ವಿಶೇಷ

ಕರ್ನಾಟಕ-ಕೇರಳ ಗಡಿಯಲ್ಲಿನ ಬುಡಕಟ್ಟು ಜನಾಂಗದವರಿಗೆ ಭರವಸೆಯ ಬೆಳಕು ಈ ಕೊರೋನಾ ವಾರಿಯರ್!

Manjula VN

ಮೈಸೂರು: ರಾಜ್ಯದ ಆರೋಗ್ಯ ವ್ಯವಸ್ಥೆ ಹಾಗೂ ಬುಡಕಟ್ಟು ಜನರ ನಡುವೆ ಸಂಪರ್ಕದ ಸೇತುವೆಯಾಗಿರುವ ಈ ಕೊರೋನಾ ವಾರಿಯರ್'ಗೆ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಭಾರೀ ಬೇಡಿಕೆಯಿದೆ. ಈ ಭಾಗದಲ್ಲಿ ಯಾರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಾದರೂ ಮೊದಲು ಇಲ್ಲಿನ ಜನರಿಗೆ ನೆನಪಾಕುವುದೇ ಈ ವ್ಯಕ್ತಿ... ಹೀಗಾಗಿ ಇಲ್ಲಿನ ಜನರಿಗೆ ಈ ಕೊರೋನಾ ವಾರಿಯರ್ ಭರವಸೆಯ ದಾರಿದೀಪವಾಗಿದ್ದಾರೆ. 

ಆಶಾ ಕಾರ್ಯಕರ್ತೆಯಾಗಿರುವ 32 ವರ್ಷದ ಮಹಿಳೆ ಸುಶೀಲಾ ಆವರು ಕರ್ನಾಟಕ-ಕೇರಳ ಗಡಿಭಾಗದಲ್ಲಿರುವ ಕುಗ್ರಾಮ ಗೋಲುರು, ಬಾಲ್ಲೆ ಮತ್ತು ಆನೆಮಾಲಾ ಪ್ರದೇಶದಲ್ಲಿ ಕೊರೋನಾ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಇವರ ಪರಿಶ್ರಮದಿಂದಾಗಿ ಈ ಭಾಗದಲ್ಲಿ ಕೊರೋನಾದಿಂದ ಮುಕ್ತವಾಗಿದೆ. 

ಸುಶೀಲಾ ಕೂಡ ಕುಗ್ರಾಮವಾಗಿರುವ ಗೋಲುರು ನಿವಾಸಿಯಾಗಿದ್ದು, ಇವರಿಗೆ ಮೂವರು ಮಕ್ಕಳಿದ್ದಾರೆ. ಪ್ರತೀ ತಿಂಗಳೂ ಸರ್ಕಾರ ನೀಡುವ 1 ಲೀಟರ್ ಸೀಮೆಎಣ್ಣೆಯಲ್ಲೇ ಸಂಜೆ ಸಮಯದಲ್ಲಿ ಮನೆಯಲ್ಲಿ ದೀಪ ಹಚ್ಚಿ ಕಾಲ ಕಳೆಯುತ್ತಿದ್ದಾರೆ. 

ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಕೂಡ ಸುಶೀಲಾ ಅವರು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಪ್ರಾಣಿಗಳು ನಡೆದಾಡದ ಸಮಯ ನೋಡಿಕೊಂಡು ಬಿಸಿಲಿರಲಿ, ಮಳೆಯಿರಲಿ 15-20 ಕಿಮೀ ನಡೆದುಕೊಂಡು ಹೋಗಿ ಪ್ರತೀ ಮನೆಗೂ ಭೇಟಿ ನೀಡಿ, ಜನರ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದ್ದಾರೆ. ಇದಷ್ಟೇ ಅಲ್ಲದೆ, ಗರ್ಭೀಣಿ ಮಹಿಳೆಯರ ಆರೋಗ್ಯ ತಪಾಸಣೆ ಹಾಗೂ ಮಕ್ಕಳಿಗೆ ಸೂಕ್ತ ಸಮಯಕ್ಕೆ ಲಸಿಕೆ ಹಾಕಿಸುವ ಕೆಲಸವನ್ನು ನಿಭಾಯಿಸುತ್ತಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಮಹಿಳೆಯೊಬ್ಬರಿಗೆ ಅರ್ಧರಾತ್ರಿಯಲ್ಲಿ ಪ್ರಸವದ ನೋವು ಕಾಣಿಸಿಕೊಂಡಿದ್ದು, ಈ ವೇಳೆ ಆಟೋರಿಕ್ಷಾದ ವ್ಯವಸ್ಥೆ ಮಾಡಿ ಮಹಿಳೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯುವಂತೆ ಮಾಡಿದ್ದಾರೆ. 

ತಮ್ಮ ಮೊಬೈಲ್ ಫೋನ್ ಚಾರ್ಜ್ ಮಾಡಿಕೊಳ್ಳಲು ಸುಶೀಲಾ ಅವರು 10 ಕಿಮೀ ನಡೆದುಕೊಂಡು ಹೋಗುತ್ತಾರೆ. ನೆರೆ ಗ್ರಾಮಕ್ಕೆ ತೆರಳುವ ಅವರು ಅಲ್ಲಿರುವ ಮತ್ತೊಬ್ಬರು ಆಶಾ ಕಾರ್ಯಕರ್ತೆಯೊಬ್ಬ ಮನೆಯಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ಳುತ್ತಾರೆ. ಸುಶೀಲಾ ಅವರು ಇದೀಗ ಅಲ್ಲಿನ ಜನರಿಗೆ ಅಮ್ಮರಾಗಿ ಹೋಗಿದ್ದು, ಅಲ್ಲಿನ ಜನರು ಅವರನ್ನು ಸುಶೀಲಮ್ಮ ಎಂದೇ ಕರೆಯುತ್ತಾರೆ. ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಇಂತಹ ಕೊರೋನಾ ವಾರಿಯರ್ ಗಳ ಕಾರ್ಯ ಶ್ಲಾಘನೀಯವಾದದ್ದಾಗಿದೆ.

SCROLL FOR NEXT