ಬೆಂಗಳೂರು: ಧನ ನಾಯಕ ಆಗೋದು ಸುಲಭ ಆದರೆ ಜನ ನಾಯಕ ಆಗೋದು ಕಷ್ಟ. ಕಾಸು ಕೊಟ್ಟು ಸ್ಥಾನಮಾನ ಕೊಂಡುಕೊಳ್ಳುವುದು ಸುಲಭ ಆದರೆ ಜನಸಾಮಾನ್ಯರ ಹೃದಯದಲ್ಲಿ ಸ್ಥಾನ ಪಡೆಯುವುದು ಕಷ್ಟ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅಶೋಕ್, ನಾನ್ಯಾರು ಗೊತ್ತಾ, ಗೊತ್ತಿಲ್ಲ ಸ್ವಾಮಿ. ಸ್ವಪ್ರಚಾರಕ್ಕೆ, ಇಮೇಜ್ ಮೇಕ್ ಓವರ್ ಗೆ ಎಷ್ಟು ಕೋಟಿ ಕೋಟಿ ಸುರಿದರೂ, ದಿನಬೆಳಗಾದರೆ ಪತ್ರಿಕೆಗಳಲ್ಲಿ ಫುಲ್ ಪೇಜ್ ಜಾಹೀರಾತು ಕೊಟ್ಟರೂ, ಸಾಮಾಜಿಕ ಜಾಲತಾಣಗಳಲ್ಲಿ ಬಿಲ್ಡಪ್ ಕೊಟ್ಟರೂ ಜನಸಾಮಾನ್ಯರಿಗೆ "ನಾನು ಯಾರು" ಎಂಬುದೇ ಗೊತ್ತಿಲ್ಲ ಎನ್ನುವ ಸತ್ಯ ಅರಿವಾಗಿ ಮುಖ್ಯಮಂತ್ರಿಗಳು ಪಾಪ ಹತಾಶರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಆ ಹತಾಶೆಯಲ್ಲಿ, ಇವತ್ತು ನೂರು ದಿನಗಳು ಪೂರೈಸಿದ ನೆಪದಲ್ಲಿ, ಇನ್ನೂ ಹತ್ತಾರು ಕೋಟಿ ಖರ್ಚು ಮಾಡಿ ದೊಡ್ಡ ದೊಡ್ಡ ಕಾರ್ಯಕ್ರಮ, ಭರ್ಜರಿ ದೀಪಾಲಂಕಾರ ಮಾಡಿಸುತ್ತಿದ್ದಾರೆ. ಸಿಎಂ ಡಿಕೆ ಶಿವಕುಮಾರ್ ಅವರೇ, ಜನರ ತೆರಿಗೆ ಹಣದಲ್ಲಿ ವಿಧಾನಸೌಧದ ಬ್ಯಾಂಕೆಟ್ ಹಾಲಿನಲ್ಲಿ ಅಬ್ಬರದ ದರ್ಬಾರು ಮಾಡುವುದು ಸುಲಭ, ಆದರೆ ಜನಸಾಮಾನ್ಯರ ಹೃದಯದಲ್ಲಿ ಸ್ಥಾನ ಪಡೆಯುವುದು ಕಷ್ಟ.
"ನೀವ್ಯಾರು" ಎಂದು ಜನಸಾಮಾನ್ಯರಿಗೆ ಗೊತ್ತಾಗಬೇಕಾದರೆ, ಜನರ ಬದುಕಿನಲ್ಲಿ ಬದಲಾವಣೆ ತನ್ನಿ. ರಾಜ್ಯದ ಸಮಸ್ಯೆಗಳಿಗೆ SOLUTION ಬೇಕು, SLOGAN ಅಲ್ಲ. ಜನ ಸಾಮಾನ್ಯರು ನೆನಪಿನಲ್ಲಿ ಇಟ್ಟುಕೊಳ್ಳುವುದು ಬದುಕು ಕಟ್ಟಿಕೊಳ್ಳುವ "ಅವಕಾಶ" ಸೃಷ್ಟಿಸಿದವರನ್ನು; ಕೆಲಸಕ್ಕೆ ಬಾರದ ಅಬ್ಬರದ "ಸಮಾವೇಶ"ಗಳನ್ನು ಮಾಡಿದವರನ್ನಲ್ಲ ಎಂದು ಸಲಹೆ ನೀಡಿದ್ದಾರೆ.