ಬೆಂಗಳೂರು: ನಿರ್ಮಲಾ ಸೀತಾರಾಮನ್ ಅವರು ನೀಡಿದ ಬಜೆಟ್ ಅನ್ನು ನಾವು ಖಾಲಿ ಡ್ರಮ್ ಎಂದು ನಾವು ವಿವರಿಸುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಕುಟುಕಿದರು.
ವಿಧಾನಸಭೆಯ ಚರ್ಚೆಯ ನಡುವೆ ಅರ್. ಅಶೋಕ್ ಅವರ ಮಾತಿಗೆ ಶಿವಕುಮಾರ್ ಅವರು ಮಂಗಳವಾರ ತಿರುಗೇಟು ನೀಡಿದರು. ಬಜೆಟ್ ಮುಂಚಿತವಾಗಿಯೇ ನೀವು ಚೊಂಬನ್ನು ಸಿದ್ಧ ಮಾಡಿಟ್ಟುಕೊಂಡಿದ್ದೀರಿ, ಬಜೆಟ್ ನಂತರ ಮಾರುಕಟ್ಟೆಯಿಂದ ತಂದು ಸಿದ್ಧ ಮಾಡಿಕೊಂಡಿದ್ದರೆ ಏನಾದರೂ ಹೇಳಬಹುದಿತ್ತು. ಅಂದರೆ ನಿಮ್ಮ ಮನಸ್ಥಿತಿ ಹೇಗಿದೆ ಎಂದು ಇದರಿಂದ ತಿಳಿಯಬಹುದು. ನಿಮ್ಮ ಭಾವನೆ ಹೇಗಿದೆ ನೋಡಿ"
ಸಿದ್ದರಾಮಯ್ಯ ಅವರಿಗೆ ಶಿವಕುಮಾರ್ ಅವರು ಬೆಂಬಲಿಸುತ್ತಿದ್ದಾರೆ ಎಂದರೆ ಒಳ್ಳೆ ಸುದ್ದಿ ಇರಬಹುದು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದಾಗ, "ನೋಡಪ್ಪ, ನೀವು ಅದೆಲ್ಲಾ ಕನಸನ್ನು ಕಾಣಲು ಹೋಗಬೇಡಿ" ಎಂದರು.
ಬಜೆಟ್ ಪೂರ್ವಾಭಾವಿ ಸಭೆಗೆ ಹೋಗಿಲ್ಲ ಸೇರಿದಂತೆ ಬಜೆಟ್ ಬಗ್ಗೆ ನೀವು ಮಾತನಾಡಿಲ್ಲ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದಾಗ, "ಏನೇನು ಹೇಳಬೇಕೊ ಅದೆಲ್ಲವನ್ನು ಹೇಳಿದ್ದೇನೆ" ಎಂದರು.
ಇ ಖಾತಾ ಮಾಡಿಕೊಡಲು ಲಂಚ ತೆಗೆದುಕೊಳ್ಳಲಾಗುತ್ತಿದೆ, ಲೂಟಿ ಮಾಡಲಾಗುತ್ತಿದೆ ಎಂದು ಆರ್.ಅಶೋಕ್ ಟೀಕೆ ಮಾಡಿದಾಗ, "ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮನೆ ಬಾಗಿಲಿಗೆ ಖಾತೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವೇ ಉತ್ತಮ ಯೋಜನೆ ಎಂದು ಪ್ರಶಸ್ತಿ ನೀಡಿದೆ. ಪ್ರಶಸ್ತಿ ನೀಡಿ ನೀವೆ ಹೀಗೆ ಮಾತನಾಡಿದರೆ ಹೇಗೆ? ಭೂಮಿ ಗ್ಯಾರಂಟಿ ನೀಡಿ ಇ ಖಾತೆ ಯೋಜನೆ ನೀಡಿರುವುದು ಇಡೀ ದೇಶಕ್ಕೆ ಮಾದರಿ ಯೋಜನೆ.
ಈ ಹಿಂದೆಯೂ ಸಹ ಭೂಮಿ ಯೋಜನೆ ಅಡಿ ಪಹಣಿ ನೀಡುವ ಯೋಜನೆ ಆರಂಭಿಸಿದ್ದೆವು. ಬೆಂಗಳೂರಿನ ಶಾಸಕರು ಎಲ್ಲರೂ ಇಲ್ಲೇ ಇದ್ದಾರೆ. 10 ಸಾವಿರ ಲಂಚ ಕೇಳಿದವರು ಯಾರು ಎಂದು ಪಟ್ಟಿ ಕೊಡಿ. ಸಾಯಂಕಾಲದ ಒಳಗೆ ಅವರನ್ನು ಅಮಾನತು ಮಾಡುತ್ತೇವೆ" ಎಂದರು.
"ಬೆಂಗಳೂರು ನಗರದಲ್ಲಿ 10 ಲಕ್ಷ ಖಾತೆ ವಿತರಣೆ ಮಾಡಿದ್ದೇವೆ. ಇದು ದಾಖಲೆಗಳಲ್ಲಿದೆ. ಕಂದಾಯ ಇಲಾಖೆಯಿಂದ 1.11 ಕೋಟಿ ಖಾತೆ ವಿತರಿಸಲಾಗಿದೆ. ನಾವು ಹೇಗೆ ಖಾತೆ ನೀಡುತ್ತಿದ್ದೇವೆ ಎಂದು ನೀವು ನೋಡಿದ್ದೀರಾ? ಸ್ವಯಂಚಾಲಿತ ಅನುಮೋದನೆಯನ್ನು ಸಹ ನೀಡಲಾಗಿದೆ. ಕೆಲವೊಂದು ಸಮಯದಲ್ಲಿ ತಾಂತ್ರಿಕ ತೊಂದರೆ ಆಗಿದೆ. ಇದಕ್ಕೆ ಇನ್ನೆರಡು ದಿನಗಳಲ್ಲಿ ಪರಿಹಾರ ನೀಡಿ ಸದನದಲ್ಲಿಯೇ ಇದರ ಬಗ್ಗೆ ತಿಳಿಸುತ್ತೇನೆ" ಎಂದರು.
"ಹಸಿರು ವಲಯ, ವಂಚನೆ ಪ್ರಕರಣ, ಸರ್ಕಾರಿ ಭೂಮಿ ಇಂತಹ ಪ್ರಕರಣಗಳಲ್ಲಿ ತೊಂದರೆಯಾಗುತ್ತಿದೆ" ಎಂದು ಉತ್ತರಿಸಿದರು.