ಮಂಗಳ ಯಾನ-2, ಶುಕ್ರ ಯಾನದ ಮೂಲಕ ವಿಶ್ವದಾಖಲೆ ನಿರ್ಮಿಸಲಿದೆ ಭಾರತ!
ಬೆಂಗಳೂರು: ಈಗಾಗಲೇ ಮಂಗಳ ಯಾನವನ್ನು ಯಶಸ್ವಿಗೊಳಿಸಿರುವ ಭಾರತ, ಮಂಗಳ ಯಾನ-2 ಹಾಗೂ ಶುಕ್ರ ಯಾನ ಕೈಗೊಳ್ಳುವ ಮೂಲಕ ವಿಶ್ವದಾಖಲೆ ನಿರ್ಮಿಸಲು ಸಿದ್ಧತೆ ನಡೆಸಿದೆ.
ಭೂಮಿಯ ನಂತರ ಇರುವ ಎರಡು ಗ್ರಹಗಳಿಗೆ ಯಾನ ಕೈಗೊಳ್ಳುವ ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಏಕಕಾಲಕ್ಕೆ 104 ಉಪಗ್ರಹಗಳ ಉಡಾವಣೆ ಮಾಡುವ ಸಂದರ್ಭದಲ್ಲೇ ಹೊಸ ಯೋಜನೆ ಬಗ್ಗೆಯೂ ಸುಳಿವು ನೀಡಿದೆ. ಫೆಬ್ರವರಿ 15 ರಂದು ಏಕಕಾಲಕ್ಕೆ 104 ಉಪಗ್ರಹಗಳ ಉಡಾವಣೆ ಯಶಸ್ವಿಯಾದರೆ 2014 ರಲ್ಲಿ ಏಕಕಾಲಕ್ಕೆ 37 ಉಪಗ್ರಹವನ್ನು ಉಡಾವಣೆ ಮಾಡಿದ್ದ ರಷ್ಯಾದ ದಾಖಲೆಯನ್ನು ಭಾರತ ಸರಿಗಟ್ಟಲಿದೆ.
ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ 2017-18 ನೇ ಸಾಲಿನ ಬಜೆಟ್ ನಲ್ಲಿ ಮಂಗಳ ಯಾನ-2, ಶುಕ್ರ ಯಾನದ ಬಗ್ಗೆ ಉಲ್ಲೇಖಿಸಲಾಗಿದೆ. ಮಂಗಳ ಯಾನ-2 2021-2022 ರ ವೇಳೆಗೆ ಉಡಾವಣೆಯಾಗುವ ನಿರೀಕ್ಷೆ ಇದೆ. 2013 ರಲ್ಲಿ ಮಂಗಳ ಯಾನ-1 ನ್ನು ಸಂಪೂರ್ಣ ದೇಶಿಯವಾಗಿ ಕೈಗೊಳ್ಳಲಾಗಿತ್ತು. ಆದರೆ ಮಂಗಳ ಯಾನ-2 ರಲ್ಲಿ ಫ್ರೆಂಚ್ ಸಹಯೋಗ ಸಹ ಇರಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಭಾರತ ಕೈಗೊಳ್ಳುತ್ತಿರುವ ಶುಕ್ರ ಯಾನ ಅತ್ಯಾಧುನಿಕ ಯಾನವಾಗಿದ್ದು, ಭಾರತದ ಪ್ರಥಮ ಶುಕ್ರ ಯಾನಕ್ಕೆ ನಾಸಾ ಜೊತೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಭಾರತದ ಈ ಎರಡೂ ಯೋಜನೆಗಳು ಯಶಸ್ವಿಯಾದಲ್ಲಿ ವಿಶ್ವದಾಖಲೆ ನಿರ್ಮಾಣವಾಗಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos