ಜೈಪುರ: ಶಾರೀರಿಕ ವಿಶೇಷಚೇತನ ವಿದ್ಯಾರ್ಥಿಯೊಬ್ಬ ನೀಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಬಿಹಾರದ ಬೆಟ್ಟಯ್ಯದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ಅವರ ಸಾಧನೆಯ ಹೀಗಿದೆ.
ಸಜನ್ ರೈ ಬಾಲ್ಯದಿಂದಲೇ ಕಾಲಿನ ನ್ಯೂನತೆ ಹೊಂದಿದ್ದರು. ಕಾಯಿಲೆ ಬಂದು ಕಾಲು ವಶ ಕಳೆದುಕೊಂಡು ನಡೆಯಲು ಆಗುತ್ತಿರಲಿಲ್ಲ. ಊರುಗೋಲಿನ ಸಹಾಯದಿಂದ ಮೈಲಿಗಟ್ಟಲೆ ಪ್ರಯಾಣಿಸಿ ತಮ್ಮ ಕನಸನ್ನು ಇಂದು ಈಡೇರಿಸಿಕೊಂಡಿದ್ದಾರೆ.
ಬಿಹಾರ ರಾಜ್ಯದ ಮಧುಬನಿಯಿಂದ ವರ್ಷದ ಹಿಂದೆ ರಾಜಸ್ತಾನದ ಕೋಟಾಗೆ ವೈದ್ಯನಾಗುವ ಆಸೆಯಿಂದ ಕಲಿಕೆಗೆ ಸಜನ್ ರೈ ಬಂದಿದ್ದರು. ಸಜನ್ ರೈ ತಂದೆ ಕ್ಸೆರಾಕ್ಸ್ ಅಂಗಡಿ ನಡೆಸುತ್ತಿದ್ದಾರೆ. ತಾಯಿ ಗೃಹಿಣಿ, ಈ ದಂಪತಿ ಸಂಪಾದಿಸಿದ್ದರಲ್ಲಿ ಕಷ್ಟಪಟ್ಟು ಉಳಿತಾಯ ಮಾಡಿ ಮಗನ ಚಿಕಿತ್ಸೆಗೆ ಖರ್ಚು ಮಾಡಿದ್ದರು. ಇದರಿಂದ ಮಗ ಊರುಗೋಲು ಸಹಾಯದಿಂದ ನಡೆಯುವಂತಾಯಿತು. ಕುಟುಂಬಕ್ಕೆ ಆರ್ಥಿಕ ಸಂಕಷ್ಟವಿತ್ತು.
ಮಗನಿಗೆ ಹತ್ತನೇ ತರಗತಿ ಕಳೆದ ಮೇಲೆ ಆರ್ಥಿಕ ಸಂಕಷ್ಟವಿದ್ದರಿಂದ ಸರ್ಕಾರಿ ಕಾಲೇಜಿಗೆ ಸೇರಿಸಿದರು. ಹತ್ತನೇ ತರಗತಿಯಲ್ಲಿ ಸಜನ್ ರೈಗೆ ಶೇಕಡಾ 83ರಷ್ಟು ಅಂಕ ಸಿಕ್ಕಿದರೆ ಹನ್ನೆರಡನೇ ತರಗತಿಯಲ್ಲಿ ಶೇಕಡಾ 63 ಲಭಿಸಿತು. ವೈದ್ಯನಾಗಬೇಕೆಂದು ಪೋಷಕರಿಗೂ ಸಜನ್ ಗೂ ತೀವ್ರ ಬಯಕೆಯಿತ್ತು. ಮಗನ ಆಸೆಗೆ ಆಸರೆಯಾಗಿ ನಿಂತ ತಂದೆ ಇದ್ದ ತುಂಡು ಭೂಮಿಯನ್ನು ಮಾರಿ ಬಂದ ದುಡ್ಡಿನಲ್ಲಿ ಕೋಟದಲ್ಲಿ ವೈದ್ಯಕೀಯ ಕೋಚಿಂಗ್ ಸಂಸ್ಥೆಯಲ್ಲಿ ತರಬೇತಿಗೆ ಸೇರಿಸಿದರು.
ಆರೋಗ್ಯ ಸಮಸ್ಯೆ ಇರುವ ನನ್ನನ್ನು ಕೋಟಕ್ಕೆ ಕಳುಹಿಸಬೇಡಿ ಎಂದು ಹಲವರು ನನ್ನ ತಂದೆಗೆ ಹೇಳಿದರು, ಆದರೆ ನನ್ನ ತಂದೆಗೆ ನನ್ನ ಮೇಲೆ ನಂಬಿಕೆಯಿತ್ತು. ತಂದೆಯ ನಂಬಿಕೆಯನ್ನು ಉಳಿಸಿಕೊಂಡು ಚೆನ್ನಾಗಿ ಕಲಿತು ನೀಟ್ ಪರೀಕ್ಷೆ ಪಾಸ್ ಮಾಡಿಕೊಂಡಿದ್ದೇನೆ, ಮುಂದೆ ವೈದ್ಯನಾಗಿ ಶಾರೀರಿಕ ನ್ಯೂನತೆಯಿರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದು ನನ್ನ ಉದ್ದೇಶ ಎನ್ನುತ್ತಾರೆ ಸಜನ್ ರೈ.
ಶಾರೀರಿಕ ನ್ಯೂನತೆ ಒಂದು ಶಾಪವಲ್ಲ. ದೃಢ ಮನಸ್ಸು ಮತ್ತು ಆತ್ಮವಿಶ್ವಾಸದಿಂದ ಅದನ್ನು ಎದುರಿಸುವುದು ನಮಗೆ ಸವಾಲು ಎನ್ನುತ್ತಾರೆ ಅವರು. ಸಜನ್ ರೈಯವರ ಹಠ, ಛಲಕ್ಕೆ ತರಬೇತಿ ಸಂಸ್ಥೆ ಸಹಾಯ ಮಾಡಿತಂತೆ.
ತರಗತಿಗೆ ಸರಿಯಾದ ಸಮಯಕ್ಕೆ ತಲುಪಲು ವಾಹನ ವ್ಯವಸ್ಥೆ ಮಾಡಿಸಿಕೊಟ್ಟಿತು. ಪ್ರತಿದಿನ 4ರಿಂದ 5 ಗಂಟೆ ಓದುತ್ತಿದ್ದೆ. ಎಂಬಿಬಿಎಸ್ ಮುಗಿಸಿದ ನಂತರ ನರವಿಜ್ಞಾನದಲ್ಲಿ ವಿಶೇಷ ಅಧ್ಯಯನ ಮಾಡಬೇಕೆಂದು ಅಂದುಕೊಂಡಿದ್ದೇನೆ. ದೃಢ ನಿಲುವು ಹೊಂದಿ ಅದರ ಸಾಕಾರದತ್ತ ಕೆಲಸ ಮಾಡುತ್ತಿದ್ದರೆ ಜೀವನದಲ್ಲಿ ಯಶಸ್ಸು ಗಳಿಸಬಹುದು ಎನ್ನುತ್ತಾರೆ ಸಜನ್ ರೈ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos