ಬೆಂಗಳೂರು: ಬಲಿತ ದಲಿತರು ಎಷ್ಟು ಜನ ಇದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೋರಿಸಲಿ ಎಂದುಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಷ್ಟು ಜನ ಬಲಿತ ದಲಿತರು ಇದ್ದಾರೆ ತೋರಿಸಲಿ. ಇವರ ಮನಸ್ಥಿತಿ ಮುಂಚೆಯಿಂದಲೂ ಹೀಗೆಯೇ ಇದೆ. ಕಳೆದ ಚುನಾವಣೆಯಲ್ಲಿ ಅಪಪ್ರಚಾರ ಮಾಡಿದರು. ಯಾಕೆ ನಾನು ಸೂಟು ಹಾಕಬಾರದಾ, ಆರ್ ಎಸ್ ಎಸ್ ಬಗ್ಗೆ ಕೇಳಿದರೇ ವೈಯಕ್ತಿಕವಾಗಿ ಮಾತನಾಡುತ್ತಿದ್ದಾರೆ. ಆರ್ ಎಸ್ ಎಸ್ ಆದಾಯ ಕೇಳಿದರೇ ಇವರಿಗೇಕೆ ಉರಿ. ಒಬ್ಬ ದಲಿತ ಆರ್ ಎಸ್ ಎಸ್ ಬಗ್ಗೆ ಕೇಳಲೇ ಬಾರದಾ ಎಂದು ಪ್ರಶ್ನಿಸಿದರು.
ಮೋಹನ್ ಭಾಗವತ್ ಬೆಂಗಳೂರಿಗೆ ಬರುತ್ತಿದ್ದಾರಂತೆ. ನೋಂದಣಿ ದಾಖಲೆ ತರ್ತಿದ್ದಾರೋ ಏನೋ ಗೊತ್ತಿಲ್ಲ. ನಾನು ಪ್ರಶ್ನೆ ಕೇಳಿದ್ದೇನೆ. ಅದಕ್ಕೆ ಮೊದಲು ಉತ್ತರ ಕೊಡಲಿ ನೋಂದಣಿ ದಾಖಲೆ ತೋರಿಸಲಿ ಎಂದು ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟರು.
ಜಾರಿ ನಿರ್ದೇಶನಾಲಯ ದಾಳಿಗಳ ಸ್ವರೂಪ ಮತ್ತು ಅವುಗಳ ರಾಜಕೀಯ ಉದ್ದೇಶಗಳ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳಾದ ಐಟಿ, ಇಡಿ ಮತ್ತು ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಕಳೆದ 12 ವರ್ಷಗಳಲ್ಲಿ ದೇಶಾದ್ಯಂತ ಸಾವಿರಾರು ಇಡಿ ದಾಳಿಗಳು ನಡೆದಿವೆ. ಆದರೆ, ಈ ದಾಳಿಗಳಲ್ಲಿ ಅಪರಾಧ ಸಾಬೀತಾದ ಪ್ರಕರಣಗಳ ಪ್ರಮಾಣ ಶೇಕಡಾ 2 ಕ್ಕಿಂತಲೂ ಕಡಿಮೆ, ಅಂದರೆ ಶೇಕಡಾ 1.5 ಕ್ಕಿಂತಲೂ ಕಡಿಮೆ ಇದೆ. ಈ ಅಂಕಿಅಂಶಗಳು ದಾಳಿಗಳು ರಾಜಕೀಯ ಪ್ರೇರಿತವಾಗಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಯಾವಾಗ ಬೇಕೋ ಆವಾಗ ಛೂ ಬಿಡ್ತಾರೆ ಎಂದು ಕೇಂದ್ರ ಸಂಸ್ಥೆಗಳ ಕಾರ್ಯವೈಖರಿಯನ್ನು ಖಂಡಿಸಿದ ಖರ್ಗೆ, ತಮ್ಮ ಮೇಲೂ ಇಡಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇವತ್ತಲ್ಲ ನಾಳೆ ಅದು ಆಗಬಹುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿಕರ ಮನೆ ಮೇಲೆ ಇಡಿ ದಾಳಿಯಾದ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.