ಬೆಂಗಳೂರು: ಚಂದ್ರನ ಕುತೂಹಲ ಭೇಧಿಸುವ ಉದ್ದೇಶದಿಂದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಚಂದ್ರಯಾನ-3 ಯೋಜನೆ ಯಶಸ್ವಿಯಾದ ಬೆನ್ನಲ್ಲೇ, ಇದೀಗ ಸೂರ್ಯನ ಅಧ್ಯಯನಕ್ಕೆ ಇಸ್ರೋ ಮುಂದಾಗಿದ್ದು, ಯೋಜನೆ ಯಶಸ್ವಿಯಾಗುವಂತೆ ಕೋರಿ ದೇಶದಾದ್ಯಂತ ಹೋಮ-ಹವನ, ವಿಶೇ| ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿದೆ.
ಇಸ್ರೋ ಪ್ರಯತ್ನಕ್ಕೆ ಫಲ ಸಿಗಲೆಂದು ಭಕ್ತಾಧಿಗಳಿಂದ ಬಸವನಗುಡಿಯ ದೊಡ್ಡಗಣಪತಿಗೆ ಬೆಣ್ಣೆ ಅಲಂಕಾರ ಮಾಡಿ ವಿಶೇಷ ಪೂಜೆ ಮಾಡಿಸಿದ್ದಾರೆ. ಬೆಂಗಳೂರಿನಲ್ಲಿ ಅಷ್ಟೇ ಅಲ್ಲದೆ, ರಾಜ್ಯ ಹಾಗೂ ದೇಶದ ಮೂಲೆ ಮೂಲೆಗಳಲ್ಲೂ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿದೆ.
ಸೂರ್ಯಯಾನ ಉಡಾವಣೆಯು ಶನಿವಾರ ಅಂದರೆ ಇಂದು ಬೆಳಗ್ಗೆ 11.50ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದ ಲಾಂಚ್ ಪ್ಯಾಡ್ನಿಂದ ನಿಗದಿಯಾಗಿದೆ. ಉಡಾವಣಾ ಪೂರ್ವಾಭ್ಯಾಸ ಮತ್ತು ವಾಹನದ ಆಂತರಿಕ ತಪಾಸಣೆ ಎಲ್ಲವೂ ಪೂರ್ಣಗೊಂಡಿದೆ.
ಆದಿತ್ಯ-L1 ಭಾರತದ ಮೊದಲ ಸೌರ ಬಾಹ್ಯಾಕಾಶ ವೀಕ್ಷಣಾಲಯವಾಗಿದ್ದು, ಈ ಉಪಗ್ರಹವನ್ನು ಇಸ್ರೋದ PSLV-C57 ಉಡಾವಣಾ ವಾಹಕದ ಮೂಲಕ ಉಡಾವಣೆ ಮಾಡಲಾಗುತ್ತಿದೆ. ಈ ಆದಿತ್ಯಾ ಎಲ್ 1 ಉಪಗ್ರಹವು ಸೂರ್ಯನ ವಿವರವಾದ ಅಧ್ಯಯನವನ್ನು ಹೊಂದಲು ಏಳು ವಿಭಿನ್ನ ಪೇಲೋಡ್ಗಳನ್ನು ಒಯ್ಯುತ್ತದೆ. ಅದರಲ್ಲಿ ನಾಲ್ಕು ಸೂರ್ಯನ ಬೆಳಕನ್ನು ವೀಕ್ಷಿಸುತ್ತದೆ ಮತ್ತು ಇತರ ಮೂರು ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳ ಇನ್-ಸಿಟು ನಿಯತಾಂಕಗಳನ್ನು ಅಳೆಯುತ್ತದೆ.
ಇದನ್ನೂ ಓದಿ: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಆದಿತ್ಯಾ ಎಲ್ 1 ಸೂರ್ಯನನ್ನು ಮುಟ್ಟುತ್ತದೆಯೇ? ಇಲ್ಲಿದೆ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ!
ಆದಿತ್ಯ-L1 ನಲ್ಲಿನ ಅತಿ ದೊಡ್ಡ ಮತ್ತು ತಾಂತ್ರಿಕವಾಗಿ ಅತ್ಯಂತ ಸವಾಲಿನ ಪೇಲೋಡ್ ಎಂದರೆ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ ಅಥವಾ VELC. ಇಸ್ರೋ ಸಹಯೋಗದೊಂದಿಗೆ ಹೊಸಕೋಟೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ CREST (ಸೆಂಟರ್ ಫಾರ್ ರಿಸರ್ಚ್ ಅಂಡ್ ಎಜುಕೇಶನ್ ಇನ್ ಸೈನ್ಸ್ ಟೆಕ್ನಾಲಜಿ) ಕ್ಯಾಂಪಸ್ನಲ್ಲಿ VELC ಅನ್ನು ಸಂಯೋಜಿಸಲಾಗಿದೆ ಮತ್ತು ಪರೀಕ್ಷಿಸಲಾಗಿದೆ ಮತ್ತು ಮಾಪನಾಂಕ ಮಾಡಲಾಗಿದೆ.
ಆದಿತ್ಯ-L1 ಅನ್ನು ಲಗ್ರಾಂಜಿಯನ್ ಪಾಯಿಂಟ್ 1 (ಅಥವಾ L1) ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತಿದೆ. ಇದು ಸೂರ್ಯನ ದಿಕ್ಕಿನಲ್ಲಿ ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರದಲ್ಲಿದೆ. ಈ ದೂರವನ್ನು ಕ್ರಮಿಸಲು ಆದಿತ್ಯಾ ಎಲ್ 1 ಉಪಗ್ರಹವು ಸುಮಾರು ನಾಲ್ಕು ತಿಂಗಳ ಅವಧಿಯಲ್ಲಿ ಕ್ರಮಿಸುವ ನಿರೀಕ್ಷೆಯಿದೆ.