ಬೆಂಗಳೂರು: ಅಯೋಧ್ಯೆ ರಾಮ ಮಂದಿರ ದೇಣಿಗೆ "ಲೂಟಿ" ಕುರಿತು ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಅವರಿಗೆ "ದೇಶ ಮೊದಲು" ಅಲ್ಲ, "ದೇಣಿಗೆ ಮೊದಲು" ಎಂದು ಟೀಕಿಸಿದರು.
ರಾಮ ಮಂದಿರ ದೇಣಿಗೆ ಹಗರಣ ಕುರಿತು ವಿಶೇಷ ತನಿಖಾ ತಂಡ(ಎಸ್ಐಟಿ) ತನಿಖೆ ಮಾಡುತ್ತಿರುವ ರೀತಿಯಿಂದ ಇದು ಸ್ಪಷ್ಟವಾಗಿದೆ ಎಂದು ಖರ್ಗೆ ಆರೋಪಿಸಿದರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, "ಒಂದು ವಿಷಯ ಬಹಳ ಸ್ಪಷ್ಟವಾಗಿದೆ. ಬಿಜೆಪಿ ಮತ್ತು ಆರ್ಎಸ್ಎಸ್ಗೆ, ದೇಶ ಮೊದಲು ಅಲ್ಲ; ಅವರಿಗೆ ದೇಣಿಗೆ ಮೊದಲು" ಎಂದರು.
ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಪ್ರಶ್ನಿಸಿದ ಖರ್ಗೆ, ಅಯೋಧ್ಯೆಯ ರಾಮ ಮಂದಿರದೊಳಗೆ ರಾಮ ಲಲ್ಲಾ ಪ್ರತಿಮೆಯ ಪ್ರತಿಷ್ಠಾಪನೆ(ಪ್ರಾಣ ಪ್ರತಿಷ್ಠೆ)ಯನ್ನು ಮೋದಿ ನೆರವೇರಿಸಿದರು. ದೇವಾಲಯವನ್ನು ಉದ್ಘಾಟಿಸಿದರು. 15 ಸದಸ್ಯರನ್ನು ಒಳಗೊಂಡ ಟ್ರಸ್ಟ್ ಸಮಿತಿಯನ್ನು ರಚಿಸಿದರು. ಅವರಲ್ಲಿ 12 ಮಂದಿಯನ್ನು ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡಿದೆ ಎಂದು ಹೇಳಿದರು.
"ಆ ನೇಮಕಾತಿಗಳನ್ನು ಯಾರು ಮಾಡಿದರು? ಮೋದಿ. ಈಗ, ಅಂತಹ ದೊಡ್ಡ ಹಗರಣ ನಡೆದಿದೆ. ಚಿನ್ನ ಕಾಣೆಯಾಗಿದೆ, ಬೆಳ್ಳಿ ಕಾಣೆಯಾಗಿದೆ, ಹಣ ಕಾಣೆಯಾಗಿದೆ, ಟ್ರಸ್ಟಿಗಳು ರಾಜೀನಾಮೆ ನೀಡುತ್ತಿದ್ದಾರೆ. ಆದರೂ ಪ್ರಧಾನಿ ಮೌನವಾಗಿದ್ದಾರೆ" ಎಂದು ಖರ್ಗೆ ಹೇಳಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೊಡ್ಡ ಭಾಷಣಗಳನ್ನು ಮಾಡುತ್ತಿದ್ದಾರೆ. ಜನ, ರಾಮ ಭಕ್ತರ ನಂಬಿಕೆಯನ್ನು ಪ್ರಶ್ನಿಸಬಾರದು ಅಥವಾ ನೋಯಿಸಬಾರದು ಎಂದು ಹೇಳುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು.
"ಆದರೆ ಆ ನಂಬಿಕೆಗೆ ಯಾರು ನೋವುಂಟು ಮಾಡಿದ್ದಾರೆ? ಕಾಂಗ್ರೆಸ್ ಅಥವಾ ಸಮಾಜವಾದಿ ಪಕ್ಷವೇ? ಅದನ್ನು ಲೂಟಿ ಮಾಡಿದ ನಿಮ್ಮ(ಬಿಜೆಪಿ) ಸರ್ಕಾರ, ನಿಮಗೆ ಪಾಲು ಸಿಗುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ?" ಎಂದು ಪ್ರಶ್ನಿಸಿದರು.
ತನಿಖೆ ನಡೆಯುತ್ತಿರುವ ವಿಧಾನವನ್ನು ಪ್ರಶ್ನಿಸಿದ ಖರ್ಗೆ, ಎಫ್ಐಆರ್ ಸಹ ದಾಖಲಿಸದೇ ಎಸ್ಐಟಿಯನ್ನು ಹೇಗೆ ರಚಿಸಲಾಯಿತು ಎಂದು ಆಶ್ಚರ್ಯಪಟ್ಟರು.
SIT ಮಾಡಿ ಯಾರಿಗೆ ರಿಪೋರ್ಟ್ ಕೊಟ್ಟರು? IAS ಆಫೀಸರ್ಗೆ ರಿಪೋರ್ಟ್ ಕೊಟ್ಟರು. ಆ ಅಧಿಕಾರಿ ಕೂಡ ಟ್ರಸ್ಟ್ನಲ್ಲಿ ಇರೋನು. ಮೋದಿ ನಾನು ತಿನ್ನಲ್ಲ, ತಿನ್ನೋರಿಗೂ ಬಿಡಲ್ಲ ಅಂದ್ರು. ಈಗ ಏನ್ ಆಯ್ತು? ಬಿಜೆಪಿ ಅವರು ಈ ಹಗರಣವನ್ನು ಮುಚ್ಚಿ ಹಾಕೋಕೆ ಮುಂದಾಗಿದ್ದಾರೆ ಎಂದು ದೂರಿದ್ದಾರೆ.