ಬೆಂಗಳೂರು: ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್ಗೆ ಉದ್ಯಮಿ ಮುಕೇಶ್ ಅಂಬಾನಿ ನೀಡಿರುವ ಕೋಟ್ಯಂತರ ರೂಪಾಯಿ ದೇಣಿಗೆಯ ಲೆಕ್ಕ ಬಹಿರಂಗವಾಗಿಲ್ಲ ಎಂದು ಆರೋಪಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್, ಈ ಕುರಿತು ಹಾಲಿ ಅಥವಾ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಶನಿವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಮ ಮಂದಿರ ಟ್ರಸ್ಟ್ ದೇಣಿಗೆಯ ಲೆಕ್ಕ ನೀಡುವ ಅಗತ್ಯವಿಲ್ಲ" ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದರು.
"ಪ್ರಧಾನಿ ನರೇಂದ್ರ ಮೋದಿ 'ನಾ ಖಾವೂಂಗಾ, ನಾ ಖಾನೇ ದೂಂಗಾ' ಎಂದು ಹೇಳಿದ್ದರು. ಆದರೆ, ಈಗ ಪ್ರಹ್ಲಾದ್ ಜೋಶಿ ಅವರು ರಾಮ ಮಂದಿರ ಟ್ರಸ್ಟ್ ಲೆಕ್ಕ ನೀಡಬೇಕಾಗಿಲ್ಲ ಎಂದು ಹೇಳುತ್ತಿದ್ದಾರೆ. ಅಂದರೆ ಅವರು ಪ್ರಧಾನಿ ಕಚೇರಿಯ ನಿಲುವಿಗೇ ವಿರುದ್ಧವಾಗಿ ಮಾತನಾಡುತ್ತಿದ್ದಾರೆ.
ಟ್ರಸ್ಟ್ನಿಂದ ಲೆಕ್ಕ ಕೇಳುತ್ತಿರುವುದು ಪ್ರಧಾನಿಯವರ ಕಚೇರಿಯೇ. ಆದರೆ, ಟ್ರಸ್ಟ್ ವಿವರ ನೀಡುತ್ತಿಲ್ಲ. ಇದನ್ನು ಸಮರ್ಥಿಸುವ ಮೂಲಕ ಪ್ರಹ್ಲಾದ್ ಜೋಶಿಯವರೂ ಈ ಲೂಟಿಯಲ್ಲಿ ಭಾಗಿಯಾಗಿದ್ದಾರೆ," ಎಂದು ಆರೋಪಿಸಿದರು.
ಇದೇ ವೇಳೆ ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, "12ನೇ ಶತಮಾನದಲ್ಲಿ ಮೊಹಮ್ಮದ್ ಗಜ್ನಿ ದೇವಾಲಯಗಳನ್ನು ಲೂಟಿ ಮಾಡಿದ್ದನು. ಅದರ ನಂತರ ದೇವಾಲಯಗಳನ್ನು ಲೂಟಿ ಮಾಡುತ್ತಿರುವುದು ಎಂದರೆ ಬಿಜೆಪಿ ಮತ್ತು ಆರ್ಎಸ್ಎಸ್. ನನಗೆ ಯಾವ ದೇವಾಲಯ ಎಂಬುದು ಮುಖ್ಯವಲ್ಲ. ಅದು ರಾಮ, ಲಕ್ಷ್ಮಣ ಅಥವಾ ಸೀತೆಯ ದೇವಸ್ಥಾನವೇ ಆಗಿರಲಿ, ಅದು ನೋಂದಾಯಿತ ಟ್ರಸ್ಟ್. ಆ ಟ್ರಸ್ಟ್ಗೆ ಬಂದ ಸುಮಾರು 200 ಕೋಟಿ ರೂ. ದೇಣಿಗೆ ಹಣವನ್ನು ಯಾರು ಲೂಟಿ ಮಾಡಿದ್ದಾರೆ ಎಂಬುದನ್ನು ತಿಳಿಯಬೇಕಿದೆ ಎಂದು ಹೇಳಿದರು.
"ಪ್ರಹ್ಲಾದ್ ಜೋಶಿಯವರಿಗೆ ಧೈರ್ಯವಿದ್ದರೆ, ನಿಜವಾದ ಹಿಂದೂ ಆಗಿದ್ದರೆ, ರಾಮ ಮಂದಿರದ ದೇಣಿಗೆ ಹಣವನ್ನು ಯಾರು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ," ಎಂದು ಸವಾಲು ಹಾಕಿದರು.
ರಾಮ ಮಂದಿರ ಟ್ರಸ್ಟ್ನ ಸದಸ್ಯರಾಗಿರುವ ಪೇಜಾವರ ಶ್ರೀಗಳೂ ದೇಣಿಗೆಯ ಲೆಕ್ಕ ಕೇಳಿದ್ದಾರೆ. "ಆರ್ಎಸ್ಎಸ್ ಕೂಡ ನೋಂದಾಯಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕು. ಹಾಗಾದರೆ ಪ್ರಹ್ಲಾದ್ ಜೋಶಿಯವರು ಪೇಜಾವರ ಶ್ರೀಗಳ ವಿರುದ್ಧವೂ ಇದ್ದಾರೆಯೇ?" ಎಂದು ಪ್ರಶ್ನಿಸಿದರು.