ ಮಾಡಿರುವುದಾಗಿ ಘೋಷಿಸಿದರು. ನಿನ್ನೆಯ ಚುನಾವಣೆಯಲ್ಲಿ ಅಡ್ಡ ಮತದಾನವಾಗಿರುವ ಬಗ್ಗೆ ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೆಸರನ್ನು ಪ್ರಸ್ತಾಪಿಸಲು ನಿರಾಕರಿಸಿದ ಅವರು, ಮಾಧ್ಯಮ ಪ್ರತಿನಿಧಿಗಳು ಜಿಟಿ ದೇವೇಗೌಡ ಹೆಸರು ಪ್ರಸ್ತಾಪಿಸುತ್ತಿದ್ದಂತೆಯೇ ‘ಅವರ ಹೆಸರು ಎತ್ತಬೇಡಿ’ ಎಂದು ಪುನರುಚ್ಚರಿಸಿದರು. ಕಳೆದ ಒಂದೂವರೆ ವರ್ಷದಿಂದಲೂ ಅವರ ಬಗ್ಗೆ ಮಾತನಾಡಿಲ್ಲ, ಇತ್ತೀಚೆಗೆ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಸಭೆಯಲ್ಲೂ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ ಎಂದರು.
ಪಕ್ಷದ ವಿಚಾರದಲ್ಲಿ ನನ್ನ ನಿಲುವು ಸ್ಪಷ್ಟ
ಪಕ್ಷದಲ್ಲಿ ಅಂತಿಮ ನಿರ್ಧಾರವನ್ನು ತಾವೇ ಕೈಗೊಳ್ಳುವುದಾಗಿ ಕುಮಾರಸ್ವಾಮಿ ಹೇಳಿದರು. ಕಾರ್ಯಕರ್ತರ ಅಭಿಪ್ರಾಯಗಳನ್ನು ಆಧರಿಸಿ ತಮ್ಮ ನಿರ್ಣಯಗಳನ್ನು ಇನ್ನು ಮುಂದೆ ತೆಗೆದುಕೊಳ್ಳುತ್ತೇನೆ. ಇನ್ನು ಪಕ್ಷದ ಆಂತರಿಕ ವಿಚಾರಗಳಲ್ಲಿ ತಮ್ಮದೇ ಅಂತಿಮ ಎಂದರು.
ನಿನ್ನೆ ರಾಜ್ಯ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಐವರೂ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. ಮುಖ್ಯಮಂತ್ರಿಯಾದ ನಂತರ ಡಿ ಕೆ ಶಿವಕುಮಾರ್ ಗೆ ಇದು ಮೊದಲ ಪರೀಕ್ಷೆಯಾಗಿತ್ತು. ಅದರಲ್ಲಿ ಅವರು ಗೆದ್ದು ಬೀಗಿದ್ದಾರೆ. ಬಿಜೆಪಿಯ ಇಬ್ಬರು ಅಬ್ಯರ್ಥಿಗಳು ಮೇಲ್ಮನೆ ಪ್ರವೇಶಿಸಿದ್ದರೆ, ಜೆಡಿಎಸ್ನ ಗೋವಿಂದ ರಾಜುಗೆ ಸೋಲಾಗಿದೆ. ಜೆಡಿಎಸ್ ಶಾಸಕರ ಅಡ್ಡಮತದಾನ ಇದಕ್ಕೆ ಕಾರಣವಾಯಿತು.
ಜೆಡಿಎಸ್ ಪಕ್ಷಕ್ಕೆ 18 ಶಾಸಕರ ಬಲ ಇದೆ. ಆದರೆ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ತೀವ್ರಗೊಂಡಿದೆ. ಹಿರಿಯ ಶಾಸಕ ಜಿಟಿ ದೇವೇಗೌಡ ಪಕ್ಷದ ಚಟುವಟಿಕೆಗಳ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ರೆಸಾರ್ಟ್ ನಲ್ಲೂ ಪಕ್ಷದ ಶಾಸಕರ ಜೊತೆಗೆ ಅವರು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಮತದಾನದ ದಿನ ಜೆಡಿಎಸ್ ಶಾಸಕರಲ್ಲಿ ನಿರುಸ್ಸಾಹ ಕಾಣಿಸಿಕೊಂಡಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಜೊತೆಯಾಗಿ ಉತ್ಸಾಹದಿಂದಲೇ ಮತದಾನ ಮಾಡಿದರೆ ಜೆಡಿಎಸ್ ಪಾಳಯದಲ್ಲಿ ನಿರುತ್ಸಾಹ ಕಂಡುಬಂದಿತ್ತು.