ನವದೆಹಲಿ: ಕಳೆದ ರಾತ್ರಿ ದೆಹಲಿಯ ಕರ್ನಾಟಕ ಭವನದಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಸಭೆ ನಡೆಸಿದ್ದಾರೆ. ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಹಲವು ತಿಂಗಳಿನಿಂದ ಇದೆ ಎನ್ನಲಾಗುತ್ತಿರುವ ಅಧಿಕಾರ ಹಸ್ತಾಂತರದ ಬೆಳವಣಿಗೆಗಳು, ನಿನ್ನೆ ರಾತ್ರಿ ನಿರ್ಣಾಯಕ ಹಂತ ತಲುಪಿತ್ತು. ಮುಖ್ಯಮಂತ್ರಿ ಹುದ್ದೆಗೆ ಇಂದೋ ಅಥವಾ ನಾಳೆಯೋ, ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಪ್ರಬಲವಾಗಿ ಕೇಳಿಬರುತ್ತಿದೆ. ನಿನ್ನೆ ಸಭೆ ಮುಗಿಸಿ ಹೊರಬಂದ ಡಿ ಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಸುತಾರಾಂ ಒಪ್ಪಲಿಲ್ಲ.
ಈ ಮಧ್ಯೆ ಇಂದು ಬೆಂಗಳೂರಿಗೆ ಹೊರಟಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೊನೆಯ ಕ್ಷಣದಲ್ಲಿ ಟ್ರಿಪ್ ಕ್ಯಾನ್ಸಲ್ ಮಾಡಿದ್ದಾರೆ.
ಇಂದು ಬೆಂಗಳೂರಿಗೆ ವಾಪಸ್ ಬರುವ ಫ್ಲೈಟ್ ಟಿಕೆಟ್ ಕ್ಯಾನ್ಸಲ್
ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯನವರ ಜೊತೆ ಕ್ಲೋಸ್ ಡೋರ್ ಮೀಟಿಂಗ್ ಮಾಡಿದ್ದ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರ ಬಳಿ ಚರ್ಚಿಸಿ, ಫೈನಲ್ ಅನುಮತಿಯನ್ನು ಪಡೆದು, ಅಂತಿಮ ನಿರ್ಧಾರಕ್ಕೆ ಬಂದರು ಎಂದು ಹೇಳಲಾಗುತ್ತಿದೆ.
ಸದ್ಯ ಹರಿದಾಡುವ ಸುದ್ದಿಗಳ ಪ್ರಕಾರ, ಸಿದ್ದರಾಮಯ್ಯನವರು ಇಂದು ಅಥವಾ ನಾಳೆ ಅಧಿಕೃತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಆದರೆ, ಮುಖ್ಯಮಂತ್ರಿ ಹುದ್ದೆಗೆ ಯಾರನ್ನು ಹೈಕಮಾಂಡ್ ಆಯ್ಕೆ ಮಾಡುತ್ತೆ? ಡಿಕೆ ಶಿವಕುಮಾರ್ ಅಥವಾ ವರಿಷ್ಠರ ತಲೆಯಲ್ಲಿ ಬೇರೊಂದು ಹೆಸರಿದೆಯಾ ಎನ್ನುವ ಅನುಮಾನ ಬರುತ್ತಿದೆ. ಡಿಸಿಎಂ ದಿಢೀರನೇ ತಮ್ಮ ಟ್ರಿಪ್ ನ್ನು ಕ್ಯಾನ್ಸಲ್ ಮಾಡಿರುವುದು ಕಾರಣವಾಗಿದೆ.
ಇಂದು ದೆಹಲಿಯಲ್ಲೇ ಉಳಿಯಲಿದ್ದಾರೆ ಡಿ ಕೆ ಶಿವಕುಮಾರ್
ನಿನ್ನೆಯ ಮಾಹಿತಿ ಪ್ರಕಾರ ಇಂದು ಮಧ್ಯಾಹ್ನ 12.15ರ ಫ್ಲೈಟ್ ನಲ್ಲಿ ಡಿಕೆ ಶಿವಕುಮಾರ್ ಬೆಂಗಳೂರಿಗೆ ವಾಪಸ್ ಆಗಬೇಕಿತ್ತು. ಇಂಡಿಗೋ ವಿಮಾನದಲ್ಲಿ ಇಂದು ವಾಪಸ್ ಬಂದು, ಸಂಜೆ 4.30ಕ್ಕೆ ಗ್ರೇಟರ್ ಬೆಂಗಳೂರು ಚುನಾವಣೆಗೆ ಸಂಬಂಧಿಸಿದಂತೆ, ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಮೀಟಿಂಗ್ ನಲ್ಲಿ ಭಾಗವಹಿಸಬೇಕಿತ್ತು. ಆದರೆ, ಇದಾದ ಸ್ವಲ್ಪ ಹೊತ್ತಿನಲ್ಲೇ, ಅವರ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿದೆ. ಅದರ ಪ್ರಕಾರ ಅವರು ಇಂದು ದೆಹಲಿಯಲ್ಲೇ ಉಳಿದುಕೊಳ್ಳಲಿದ್ದಾರೆ.