ಬೆಂಗಳೂರು: ಇಸ್ಲಾಂ ಧರ್ಮ ಶ್ರೇಷ್ಠ ಎಂದು ನನಗೆ ಕಾಣುತ್ತಿದೆ ಎಂಬ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸಚಿವರ ಹೇಳಿಕೆಗೆ ಬಿಜೆಪಿ ನಾಯಕರಾದ ಮಾಜಿ ಸಂಸದ ಪ್ರತಾಪ್ ಸಿಂಹ, ಎಂಎಲ್ಸಿ ಸಿ ಟಿ ರವಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಆರು ಬಾರಿ ಶಾಸಕರಾಗಿ ಸಚಿವರಾದ್ರೂ ರಾಯರೆಡ್ಡಿಗೆ ಸಮಾಧಾನ ಇಲ್ಲ, ಎಲ್ಲೂ ಸಿಗದ ಸುಖ ಇಸ್ಲಾಂ ಧರ್ಮದಲ್ಲಿ ಸಿಗುತ್ತದೆ ಎಂದು ಅವರು ಅಂದುಕೊಂಡಿರಬಹುದು. ಸತ್ತ ಮೇಲೆ 72 ಕನ್ಯೆಯರು ಸಿಗಬಹುದು ಎಂದು ಅಂದ್ಕೊಂಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಮಾನವತಾವಾದಿ, ದಾರ್ಶನಿಕ ಬಸವಣ್ಣನವರ ಪಂಗಡಕ್ಕೆ ಸೇರಿದವರು ನೀವು, ಈ ರೀತಿ ಮೈಕ್ ಮುಂದೆ ನಿಮ್ಮ ಆಸೆಗಳನ್ನು ಹೇಳಿ ಬಾಯಿನೀರು ಸುರಿಸಬೇಡಿ ಸರ್ ಎಂದು ವ್ಯಂಗ್ಯವಾಡಿದ್ದಾರೆ.
ಬಸವರಾಜ ರಾಯರೆಡ್ಡಿಯವರು ನಾನು ಮಂದಿರಕ್ಕೆ ಹೋಗಲ್ಲ, ಮಠಕ್ಕೆ ಹೋಗಲ್ಲ, ಮೆಕ್ಕಾಗೆ ಹೋಗಬೇಕೆಂದು ಆಸೆ ಇದೆ, ಇಸ್ಲಾಂ ಒಂದೇ ಶ್ರೇಷ್ಠ ಧರ್ಮ ಎಂದು ಹೇಳಿದ್ದಾರೆ, ರಾಯರೆಡ್ಡಿಯವರು 1985ರಲ್ಲಿ ಮೊದಲ ಬಾರಿಗೆ ಶಾಸಕರಾದವರು. ಅಷ್ಟು ಬಾರಿ ಶಾಸಕರಾದರೂ, ಸಚಿವರಾದರೂ ಅವರಿಗೆ ಸಮಾಧಾನ ಸಿಕ್ಕಿಲ್ಲವೆಂದಾದರೆ ಇಸ್ಲಾಂ ಧರ್ಮದಲ್ಲಿ ಲಾಭವಿದೆ ಎಂದು ಅವರಿಗೆ ಅನಿಸಿರಬೇಕು. ಇಸ್ಲಾಂ ಧರ್ಮಕ್ಕೆ ಮತಾಂತರವಾದರೆ ಭೂಲೋಕದಲ್ಲಿ ನಾಲ್ಕು ಜನರ ಜೊತೆ ಸುಖಿಸಬಹುದು, ಭೂಲೋಕದಲ್ಲಿ ಪಯಣ ಮುಗಿಸಿ ಸ್ವರ್ಗಲೋಕದಲ್ಲಿ 72 ಮಂದಿ ಜೊತೆ ಸುಖ ಅನುಭವಿಸಬಹುದು ಎಂದು ಯೋಚಿಸುತ್ತಿರಬಹುದು ಎಂದು ವ್ಯಂಗ್ಯವಾಡಿದರು.
ಇಸ್ಲಾಂ ಧರ್ಮದಲ್ಲಿ ನಾಲ್ಕೈದು ಮದುವೆ ಆಗುವ ಅವಕಾಶ ಇದೆ. ನಾಲ್ಕೈದು ಮದುವೆ ಆಗುವ ಆಸೆಯಿಂದ ಮುಸ್ಲಿಂ ಧರ್ಮ ಶ್ರೇಷ್ಠವೆಂದು ಬಸವರಾಜ ರಾಯರೆಡ್ಡಿ ಹೇಳಿರಬಹುದು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲೇ ಇಸ್ಲಾಂ ಧರ್ಮ ಶ್ರೇಷ್ಠವೆಂದು ರಾಯರೆಡ್ಡಿ ಹೇಳಿದ್ದಾರೆ. ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ ಇವೆಲ್ಲವೂ ಮತಗಳು. ಇವೆಲ್ಲವೂ ವ್ಯಕ್ತಿಯಿಂದ ಸ್ಥಾಪಿಸಲ್ಪಟ್ಟಿವೆ. ಸನಾತನ ಎಂಬುದು ಜಗತ್ತಿನಲ್ಲೇ ಶ್ರೇಷ್ಠವಾದ ಧರ್ಮವಾಗಿದೆ. ಮುಸ್ಲಿಂ ಧರ್ಮದಲ್ಲಿ ಪ್ರಶ್ನಿಸೋದಕ್ಕೆ ಅವಕಾಶವೇ ಇಲ್ಲ. ಸನಾತನ ಧರ್ಮಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ನಾಶ ಮಾಡೋದಕ್ಕೆ ಬಂದೋರೆಲ್ಲ ನಾಶವಾಗಿ ಹೋಗಿದ್ದಾರೆ ಎಂದು ಹೇಳಿದರು.
ಮುಸ್ಲಿಂ ಧರ್ಮದಲ್ಲಿ ಸತ್ತ ಮೇಲೆ ಸ್ವರ್ಗದಲ್ಲಿ 73 ಕನ್ಯೆಯರು ಸಿಗುತ್ತಾರೆ ಎಂದೆಲ್ಲಾ ಹೇಳುತ್ತಾರೆ. ಇಲ್ಲಿ ಸಾಯುವ ಮೊದಲು ಸಿಗದಿದ್ದು ಸತ್ತ ಮೇಲೆ ದುರಾಸೆ ಈಡೇರಲಿ ಎಂಬ ಆಸೆ ರಾಯರೆಡ್ಡಿ ಅವರಿಗೆ ಇರಬಹುದು. ಅಂಬೇಂಡ್ಕರ್ ಬರೆದಿರುವ ʼಮೈ ಥಾಟ್ಸ್ ಆಫ್ ಪಾಕಿಸ್ತಾನ್ʼ ಪುಸ್ತಕವನ್ನು ಒಮ್ಮೆ ಓದಿ. ಅದರಲ್ಲಿ ಹೇಗೆ ಮಹಿಳೆಯರ ಶೋಷಣೆಯಾಗುತ್ತದೆ? ಹೇಗೆ ಬುರ್ಕಾ ಮಹಿಳೆಯರನ್ನು ಶೋಷಣೆ ಮಾಡುತ್ತೆ? ಎಂಬುವುದರ ಬಗ್ಗೆ ಬರೆದಿದ್ದಾರೆ. ಮನುಸ್ಮೃತಿ ಮಹಿಳೆಯನ್ನು ಇನ್ನೊಬ್ಬರ ಮೇಲೆ ಅವಲಂಬನೆಯಾಗುವ ರೀತಿ ಮಾಡುತ್ತದೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ರಾಹುಲ್ ಗಾಂಧಿ ಆಗಾಗ ಎಡಬಿಡಂಗಿ ತರ ಮಾತನಾಡುತ್ತಾರೆ ಎಂದರು.
ಮುಸ್ಲಿಂ ಧರ್ಮದಲ್ಲಿ ಮಹಿಳೆಯನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ಅಂಬೇಡ್ಕರ್ ಸ್ಪಷ್ಟವಾಗಿ ಹೇಳಿದ್ದಾರೆ. ಜಾಗತಿಕ ಭಯೋತ್ಪಾದನೆಗೆ ಪ್ರಮಖವಾಗಿ ಇಸ್ಲಾಂ ತತ್ವ ಕಾರಣ. ಗೂಗಲ್ ಸರ್ಚ್ ಮಾಡಿ ನೋಡಿದರೆ ಭಯೋತ್ಪಾದನೆಗೆ ಇಸ್ಲಾಂ ಚಿಂತನೆಗಳೇ ಕಾರಣ ಎಂದು ಹೇಳುತ್ತದೆ. ಭಯೋತ್ಪಾದಕರಿಗೆ ಭಯಗೊಂಡು ಬಸವರಾಜ್ ರಾಯರೆಡ್ಡಿ ಇಸ್ಲಾಂ ಧರ್ಮ ಶ್ರೇಷ್ಠ ಅಂತ ಹೇಳಿರಬಹುದು. ಸುಳ್ಳು ಹೇಳಿದ್ರೆ ನನ್ನನ್ನು ಭಯೋತ್ಪಾದಕರು ಬಿಟ್ಟು ಬಿಡುತ್ತಾರೆ. ಸತ್ಯ ಹೇಳಿದ್ರೆ ಎಲ್ಲಿ ನನ್ನನ್ನೂ ಕೊಂದು ಬಿಡುತ್ತಾರೋ ಅನ್ನೋ ಭಯದಿಂದ ಹೇಳಿರಬಹುದು ಎಂದು ವ್ಯಂಗ್ಯವಾಡಿದರು.