ಬೆಂಗಳೂರು: ಒತ್ತಡಕ್ಕೆ ಮಣಿದು ತೈಲ ಆಮದು ಕಡಿತ ಮಾಡಲು ಇದು ಯುಪಿಎ ಆಡಳಿತವಲ್ಲ, ಮೋದಿ ಸರ್ಕಾರ ಯಾರ ಮುಂದೆಯೂ ತಲೆಬಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ತಿರುಗೇಟು ನೀಡಿದೆ.
ಸಿದ್ದರಾಮಯ್ಯ ಅವರ ಟೀಕೆಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರಷ್ಯಾ ತೈಲ ಖರೀದಿಯಲ್ಲಿ ಭಾರತ ಹಿಂದೆ ಸರಿದಿಲ್ಲ. ಮೋದಿ ಸರ್ಕಾರ ಯಾರ ಮುಂದೆಯೂ ತಲೆಬಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇದು ಯುಪಿಎ ಆಡಳಿತದ ಕಾಲವಲ್ಲ; ಅಂದು ಸೋನಿಯಾ ಗಾಂಧಿ ನಿಯಂತ್ರಣದಲ್ಲಿದ್ದ ಯುಪಿಎ ಸರ್ಕಾರವು ಅಮೆರಿಕಾ ಒತ್ತಡಕ್ಕೆ ಮಣಿದು ಭಾರತದ ಸ್ವಾಯತ್ತ ಹಿತಾಸಕ್ತಿಗಳನ್ನು ತ್ಯಜಿಸುತ್ತಿತ್ತು ಎಂದು ಆರೋಪಿಸಿದ್ದಾರೆ.
ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟರ್ ಒಮ್ಮೆ ಅಮೆರಿಕದ ಒತ್ತಡದಿಂದ ಭಾರತ ಇರಾನ್ನಿಂದ ತೈಲ ಆಮದು ಕಡಿತಗೊಳಿಸಿದೆ ಎಂದು ಬಹಿರಂಗವಾಗಿ ಹೇಳಿದ್ದನ್ನು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ.
ಹೇಳಿಕೆ ನೀಡುವ ಸಂದರ್ಭದಲ್ಲಿ ಯುಪಿಎ ಸರ್ಕಾರದ ವಿದೇಶಾಂಗ ಸಚಿವರು ಕೂಡ ಉಪಸ್ಥಿತರಿದ್ದರು. ಅದು ಭಾರತದ ರಾಜತಾಂತ್ರಿಕ ಇತಿಹಾಸದಲ್ಲಿ ಅವಮಾನಕರ ಕ್ಷಣವಾಗಿತ್ತು ಎಂದು ಟೀಕಿಸಿದ್ದಾರೆ.
ಇದೀಗ ಒಬ್ಬ ಕಾರ್ಯನಿರ್ವಹಣೆಯಲ್ಲಿರುವ ಮುಖ್ಯಮಂತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯಲು ಟ್ರೋಲ್ ಮಟ್ಟಕ್ಕೆ ಇಳಿದಿರುವುದು ವಿಷಾದಕರ ಸಂಗತಿ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಭಾರತದ ಇಂಧನ ಭದ್ರತೆಯನ್ನು ವಾಷಿಂಗ್ಟನ್ ಅಥವಾ ಯುರೋಪಿನ ಒತ್ತಡದ ಮೇಲಲ್ಲದೆ, ಭಾರತದ ಸ್ವಂತ ಹಿತಾಸಕ್ತಿಗಳ ಆಧಾರದ ಮೇಲೆ ನಿರ್ಧರಿಸುತ್ತದೆ ಎಂದೂ ತಿಳಿಸಿದ್ದಾರೆ.
ಪಾಶ್ಚಾತ್ಯ ರಾಷ್ಟ್ರಗಳಿಂದ ನಿರ್ಬಂಧಗಳು, ತೆರಿಗೆ ಬೆದರಿಕೆಗಳು ಮತ್ತು ನಿರಂತರ ಒತ್ತಡಗಳಿದ್ದರೂ ಭಾರತವು ರಷ್ಯಾದಿಂದ ನಿಂದ ತೈಲ ಖರೀದಿಯನ್ನು ಹೆಚ್ಚಿಸಿದೆ. 2022ರ ಮೊದಲು ಭಾರತದ ತೈಲ ಆಮದುಗಳಲ್ಲಿ ರಷ್ಯಾ ಪಾಲು ಬಹುತೇಕ ಶೂನ್ಯವಾಗಿದ್ದರೂ, ನಂತರ ಅದು ಗಣನೀಯವಾಗಿ ಹೆಚ್ಚಾಗಿದೆ. ಇಂದಿಗೂ ರಷ್ಯಾದ ತೈಲ ಭಾರತಕ್ಕೆ ಪ್ರಮುಖ ಇಂಧನ ಆಮದು ಮೂಲವಾಗಿಯೇ ಉಳಿದಿದೆ.
ಮೋದಿ ಸರ್ಕಾರ ವಿದೇಶಿ ಒತ್ತಡಕ್ಕೆ ಎಂದಿಗೂ ತಲೆಬಾಗಿಲ್ಲ, ಆದರೆ, ಯುಪಿಎ ಸರ್ಕಾರವು ಹಲವಾರು ಬಾರಿ ಭಾರತದ ಸ್ವಾಯತ್ತ ಹಿತಾಸಕ್ತಿಗಳನ್ನು ತ್ಯಜಿಸಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಯುಪಿಎ ಆಡಳಿತದ ಕಾಲದಲ್ಲಿ ಭಾರತದ ವಿದೇಶಾಂಗ ನೀತಿ ರಾಷ್ಟ್ರೀಯ ಹಿತಾಸಕ್ತಿಗಳ ಆಧಾರದ ಮೇಲೆ ನಡೆಯುತ್ತಿತ್ತೇ ಅಥವಾ ರಾಷ್ಟ್ರೀಯ ಸಲಹಾ ಮಂಡಳಿ ಪ್ರಭಾವದಡಿ ನಡೆಯುತ್ತಿತ್ತೇ ಎಂಬ ಪ್ರಶ್ನೆಯನ್ನೂ ಬಿಜೆಪಿ ಮುಂದಿಟ್ಟಿದೆ.
ವಿದೇಶಿ ಶಕ್ತಿಗಳನ್ನು ಮೆಚ್ಚಿಸಲು ಯುಪಿಎ ಪದೇ ಪದೇ ಭಾರತದ ಸಾರ್ವಭೌಮ ಹಿತಾಸಕ್ತಿಗಳನ್ನೇಕೆ ರಾಜಿ ಮಾಡಿಕೊಂಡಿತು?
ರಾಜಕೀಯ ವಲಯಗಳಲ್ಲಿ ರಾಹುಲ್ ಗಾಂಧಿ ಕುರಿತಂತೆ ಹರಿದಾಡುತ್ತಿರುವ ವದಂತಿಗಳನ್ನೂ ಉಲ್ಲೇಖಿಸಿ, ಯುಪಿಎ ಕಾಲದಲ್ಲಿ ವಿದೇಶಾಂಗ ನೀತಿಯಲ್ಲಿ ರಾಜಕೀಯ ಒತ್ತಡಗಳು ಕೆಲಸ ಮಾಡಿದ್ದವೆಯೇ ಎಂಬ ಪ್ರಶ್ನೆಯನ್ನು ಬಿಜೆಪಿ ಮುಂದಿಟ್ಟಿದೆ.