ಬೆಂಗಳೂರು; ನನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧ ಹಾಲು ಜೇನಿನ ಸಂಬಂಧ. 2023ರ ಚುನಾವಣೆ ಮಾತ್ರವಲ್ಲ, 2028ರ ಚುನಾವಣೆಯಲ್ಲೂ ಅದು ಮುಂದುವರಿಯಲಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮಿಬ್ಬರ ಮಧ್ಯೆ ಹುಳಿ ಹಿಂಡಿ ಶಿವಕುಮಾರ್ ನನ್ನು ತಮ್ಮೆಡೆಗೆ ಒಲಿಸಿಕೊಳ್ಳಬಹುದು ಎಂಬ ದುರಾಲೋಚನೆ ಇದ್ದರೆ ಅದು ಹಗಲುಗನಸು ಎಂಬ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಅನುಭವದ ಮಾತುಗಳನ್ನು ಅವರು ಹೇಳಿದ್ದಾರೆ. ಅವರು ಇಷ್ಟು ವರ್ಷಗಳಿಂದ ನನ್ನನ್ನು ನೋಡಿಕೊಂಡು ಬಂದಿದ್ದಾರೆ. ಬೇರೆ ಪಕ್ಷದಲ್ಲಿದ್ದಾಗಲೂ ನನ್ನನ್ನು ನೋಡಿದ್ದಾರೆ. ನಮ್ಮ ಪಕ್ಷಕ್ಕೆ ಬಂದ ಮೇಲಂತೂ ನನ್ನ ಅವರ ಸಂಬಂಧ ಹತ್ತಿರವಾಗಿದೆ. ನಾನು ಏನು ಎಂಬುದು ಅವರಿಗೆ ಗೊತ್ತು ಎಂದರು.
ನಿಮ್ಮನ್ನು ರಾಜಕೀಯವಾಗಿ ಒಲಿಸಿಕೊಳ್ಳಲು ಬಿಜೆಪಿ-ಜೆಡಿಎಸ್ ಪ್ರಯತ್ನ ನಡೆಸುತ್ತಿದೆಯೇ ಎಂದು ಕೇಳಿದಾಗ ಶಿವಕುಮಾರ್, ಮುಂದೊಂದು ದಿನ ಸಮಯ ಸಿಕ್ಕಾಗ ಪುಸ್ತಕ ಬರೆದು ಅದರಲ್ಲಿ ಎಲ್ಲ ವಿವರಿಸುತ್ತೇನೆ ಎಂದರು.
ನಾನು ಈವರೆಗೆ ಮುಖ್ಯಮಂತ್ರಿ ಸ್ಥಾನ ಖಾಲಿ ಆಗುತ್ತದೆ ಎಂದು ಎಲ್ಲೂ ಹೇಳಿಲ್ಲ. ನಾನು ಯಾವತ್ತೂ ಪಕ್ಷದ ಶಿಸ್ತು ಉಲ್ಲಂಘಿಸುವುದಿಲ್ಲ, ಅಧ್ಯಕ್ಷನಾಗಿ ಪಕ್ಷ ಕೊಲ್ಲುತ್ತಿದ್ದೀಯಾ ಎಂದು ಯಾರೂ ಬೆರಳು ತೋರಿಸಬಾರದು ಎಂಬಂತಿದ್ದೇನೆ. ನಮ್ಮ ಸ್ವಾರ್ಥಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು, ಪಕ್ಷಕ್ಕೆ ತೊಂದರೆ ಮಾಡಲು ನನಗೆ ಇಷ್ಟವಿಲ್ಲ ಎಂದರು.
ಸಿಎಂ ಸ್ಥಾನದ ಬಗ್ಗೆ ಮಾತನಾಡಿಲ್ಲ
ನಾನು ಈವರೆಗೆ ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಮಾತನಾಡಿಲ್ಲ. ಕೆಲ ನಿರ್ಧಾರ ಕೈಗೊಂಡಾಗ ನಾನು ಭಾಗಿಯಾಗಿದ್ದೆ ಎಂದು ಹೇಳಿರುವುದು ಬಿಟ್ಟರೆ ಉಳಿದಂತೆ ನಾನು ಯಾವುದೇ ಹೇಳಿಕೆ ನೀಡಿಲ್ಲ. ಮುಖ್ಯಮಂತ್ರಿ ಹುದ್ದೆ ಖಾಲಿಯಾಗುತ್ತದೆ, ಮುಖ್ಯಮಂತ್ರಿ ಸ್ಥಾನದಿಂದ ಇಳಿಯುತ್ತಾರೆ ಎಂದು ನಾನು ಯಾವತ್ತೂ ಮಾತನಾಡಿಲ್ಲ. ಮುಖ್ಯಮಂತ್ರಿ ಸ್ಥಾನ ಖಾಲಿ ಮಾಡಿಸಲು ಹೊರಟವರು ಬೇರೆಯವರಿದ್ದಾರೆ ಎಂದು ಹೇಳಿದರು.
ಆರು ವರ್ಷ ಸಾಕು
ಕೆಪಿಸಿಸಿ ಅಧ್ಯಕ್ಷರಾಗಿ ಡಾ ಜಿ.ಪರಮೇಶ್ವರ್ ಅವರ ದಾಖಲೆ ಮುರಿಯುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಹೊಸ ರಕ್ತ, ಹೊಸ ಆಲೋಚನೆಗಳು ಬರಬೇಕು. ನಾವೆಲ್ಲ ಮೊದಲ ಬಾರಿ ಶಾಸಕರಾದಾಗಲೇ ಸಚಿವರಾದವರು. ನಾವೀಗ ಹಿರಿಯ ನಾಗರಿಕರಾಗಿದ್ದೇವೆ. ಹೊಸಬರು ಬರಲಿ, ನನಗೆ ಆರು ವರ್ಷ ಸಾಕು ಎಂದರು.
ಭೋಜನ ಕೂಟಕ್ಕೆ ಸಿಎಂಗೂ ಆಹ್ವಾನ
ಶಾಸಕರಿಗೆ ಭೋಜನ ಕೂಟ ಏರ್ಪಡಿಸುತ್ತಿರುವ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್, ಮಾ.10ರಂದು ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಭೋಜನ ಕೂಟ ಏರ್ಪಡಿಸುತ್ತಿದ್ದೇನೆ. ನಾವೂ ಸಂಭ್ರವಿಸಬೇಕಲ್ಲವೇ ಎಂದು ಪ್ರಶ್ನಿಸಿದ ಅವರು, ಭೋಜನ ಕೂಟಕ್ಕೆ ಮುಖ್ಯಮಂತ್ರಿ ಅವರನ್ನೂ ಆಹ್ವಾನಿಸುತ್ತಿದ್ದೇನೆ ಎಂದರು.