ನವದೆಹಲಿ: ಗಡಿ ನಿಯಂತ್ರಣ ರೇಖೆ ದಾಟಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಳಗೆ ನುಗ್ಗಿ ಅಲ್ಲಿನ ಉಗ್ರರ ಪ್ರಮುಖ ಕ್ಯಾಂಪ್ ಗಳನ್ನು ಭಾರತೀಯ ವಾಯುಸೇನೆ ಧ್ವಂಸ ಮಾಡಿದ್ದು, ಈ ದಾಳಿಯ ಸಂಪೂರ್ಣ ವಿವರ ಇಲ್ಲಿದೆ.
ಬರೊಬ್ಬರಿ 48 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ವಾಯುಸೇನೆ ಗಡಿ ನಿಯಂತ್ರಣ ರೇಖೆ ದಾಟಿ ಹೊರಗೆ ಹೋಗಿ ದಾಳಿ ಮಾಡಿದ್ದು, 350ಕ್ಕೂ ಹೆಚ್ಚು ಉಗ್ರರನ್ನು ಮಟ್ಟ ಹಾಕಿದೆ. ಭಾರತೀಯ ವಾಯುಸೇನೆಯ ಈ ಐತಿಹಾಸಿಕ ದಾಳಿ ಹೇಗಾಯ್ತು? ಯಾವೆಲ್ಲಾ ಯುದ್ಧ ವಿಮಾನಗಳು ದಾಳಿಗೆ ಹೊರಟಿದ್ದವು ಎಂಬಿತ್ಯಾದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಪುಲ್ವಾಮ ಉಗ್ರದಾಳಿ ದಿನವೇ ಮುಹೂರ್ತ ಫಿಕ್ಸ್
ಇಂದಿನ ವಾಯುಸೇನೆ ದಾಳಿ ಎಲ್ಲರಿಕೂ ಆಘಾತವನ್ನುಂಟು ಮಾಡಿರಬಹುದು. ಆದರೆ ಇದೇ ಫೆಬ್ರವರಿ 14ರಂದು ಪುಲ್ವಾಮ ಹೊರವಲಯದಲ್ಲಿ ಭಾರತೀಯ ಸೈನಿಕರ ಮಾರಣಹೋಮವಾದಾಗಲೇ ಸರ್ಜಿಕಲ್ ಸ್ಟ್ರೈಕ್ 2.0ಗೆ ಮುಹೂರ್ತ ಫಿಕ್ಸ್ ಆಗಿತ್ತು. ಅಂದು ಭಾರತೀಯ ಸೇನೆಯ ಮಹತ್ವದ ಸಭೆ ಕರೆದಿದ್ದ ಪ್ರಧಾನಿ ಮೋದಿ 2.0ಗೆ ಸೂಚನೆ ನೀಡಿದ್ದರಂತೆ. ಅಂದೇ ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ ಅವರು 40 ಯೋಧರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಕುರಿತು ಮಾತನಾಡಿದ್ದರಂತೆ. ಅದರಂತೆ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಅವರು ಪಿಒಕೆಯಲ್ಲಿನ ಉಗ್ರ ಕ್ಯಾಂಪ್ ಗಳು ಮತ್ತು ಉಗ್ರ ಚಲನವನಗಳ ಕುರಿತು ಗುಪ್ತಚರ ಮೂಲಗಳಿಂದ ಮಾಹಿತಿ ತರಿಸಿಕೊಳ್ಳುತ್ತಿದ್ದರಂತೆ.
ಅಂತೆಯೇ ಪುಲ್ವಾಮ ಉಗ್ರ ದಾಳಿ ಬಳಿಕ ಗಡಿಯಲ್ಲಿದ್ದ ಉಗ್ರರು ಭಾರತ ದಾಳಿ ಮಾಡುತ್ತದೆ ಎಂಬ ಭಯದಿಂದ ಉಗ್ರರ ಸ್ವರ್ಗವೆಂದೇ ಖ್ಯಾತಿಗಳಿಸಿರುವ ಬಾಲಾಕೋಟ್ ಉಗ್ರ ಕ್ಯಾಂಪ್ ಗೆ ತೆರಳಿದ್ದರು. ಈ ಮಾಹಿತಿ ಪಡೆದ ವಾಯುಸೇನೆ ಇದೇ ಸರಿಯಾದ ಸಂದರ್ಭ ಎಂದು ಇಂದು ಮುಂಜಾನೆ ದಾಳಿ ಮಾಡಿ ಬರೊಬ್ಬರಿ 350ಕ್ಕೂ ಹೆಚ್ಚು ಉಗ್ರರರನ್ನು ಹೊಡೆದುರುಳಿಸಿದೆ.
