ಬೆಂಗಳೂರು: ರಾಜ್ಯದ ಮುಂದಿನ ಸಿಎಂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಎಂದು ಮಾಗಡಿ ಶಾಸಕ ಬಾಲಕೃಷ್ಣ ಅವರು ಹೇಳಿದ್ದು, ಈ ಹೇಳಿಕೆ ನಾಯಕತ್ವ ಬದಲಾವಣೆ ಕುರಿತ ಕುತೂಹಲ ಹೆಚ್ಚಾಗುವಂತೆ ಮಾಡಿದೆ.
ಬಜೆಟ್ ಅಧಿವೇಶನದ ಬಳಿಕ ಅಧಿಕಾರ ಹಸ್ತಾಂತರದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂಬ ನಿರೀಕ್ಷೆ ಶಿವಕುಮಾರ್ ಬಣದಲ್ಲಿ ಹೆಚ್ಚಾಗಿದ್ದು, ಇದರ ಬೆನ್ನಲ್ಲೇ ಬಾಲಕೃಷ್ಣ ಅವರು ಹೇಳಿಕ ನೀಡಿದ್ದಾರೆ.
ಮಾಗಡಿಯಲ್ಲಿ ವೈಜಿ ಗುಡ್ಡ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಶಿವಕುಮಾರ್ ಮತ್ತು ಅವರ ಸಹೋದರ ಡಿಕೆ ಸುರೇಶ್ ಅವರೊಂದಿಗೆ ವೇದಿಕೆ ಹಂಚಿಕೊಂಡ ಬಾಲಕೃಷ್ಣ, ಇಬ್ಬರನ್ನೂ ಅಭಿವೃದ್ಧಿಯ ಹೋರಾಟಗಾರರು ಎಂದು ಕೊಂಡಾಡಿದರು.
ಡಿಕೆ.ಶಿವಕುಮಾರ್ ಭವಿಷ್ಯದ ಮುಖ್ಯಮಂತ್ರಿ. ಡಿಕೆ ಸಹೋದರರ ಪ್ರಯತ್ನದಿಂದಲೇ ನಮಗೆ ನೀರಾವರಿ ಯೋಜನೆಗಳ ಲಾಭ ಸಿಕ್ಕಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹೇಮಾವತಿ ನದಿ ನೀರನ್ನು ಮಾಗಡಿ ತಾಲ್ಲೂಕಿಗೆ ಬಿಡಲಿಲ್ಲ, ಇದರಿಂದ ಅವರ ತವರು ಜಿಲ್ಲೆ ಹಾಸನಕ್ಕೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ, ತಾಲ್ಲೂಕಿನ ಇತರ ಭಾಗಗಳಲ್ಲಿರುವ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಳಿಕ ಮಾತನಾಡಿದ ಡಿಕೆ.ಶಿವಕುಮಾರ್ ಅವರು, ಸತ್ತೇಗಾಲದಿಂದಲೂ ಮಾಗಡಿ ಕೆರೆ ತುಂಬಿಸಲಾಗುತ್ತದೆ. ರೈತರ ಮಕ್ಕಳು ಎಂದು ಹೇಳಿಕೊಳ್ಳುವವರು ಅಂತಹ ಯೋಜನೆಯನ್ನೇಕೆ ಮಾಡಲಿಲ್ಲ? ನಮ್ಮದು ನಾಳೆಯ ಸರ್ಕಾರವಲ್ಲ, ಇಂದಿನ ಸರ್ಕಾರ. ಕಾವೇರಿ, ಹೇಮಾವತಿ ಮತ್ತು ಎತ್ತಿನಹೊಳೆಯಿಂದ ನೀರು ಬರುತ್ತಿರುವುದು ಮಾಗಡಿಯ ಜನರ ಅದೃಷ್ಟ. ಇದಕ್ಕೆ ಅಗತ್ಯವಾದ ಟೆಂಡರ್ಗಳನ್ನು ಈಗಾಗಲೇ ಕರೆಯಲಾಗಿದೆ ಎಂದು ಹೇಳಿದರು.
ನಮ್ಮ ಸರ್ಕಾರ ದೀರ್ಘಕಾಲ ಅಧಿಕಾರದಲ್ಲಿರುತ್ತದೆ. 18-20 ತಿಂಗಳಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಾನು ಈಗ ಮುಖ್ಯಮಂತ್ರಿ ವಿಷಯದ ಬಗ್ಗೆ ಮಾತನಾಡುವುದಿಲ್ಲ. ಮಾತನಾಡಿದರೆ ಮಾಧ್ಯಮಗಳು ಅದನ್ನೇ ಬರೆಯುತ್ತವೆ. ಎಲ್ಲದಕ್ಕೂ ಸಮಯವೇ ಉತ್ತರ ನೀಡುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಈ ವೇಳೆ ಮಾತನಾಡಿದ ಡಿಕೆ.ಸುರೇಶ್ ಅವರು, “ಮಾಗಡಿಯ ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸಿದರು. ಈಗ ಶಿವಕುಮಾರ್ ಬೆಂಗಳೂರು ದಕ್ಷಿಣ ಜಿಲ್ಲೆಯ ನೀರಿನ ಸಮಸ್ಯೆ ನಿವಾರಿಸಲು ಕೆಲಸ ಮಾಡುತ್ತಿದ್ದಾರೆ,” ಎಂದು ಹೇಳಿದರು.
ಇದೇ ವೇಳೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದರು.