ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್ ಪುಟ್ಟಿಂಗಲ್ ದೇವಿ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಇಡೀ ಕೇರಳವೇ ನಡುಗಿದೆ. ಅವಘಡವೊಂದು ದುರಂತವೆಂದೆನಿಸುವುದು ಅಲ್ಲಿನ ಸಾವಿನ ಸಂಖ್ಯೆಗಳಿಂದಲ್ಲ! ಯಾಕೆಂದರೆ ದೊಡ್ಡ ದುರಂತವೊಂದು ಸಂಭವಿಸಿದ್ದರೆ ಅದಕ್ಕೆ ಚಿಕ್ಕದೊಂದು ಅಜಾಗರೂಕತೆಯೇ ಕಾರಣವಾಗಿರುತ್ತದೆ ಎಬುದನ್ನು ನಾವಿಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿದೆ.
ನಿಯಮಗಳನ್ನು ಗಾಳಿಗೆ ತೂರಿ ಬಿಟ್ಟು, ಅಪಾಯಕರ ರೀತಿಯಲ್ಲಿ ಪಟಾಕಿ ದಾಸ್ತಾನು ಮಾಡಿದ್ದೇ ಈ ದುರಂತಕ್ಕೆ ಮುನ್ನುಡಿ ಬರೆದಿದ್ದು. ಜಾತ್ರಾ ಮಹೋತ್ಸವಗಳಲ್ಲಿ ಪಟಾಕಿ ಸಿಡಿಸುವಾಗ ಪಟಾಕಿಯ ಆರ್ಭಟದತ್ತ ಗಮನ ಹರಿಸುತ್ತೇವೆಯೇ ವಿನಾ ನಿಯಮಗಳ ಬಗ್ಗೆ ತಲೆಕೆಡಿಸುವುದೇ ಇಲ್ಲ. ಕೊಲ್ಲಂನಲ್ಲಿ ಸಂಭವಿಸಿದ್ದೂ ಇದೇ. ಪ್ರಬಲವಾದ ಡಬಲ್ ಬಾಂಬ್ ಪಟಾಕಿಗಳನ್ನು ಬಳಸಬಾರದೆಂದು 2003ರಲ್ಲಿ ಕೇರಳ ಸರ್ಕಾರ ಆದೇಶಿಸಿತ್ತು. ಆದರೆ ನಿಷೇಧಿಸಲ್ಪಟ್ಟ ಬಾಂಬ್ ಪಟಾಕಿಗಳನ್ನೇ ಈ ಜಾತ್ರೆಯಲ್ಲೂ ಬಳಸಲಾಗಿದೆ .
ಆದಾಗ್ಯೂ, ಸಿಡಿಮದ್ದು ಪ್ರದರ್ಶನ ಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸಿ ಅದಕ್ಕೆ ಅನುಮತಿ ನೀಡಬೇಕಾದವರು ಜಿಲ್ಲಾಧಿಕಾರಿಯಾಗಿದ್ದಾರೆ. 2008ರ ಸ್ಫೋಟಕ ವಸ್ತು ಕಾನೂನು ಪ್ರಕಾರ ಸಿಡಿಮದ್ದು ಪ್ರದರ್ಶನ ನಡೆಸುವವರು 15 ಕಿ.ಗ್ರಾಂನಷ್ಟು ಪಟಾಕಿಗಳನ್ನು ಶೇಖರಿಸಲು ಮಾತ್ರ ಅನುಮತಿ ನೀಡಲಾಗುತ್ತದೆ. ಅದೇ ವೇಳೆ ಒಂದು ಸಿಡಿಮದ್ದು ಪ್ರದರ್ಶನಕ್ಕೆ 200 ಪಟಾಕಿಮಾತ್ರ ಬಳಸಬಹುದಾಗಿದೆ.
ಇಷ್ಟೆಲ್ಲಾ ನಿಯಮವಿದ್ದರೂ ಸಿಡಿಮದ್ದು ಪ್ರದರ್ಶನದ ಗುತ್ತಿಗೆದಾರರ ಟನ್ಗಟ್ಟಲೆ ಸಿಡಿಮದ್ದುಗಳನ್ನು ಬಳಸುತ್ತಾರೆ. ಇಲ್ಲಿ ಸುಡುವ ಪಟಾಕಿ, ಬಾಂಬ್ಗಳಿಗೆ ಲೆಕ್ಕವೂ ಇರುವುದಿಲ್ಲ. ಇಷ್ಟೇ ಅಲ್ಲದೆ ಟನ್ಗಟ್ಟಲೆ ಸ್ಫೋಟಕಗಳನ್ನೂ ಶೇಖರಿಸಿಡುತ್ತಾರೆ. ಈ ದಾಸ್ತಾನು ಕೇಂದ್ರಗಳು ಕೂಡಾ ಜನವಾಸವಿರುವ ಪ್ರದೇಶದಲ್ಲೇ ಇರುತ್ತದೆ.
ಜಾತ್ರೆಗಳಿಗಾಗಿ ಪಟಾಕಿ ತಯಾರಿಸುವ ಗುತ್ತಿಗೆದಾರರಿಗೆ ಒಂದು ವರ್ಷದ ಲೈಸೆನ್ಸ್ಗಿರುವ ಶುಲ್ಕ ರು. 1000. ಈ ಮೊದಲು ದೇವಾಲಯದಲ್ಲಿ ಸಿಡಿಮದ್ದು ಪ್ರದರ್ಶನಕ್ಕೆ ಅನುಮತಿ ನೀಡುವ ಅಧಿಕಾರ ಕೇಂದ್ರ ಸರ್ಕಾರದ ಎಕ್ಸ್ಪ್ಲೋಸಿವ್ ಕಂಟ್ರೋಲರ್ಗಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಇದರಲ್ಲಿ ಬದಲಾವಣೆ ತಂದಿದ್ದು, ಆ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದೆ. ಇದು ಸಿಡಿಮದ್ದು ಪ್ರದರ್ಶನದ ಗುತ್ತಿಗೆದಾರರಿಗೆ ವರದಾನವಾಗಿ ಪರಿಣಮಿಸಿದೆ.
ರಾಜಕೀಯ ಒತ್ತಡ ಹೇರಿ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಲಾಗುತ್ತದೆ. ಒಂದು ವೇಳೆ ಅನುಮತಿ ಲಭಿಸದೇ ಇದ್ದರೂ ಸಿಡಿಮದ್ದು ಪ್ರದರ್ಶನ ನಿರಾತಂಕವಾಗಿ ಸಾಗಲು ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಸಿಡಿಮದ್ದು ಬ್ಯಾನ್ ಆಗ್ಬೇಕಾ?
