ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ, ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು ಎಂದು ಎಂಎಲ್ಸಿ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಿಎಂ’ ಎಂದರೆ ನಾವು ಪ್ರಧಾನಮಂತ್ರಿ ಎಂದು ತಿಳಿದುಕೊಂಡಿದ್ದೇವೆ. ಇವರು ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು. ಕರ್ನಾಟಕ ರಾಜ್ಯದ ರಾಜಕಾರಣದ ಬಗ್ಗೆ ಕಮ್ಮಿ ಮಾತಾಡೋದು ಒಳ್ಳೆಯದು.
ನರೇಂದ್ರ ಮೋದಿಯವರನ್ನು ನಾನು ಯಾವಾಗ ಬೇಕಾದರೂ ಇಳಿಸಬಹುದು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಕರ್ನಾಟಕ ಸಿಎಂ ಕುರ್ಚಿ ಬಗ್ಗೆ ಮಾತಾಡುವ ಮೊದಲು, ಅವರ ಕುರ್ಚಿ ಗಟ್ಟಿಯಾಗಿದೆಯೇ ಎಂದು ನೋಡಿಕೊಳ್ಳಲಿ ಎಂದಿದ್ದಾರೆ.
ಎಪ್ಸ್ಟೀನ್ ಫೈಲ್ಸ್ ನಲ್ಲಿ ಇವರ ಲೀಲೆಗಳು ಹೊರಗಡೆ ಬರುತ್ತೆ. ಆಗ ಕುರ್ಚಿ ಹೇಗೆ ಉಳಿಸಿಕೊಳ್ಳುತ್ತಾರೆ ಎಂದು ಜನರಿಗೆ ಹೇಳಿದರೆ ಒಳ್ಳೆಯದು. ಮೊದಲು ಅದಕ್ಕೆ ಉತ್ತರ ಕೊಡಲಿ. ಈಗ ಗುಜರಾತ್ ಮಾಡೆಲ್ ಮರೆತು ಬಿಟ್ಟಿದ್ದಾರೆ. 12 ವರ್ಷಗಳಲ್ಲಿ ಅರಾಜಕತೆ ಸೃಷ್ಟಿ ಮಾಡಿದವರು ಇವರು ಎಂದು ಹರಿಪ್ರಸಾದ್ ಕಿಡಿಕಾರಿದ್ದಾರೆ.
ಬಿಹಾರದಲ್ಲಿ ನಿತೀಶ್ ಕುಮಾರ್, ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ, ಎನ್ಸಿಪಿ, ಪಂಜಾಬ್ನಲ್ಲಿ ಪ್ರಕಾಶ್ಸಿಂಗ್ ಬಾದಲ್ ಅವರನ್ನು ಯಾವ ರೀತಿ ಮುಗಿಸಿದರು. ಇದಕ್ಕೆಲ್ಲ ಕಾರಣ ಭಸ್ಮಾಸುರ ಆಗಿರುವ ನರೇಂದ್ರ ಮೋದಿ. ಅವರು ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ಕೈ ಇಡದಿದ್ದರೆ ಸಾಕು ಎಂದು ಹರಿಪ್ರಸಾದ್ ಕುಟುಕಿದರು.
ರಾಷ್ಟ್ರ ಅಧೋಗತಿಗೆ ಬಂದಿದೆ ಅನ್ನೋದು ಯಾರಿಗೂ ಗೊತ್ತಾಗುತ್ತಿಲ್ಲ. ಫೆ.28 ರಂದು ಪಶ್ಚಿಮ ಏಷ್ಯಾ ದಲ್ಲಿ ಪ್ರಾರಂಭವಾದ ಸಮಸ್ಯೆಗಳ ಬಗ್ಗೆ ರಾಹುಲ್ ಗಾಂಧಿ ಬಹಳ ಸ್ಪಷ್ಟವಾಗಿ ಹೇಳಿದ್ದರು. ದೇಶ ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತೆ, ಇದರ ಬಗ್ಗೆ ಕ್ರಮ ವಹಿಸಬೇಕು ಎಂದು ಎಚ್ಚರಿಕೆ ಕೊಟ್ಟಿದ್ದರು. ಆದರೆ ಅವರ ಮಾತನ್ನು ಬಾಲಿಶ ಅಂತ ತಳ್ಳಿ ಹಾಕಿದ್ದರು ಎಂದು ಅವರು ಹೇಳಿದರು.
ಇವರಿಗೆ ನಾಲ್ಕು ತಿಂಗಳು ಚುನಾವಣೆ ಮಾಡಬೇಕಾಗಿತ್ತು. ಎಲ್ಲಿ ಹೋದರೂ ವಿರೋಧ ಪಕ್ಷವನ್ನು ನಂಬಬೇಡಿ, ಕಾಂಗ್ರೆಸ್ ನಂಬಬೇಡಿ ಅವರು ಸುಳ್ಳು ಹೇಳುತ್ತಿದ್ದಾರೆ ಎಂದಿದ್ದರು. ಯಾವುದೆ ತೊಂದರೆ ಆಗಲ್ಲ ಎಂದು ಭಾಷಣ ಬಿಗಿದರು. ಈಗ ಪೆಟ್ರೋಲ್ ಮಿತವ್ಯಯ ಮಾಡಿ, ಚಿನ್ನ ಖರೀದಿ ಮಾಡಬೇಡಿ, ವಿದೇಶ ಪ್ರವಾಸ ಹೋಗಬೇಡಿ ಎನ್ನುತ್ತಿದ್ದಾರೆ. ಇವರು ಏನು ಮಾಡುತ್ತಿದ್ದಾರೆ? ಕಳೆದ 12 ವರ್ಷದಿಂದ ಇವರಿಗೆ ಯಾವ ಹೊಣೆಗಾರಿಕೆ ಇತ್ತು ಎಂದು ಹೇಳಲಿ ಎಂದು ಹರಿಪ್ರಸಾದ್ ಆಗ್ರಹಿಸಿದರು.
ಹೂಗ್ಲಿ ನದಿಯಲ್ಲಿ ದೋಣಿ ವಿಹಾರ ಹೋಗುವಾಗ ಮಿತವ್ಯಯ ಕಾಣಲಿಲ್ವಾ? ಜಲ್ಮುರಿ ತಿನ್ನೋಕೆ ಹೋದಾಗ ಮಿತವ್ಯಯ ಕಂಡಿಲ್ಲ. ಸಿಕ್ಕಿಂನಲ್ಲಿ ಫುಟ್ಬಾಲ್ ಆಡೋಕೆ ಹೋದಾಗ ಕಾಣಲಿಲ್ಲ. ವಾರಾಣಸಿಯಲ್ಲಿ ದೇವಸ್ಥಾನದ ದರ್ಶನಕ್ಕೆ ಹೋದಾಗ ಕಾಣಲಿಲ್ಲ. ಬಂಗಾಳದಲ್ಲಿ ಲಕ್ಷಾಂತರ ಜನರ ಸಾರ್ವಜನಿಕ ಸಭೆ ಮಾಡುವಾಗ ಮಿತವ್ಯಯ ಕಾಣಲಿಲ್ಲ. ನಾವು ಬೇರೆಯವರಿಗೆ ಹೇಳುವಾಗ ಮೊದಲು ಅನುಸರಿಸಬೇಕು. ಪ್ರಧಾನಿ ತಮ್ಮ ಮನೆಯಲ್ಲಿ ಮೊದಲು ಮಿತವ್ಯಯ ಪ್ರಾರಂಭ ಮಾಡಲಿ ಎಂದು ಅವರು ಹೇಳಿದರು.