ಇಂದು ಮುಂಜಾನೆ 3.30ರ ಸುಮಾರಿಗೆ ದೇಶದ ಮೂರನೇ ಬಲಿಷ್ಠ ಯುದ್ಧ ವಿಮಾನ ಎಂದು ಖ್ಯಾತಿಗಳಿಸಿರುವ ಮಿರಾಜ್ ಯುದ್ಧ ವಿಮಾನಗಳೂ ಸೇರಿದಂತೆ ಒಟ್ಟು 12 ಯುದ್ಧ ವಿಮಾನಗಳು ಗ್ವಾಲಿಯಾರ್ ವಾಯುನೆಲೆಯಿಂದ ಉಗ್ರರ ದಮನಕ್ಕೆ ಸಜ್ಜಾಗಿ ಟೇಕ್ ಆಫ್ ಆದವು. ಬಳಿಕ 3.30-3.35ರ ಸುಮಾರಿಗೆ LOC ದಾಟಿದ ಭಾರತದ ಯುದ್ಧ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿದವು.
3.45ರ ಹೊತ್ತಿಗೆ ಮೊದಲ ಟಾರ್ಗೆಟ್ ಬಳಿ ತೆರಳಿದ ಯುದ್ಧ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್ ನಲ್ಲಿದ್ದ ಜೈಷ್ ಉಗ್ರರ ಲಾಂಚ್ ಪ್ಯಾಂಡ್ ಉಡಾಯಿಸಿದವು. ಬಳಿಕ 3.48ರ ಸುಮಾರಿಗೆ ಮುಜಾಫರಾಬಾದ್ನಲ್ಲಿರುವ ಉಗ್ರರ ಅಡುಗುದಾಣಗಳನ್ನ ಪೀಸ್ ಪೀಸ್ ಮಾಡಿದವು. ಆ ಬಳಿಕ ಚಕೋಟಿ ಉಗ್ರ ಕ್ಯಾಂಪ್ ಮೇಲೆ ಬಾಂಬ್ ಹಾಕಿ, 4.06ರ ಸುಮಾರಿಗೆ ಕಾರ್ಯಾಚರಣೆ ಸಂಪೂರ್ಣಗೊಳಿಸಿತು. ಇವಿಷ್ಟೂ ಕಾರ್ಯಾಚರಣೆಗೆ ಸೇನೆ ಬಳಕೆ ಮಾಡಿದ್ದು ಕೇವಲ 21 ನಿಮಿಷಗಳು ಮಾತ್ರ. ಜಸ್ಟ್ 21 ನಿಮಿಷಗಳ ಅವಧಿಯ ಆಪರೇಷನ್ ನಲ್ಲಿ ಜೈಷ್, ಲಷ್ಕರ್, ಹಿಜ್ಬುಲ್ ಸಂಘಟನೆಯ 350ಕ್ಕೂ ಹೆಚ್ಚು ರಕ್ತಪಿಪಾಸುಗಳು ಯಮನ ಪಾದ ಸೇರಿದ್ದರು.
ದಾಳಿ ಕುರಿತು ಪಾಕಿಸ್ತಾನದಿಂದಲೇ ಮೊದಲ ಮಾಹಿತಿ!
ಇನ್ನು, ಮುಂಜಾನೆ 5 ಗಂಟೆಗೆ ಸರಿಯಾಗಿ ಪಾಕಿಸ್ತಾನವೇ ಭಾರತದ ದಾಳಿಯ ಬಗ್ಗೆ ಮಾಹಿತಿ ನೀಡಿತ್ತು. ಪಾಕ್ ಸೇನೆಯ ವಕ್ತಾರನೊಬ್ಬ ಟ್ವೀಟ್ ಮಾಡಿ ದಾಳಿಯ ಬಗ್ಗೆ ಕನ್ಫರ್ಮ್ ಮಾಡಿದ್ದ. ಅಷ್ಟೊತ್ತಿಗಾಗಾಲೇ ನಿದ್ದೆಯಿಂದ ಕಣ್ಣು ಬಿಟ್ಟಿದ್ದ ದೇಶದ ಜನರಿಗೂ ಉಗ್ರ ಸಂಹಾರದ ಸುದ್ದಿ ಮುಟ್ಟಿತ್ತು. ಪಾಕ್ ಕುತಂತ್ರವನ್ನರಿತ ಭಾರತ ಸೇನೆ ಗಡಿಯಲ್ಲಿ, ಕರಾವಳಿಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿತ್ತು.