ದಾವಣಗೆರೆ: ದಾವಣಗೆರೆ ರಾಜಕಾರಣದಲ್ಲಿ ಶಾಮನೂರು ಕುಟುಂಬದ ಪ್ರಾಬಲ್ಯದ ಕುರಿತು ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ವ್ಯಂಗ್ಯವಾಡಿದ್ದು, ಒಂದು ಕಾಲದಲ್ಲಿ ಮನೆಗೆ ಬಿ ಫಾರಂ ಬರುತ್ತೆ ಅಂತಿದ್ರು, ಈಗ ಅದೇ ಟಿಕೆಟ್ ಗಾಗಿ ಅಲೆಯುತ್ತಿದ್ದಾರೆ.. ಎಂದು ಕಿಡಿಕಾರಿದ್ದಾರೆ.
ಹೌದು.. ಉಪ ಚುನಾವಣೆ ಟಿಕೆಟ್ ನೀಡಿಕೆ ವಿಚಾರ ರಾಜ್ಯ ಕಾಂಗ್ರೆಸ್ ನಲ್ಲಿ ಕೋಲಾಹಲವನ್ನೇ ಸೃಷ್ಟಿ ಮಾಡುತ್ತಿದ್ದು, ಟಿಕೆಟ್ ಹಂಚಿಕೆ ಸಂಬಂಧ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ರಾಜ್ಯ ನಾಯಕರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.
ದಾವಣಗೆರೆ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಶಾಮನೂರು ಕುಟುಂಬ ಮತ್ತು ಮುಸ್ಲಿಂ ಸಮುದಾಯದ ನಾಯಕರ ನಡುವೆ ದೊಡ್ಡ ಹಗ್ಗಜಗ್ಗಾಟವೇ ನಡೆದಿದೆ ಎಂದು ಹೇಳಲಾಗಿದೆ.
ಈ ನಡುವೆ ಕಾಂಗ್ರೆಸ್ ಟಿಕೆಟ್ ಕಗ್ಗಂಟಾಗಿರುವ ಬೆನ್ನಲ್ಲೇ ಮಾತನಾಡಿರುವ ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರು, "ಒಂದು ಕಾಲದಲ್ಲಿ ಬಿ-ಫಾರಂ ನಮ್ಮ ಮನೆಗೇ ಹುಡುಕಿಕೊಂಡು ಬರುತ್ತಿತ್ತು ಅಂತಿದ್ರು, ಆದರೆ ಈಗ ಬಿ-ಫಾರಂಗಾಗಿ ಅಲೆಯುವ ಕಾಲ ಬಂದಿದೆ.. ಕೋಟೆ ಕಟ್ಟಿದೋರೆಲ್ಲ ಇಲ್ಲಿ ಮಣ್ಣಾಗಿ ಹೋಗಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.
ರಾಜಕೀಯ ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂದು ಎಚ್ಚರಿಸಿದ ಶಿವಶಂಕರ್, "ಸೂರ್ಯ ಮೇಲೆ ಏರಿದ ಮೇಲೆ ಕೆಳಗೆ ಇಳಿಯಲೇಬೇಕು. ಕೋಟೆ ಕಟ್ಟಿದವರು ಇತಿಹಾಸದಲ್ಲಿ ಮಣ್ಣಾಗಿ ಹೋಗಿದ್ದಾರೆ. ರಾಜಕೀಯ ಸ್ಥಾನಮಾನಗಳು ಯಾವತ್ತೂ ಸ್ಥಿರವಲ್ಲ. ಕಾಲ ಬದಲಾದಂತೆ ಬದಲಾವಣೆ ಅನಿವಾರ್ಯ," ಎಂದು ಪರೋಕ್ಷವಾಗಿ ಶಾಮನೂರು ಕುಟುಂಬದ ಹಿಡಿತ ಸಡಿಲವಾಗುತ್ತಿದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.
ಎನ್ ಡಿಎ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ
ಅಂದಹಾಗೆ ಉಪಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಜೆಡಿಎಸ್ ಸಂಪೂರ್ಣ ಬೆಂಬಲ ಘೋಷಿಸಿದೆ. ಈ ಕುರಿತು ಮಾತನಾಡಿದ ಶಿವಶಂಕರ್"ನಮ್ಮ ಪಕ್ಷದ ಬೆಂಬಲ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಇದೆ.
ಅವರ ಪರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಇದು ವಿಚಿತ್ರ ಚುನಾವಣೆ. ಇದು ಕೇವಲ ಮತದಾನವಲ್ಲ, ಬದಲಿಗೆ 'ಶ್ರೀಸಾಮಾನ್ಯ Vs ಶ್ರೀಮಂತಿಕೆ' ನಡುವಿನ ಹೋರಾಟ' ಎಂದು ಹೇಳಿದ್ದಾರೆ. ಕೇವಲ ಹಣ ಬಲದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದು ಈ ಬಾರಿ ಸಾಬೀತಾಗಲಿದೆ. ಇಲ್ಲಿ ಜನಬಲವೇ ಅಂತಿಮ ಎಂದು ಹೇಳಿದ್ದಾರೆ.
ಶಾಮನೂರು ಕುಟುಂಬಕ್ಕೆ ಮುಸ್ಲಿಂ ನಾಯಕರ ವಿರೋಧ
ಇನ್ನು ದಾವಣಗೆರೆ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಶಾಮನೂರು ಕುಟುಂಬಕ್ಕೆ ಮುಸ್ಲಿಂ ಸಮುದಾಯದ ಪ್ರಬಲ ಪ್ರತಿರೋಧ ವ್ಯಕ್ತವಾಗುತ್ತಿದೆ ಎನ್ನಲಾಗಿದೆ. ಶತಾಯಗತಾಯ ಈ ಬಾರಿ ಮುಸ್ಲಿಂ ನಾಯಕರಿಗೇ ಟಿಕೆಟ್ ನೀಡಬೇಕು ಎಂದು ಸ್ಥಳೀಯ ಮುಸ್ಲಿಂ ಮುಖಂಡರು ಪಟ್ಟು ಹಿಡಿದಿದ್ದಾರೆ.
ಈ ವಿಚಾರವಾಗಿಯೂ ಮಾತನಾಡಿದ ಶಿವಶಂಕರ್ ಅವರು, 'ದಿವಂಗತ ಶಾಮನೂರು ಶಿವಶಂಕರಪ್ಪ ಅವರು ಇಲ್ಲದ ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಂತಾಗಿದೆ. ಒಂದು ವೇಳೆ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಈ ಬಾರಿ ಪೈಪೋಟಿ ಮತ್ತಷ್ಟು ಹೆಚ್ಚಾಗಲಿದೆ" ಎಂದು ಹೇಳಿದರು.