ಸಿಡಿಮದ್ದು ದುರಂತ ಸಂಭವಿಸಿದ ಕೂಡಲೇ ಜಾತ್ರೆಗಳಲ್ಲಿ ಸಿಡಿಮದ್ದು ಪ್ರದರ್ಶನವನ್ನು ನಿಷೇಧಿಸಬೇಕು ಎಂಬ ಕೂಗು ಕೂಡಾ ಕೇಳಿ ಬರುತ್ತಿದೆ. ಆದರೆ ದುರಂತ ಸಂಭವಿಸಿದ ಕೂಡಲೇ ಸಿಡಿಮದ್ದಿಗೆ ನಿಷೇಧ ಹೇರಬೇಕೆಂಬ ವಾದ ಹುರುಳಿಲ್ಲದ್ದು. ಸಿಡಿಮದ್ದು ಪ್ರದರ್ಶನವೆಂಬುದು ಕಲಾರೂಪವೇ ಆಗಿದೆ. ಯುರೋಪ್ನ ಜೆನಿವಾದಲ್ಲಿ ಅತೀ ದೊಡ್ಡ ಸಿಡಿಮದ್ದು ಪ್ರದರ್ಶನ ನಡೆಯುತ್ತದೆ. ಆದರೆ ಇಲ್ಲಿ ಅಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಅದ್ಯಾವುದೇ ಸಂದರ್ಭಗಳಲ್ಲಿ ಸಿಡಿಮದ್ದು ಪ್ರದರ್ಶನ ಮಾಡುತ್ತಿದ್ದರೆ ಗಮನಿಸಬೇಕಾದ ವಿಷಯಗಳೆಂದರೆ
1. ಸಿಡಿಮದ್ದು ಪ್ರದರ್ಶನ ಮಾಡಲು ನುರಿತ ವ್ಯಕ್ತಿಗಳ ಅಗತ್ಯವಿದೆ. ಇದ್ದಬದ್ಧವರೆಲ್ಲಾ ಸಿಡಿಮದ್ದು ಸುಡಲು ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದಾಗ್ಯೂ, ಸಿಡಿಮದ್ದು ಪ್ರದರ್ಶನದ ಬಗ್ಗೆ ಭಾರತದಲ್ಲಿ ಕಲಿಕೆ ಇಲ್ಲ. ಇದನ್ನು ವಿದೇಶಗಳಲ್ಲಿ ಪರಂಪರಾಗತ ಕಲೆಯಾಗಿ ಪೋಷಿಸುತ್ತಿದ್ದರೂ, ಭಾರತದಲ್ಲಿ ಇದನ್ನು ಕಲಾರೂಪವೆಂದು ಪರಿಗಣಿಸಿಲ್ಲ.
ಸಿಡಿಮದ್ದು ಪ್ರದರ್ಶನದ ಸ್ಥಳದಲ್ಲಿ ಜನರ ನಿಯಂತ್ರಣ ಅತೀ ಮುಖ್ಯ. ಪ್ರಸಿದ್ಧ ದೇವಾಲಯಗಳಲ್ಲಿ ನಡೆಯುವ ಸಿಡಿಮದ್ದು ಪ್ರದರ್ಶನಗಳನ್ನು ನೋಡಲು ಪರವೂರಿನಿಂದಲೂ ಜನ ಬರುತ್ತಿರುತ್ತಾರೆ. ಸಿಡಿಮದ್ದು ಪ್ರದರ್ಶನಕ್ಕೆ ಸಾಕಷ್ಟು ಸ್ಥಳಾವಕಾಶ ಇಲ್ಲದೇ ಇರುವುದು ಕೂಡಾ ಅಪಾಯಗಳಿಗೆ ಆಹ್ವಾನ ನೀಡುತ್ತದೆ. ಆದ್ದರಿಂದ ಜನರಿಗೆ ದೂರದಿಂದ ನಿಂತು ನೋಡಿ ಆಸ್ವಾದಿಸುವ ಸೌಕರ್ಯವನ್ನು ಕಲ್ಪಿಸಬೇಕು.
ಅವಘಡ ಸಂಭವಿಸಿದರೆ ಏನು ಮಾಡಬೇಕೆಂಬುದು ಜನರಿಗೆ ಗೊತ್ತಿರುವುದಿಲ್ಲ. ಸಿಡಿಮದ್ದು ಪ್ರದರ್ಶನದ ವೇಳೆ ಅವಘಡವೇನಾದರೂ ಸಂಭವಿಸಿದರೆ ಏನು ಮಾಡಬೇಕು? ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ?ಎಂಬುದರ ಬಗ್ಗೆ ಅರಿವು ಇಲ್ಲದೇ ಹೋದಾಗ ಅಲ್ಲಿ ಅಪಾಯಗಳು ಇನ್ನೂ ಹೆಚ್ಚುತ್ತವೆ. ಜನರಿಗೆ ಈ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತಾಗಬೇಕು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos