ವಿಶೇಷ

ಬತ್ತಿದ ಕೆರೆಗಳಿಗೆ ನೀರು ಹರಿಸಿ ಮೂಕ ಪ್ರಾಣಿಗಳ ದಾಹ ನೀಗಿಸುತ್ತಿರುವ ಅನ್ನದಾತ!

ನೀರು, ಜೀವನದ ಸಾರ, ಪ್ರತಿ ಜೀವದ ಅಸ್ತಿತ್ವಕ್ಕೆ ಪ್ರಮುಖ ಸಂಪನ್ಮೂಲ. ರಾಜ್ಯದ ಸಾಕಷ್ಟು ಭಾಗಗಳಲ್ಲಿ ತಾಪಮಾನ ಏರಿಕೆಯಾಗಿದ್ದು, ಎಲ್ಲೆಲ್ಲೂ ನೀರಿಗೆ ಹಾಹಾಕಾರ ಶುರುವಾಗಿದೆ. ನೀರಿನ ಅಭಾವಕ್ಕೆ ಕೇವಲ ಜನರು ಮಾತ್ರವಲ್ಲದೆ, ಮೂಕ ಪ್ರಾಣಿಗಳೂ ಕೂಡ ಹೈರಾಣಾಗಿವೆ. ಪ್ರಾಣಿ ಪಕ್ಷಿಗಳು ಗುಟುಕು ನೀರಿಗಾಗಿ ಪರಿತಪಿಸುತ್ತಿವೆ.

ಧಾರವಾಡ: ನೀರು, ಜೀವನದ ಸಾರ, ಪ್ರತಿ ಜೀವದ ಅಸ್ತಿತ್ವಕ್ಕೆ ಪ್ರಮುಖ ಸಂಪನ್ಮೂಲ. ರಾಜ್ಯದ ಸಾಕಷ್ಟು ಭಾಗಗಳಲ್ಲಿ ತಾಪಮಾನ ಏರಿಕೆಯಾಗಿದ್ದು, ಎಲ್ಲೆಲ್ಲೂ ನೀರಿಗೆ ಹಾಹಾಕಾರ ಶುರುವಾಗಿದೆ. ನೀರಿನ ಅಭಾವಕ್ಕೆ ಕೇವಲ ಜನರು ಮಾತ್ರವಲ್ಲದೆ, ಮೂಕ ಪ್ರಾಣಿಗಳೂ ಕೂಡ ಹೈರಾಣಾಗಿವೆ. ಪ್ರಾಣಿ ಪಕ್ಷಿಗಳು ಗುಟುಕು ನೀರಿಗಾಗಿ ಪರಿತಪಿಸುತ್ತಿವೆ.

ಇಂತಹ ಸಮಯದಲ್ಲಿ ಧಾರವಾಡ ಜಿಲ್ಲೆಯ ರೈತರೊಬ್ಬರು ಕೆರೆಗೆ ನೀರು ಹರಿಸುವ ಮೂಲಕ ಜಾನುವಾರು, ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಸಳಿಕಟ್ಟಿ ಗ್ರಾಮದ ರೈತ ಗೋವಿಂದ ಗುಂಡಪ್ಪ ಗುಂಡ್ಕಲ್ ಅವರು ತಮ್ಮ ಬೋರ್‌ವೆಲ್‌ನಿಂದ ತಮ್ಮೂರಿನ ಕರೆಗೆ ನೀರು ತುಂಬಿಸಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಬೇಸಿಗೆ ಕಾಲದಲ್ಲಿ ಕೆರೆಗೆ ನೀರು ತುಂಬಿಸುವ ಕಾಯಕ ಮಾಡುತ್ತಿದ್ದಾರೆ. ಈ ಮೂಲಕ ಪ್ರಾಣಿಗಳ ದಾಹ ತಣಿಸುತ್ತಿದ್ದಾರೆ.

ನನ್ನ ಜಮೀನಿನ ಪಕ್ಕದ ಕೆರೆಯಲ್ಲಿ ನಮ್ಮ ದನಗಳನ್ನು ನೀರು ಕುಡಿಸಲು ಕರೆದೊಯ್ಯುತ್ತಿದ್ದೆ. ಆದರೆ, 3 ವರ್ಷಗಳ ಹಿಂದೆ ಕೆರೆ ಬತ್ತಿ ಹೋಗಿತ್ತು. ನಮ್ಮ ಜಾನುವಾರುಗಳ ದಾಹ ನೀಗಿಸಲು ನನ್ನ ಜಮೀನಿನ ಬೋರ್‌ವೆಲ್‌ ನೀರನ್ನು ಬಳಸುತ್ತಿದ್ದೆ. ಆದರೆ, ಇತರ ಪ್ರಾಣಿಗಳು ಕೆರೆಗೆ ಬಂದು ನೀರಿಲ್ಲದೆ ಹಿಂತಿರುಗುತ್ತಿರುವುದನ್ನು ಗಮನಿಸಿದೆ. ಅವುಗಳಿಗೂ ನೀರು ದೊರೆಯಬೇಕೆಂದು ಕೆರೆ ನೀರು ತುಂಬಿಸಲು ಆರಂಭಿಸಿದೆ ಎಂದು ಗುಂಡಪ್ಪ ಹೇಳಿದ್ದಾರೆ.

ಮಳೆಗಾಲದಲ್ಲಿ ಮಾತ್ರ ಕೆರೆಯಲ್ಲಿ ನೀರು ಇರುತ್ತದೆ. ಫೆಬ್ರುವರಿ ಮತ್ತು ಬೇಸಿಗೆಯ ತಿಂಗಳುಗಳಲ್ಲಿ ಕೆರೆ ಒಣಗಿ ಹೋಗುತ್ತದೆ. ಪ್ರತಿ ವರ್ಷ ಸುಮಾರು 4 ತಿಂಗಳ ಕಾಲ ಪಂಪ್‌ಸೆಟ್‌ನಿಂದ ಕೆರೆಗೆ ನೀರು ತುಂಬಿಸುತ್ತೇನೆ. ಪ್ರತಿದಿನ ಸುಮಾರು 4 ಗಂಟೆಗಳ ಕಾಲ ಕೆರೆಗೆ ನೀರು ಹರಿಸುತ್ತೇನೆಂದು ತಿಳಿಸಿದ್ದಾರೆ.

ಗೋವಿಂದ್ ಅವರ ಪುತ್ರ ಮಾರುತಿ ಅವರು ಮಾತನಾಡಿ, ಕೆರೆ ಬತ್ತಿ ಹೋಗಿದ್ದರಿಂದ ಜಿಂಕೆಯೊಂದು ನೀರು ಕುಡಿಯದೆ ಹಿಂತಿರುಗುವುದನ್ನು ತಂದೆ ನೋಡಿದ್ದರು. ಆಗ, ನಮ್ಮ ಬೋರ್‌ವೆಲ್‌ನಿಂದ ಕೆರೆಗೆ ನೀರು ತುಂಬಿಸಲು ನಿರ್ಧರಿಸಿದರು. ಕಳೆದ ಮೂರು ವರ್ಷಗಳಿಂದ ಇದನ್ನೇ ಮಾಡುತ್ತಿದ್ದಾರೆ. ನಾವು 1.5 ಎಕರೆ ಜಮೀನು ಹೊಂದಿದ್ದು, ನಮ್ಮ ಬೋರ್‌ವೆಲ್‌ನ ನೀರು ಈ ಭೂಮಿಗೆ ನೀರಾವರಿ ಮಾಡಲು ಸಾಕು. ಗುತ್ತಿಗೆ ಪಡೆದ ನಾಲ್ಕು ಎಕರೆ ಜಮೀನಿಗೂ ನೀರುಣಿಸುತ್ತೇವೆ ಎಂದು ಹೇಳಿದ್ದಾರೆ.

ಗೋವಿಂದ್ ಅವರ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಗ್ರಾಮದ ಗೌಲಿ ಬುಡಕಟ್ಟಿನ ನಿವಾಸಿಯೊಬ್ಬರು ಮಾತನಾಡಿ, ಗೋವಿಂದ್‌ ಹೊಳೆಗೆ ನೀರು ಪೂರೈಸುವುದರಿಂದ ದನಗಳಷ್ಟೇ ಅಲ್ಲ, ಕಾಡು ಪ್ರಾಣಿಗಳಿಗೂ ಸಹಾಯಕವಾಗುತ್ತಿದೆ. ಗ್ರಾಮವು ಪಶ್ಚಿಮ ಘಟ್ಟಗಳ ಅಂಚಿನಲ್ಲಿದೆ. ವನ್ಯಪ್ರಾಣಿಗಳು ನೀರನ್ನು ಅರಸಿ ನಮ್ಮ ಗ್ರಾಮಕ್ಕೆ ಬರುತ್ತವೆ. ಗೋವಿಂದ್ ಅವರು ಪೂರೈಸುವ ನೀರು ಅವುಗಳ ದಾಹವನ್ನು ನೀಗಿಸುತ್ತಿದೆ. ರಾಜ್ಯಾದ್ಯಂತ ಮಾನವ-ಪ್ರಾಣಿ ಸಂಘರ್ಷಗಳ ಬಗ್ಗೆ ನಾವು ಕೇಳುತ್ತೇವೆ. ಆದರೆ, ನಮ್ಮ ಗ್ರಾಮದ ಕಥೆ ಇದಕ್ಕೆ ವಿಭಿನ್ನವಾಗಿದೆ ಎಂದು ಹೇಳಿದ್ದಾರೆ.

ಮತ್ತೊಬ್ಬ ನಿವಾಸಿ ಮಾತನಾಡಿ, ನೀರು ಸಿಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಣಿಗಳ ಮೇಯಿಸಲು ಈ ಸ್ಥಳ ಸೂಕ್ತವಾಗಿದೆ. ಪ್ರಾಣಿ ಮತ್ತು ಪಕ್ಷಿಗಳ ದಾಹ ನೀಗಿಸಲು ಹಲವು ಇಂತಹ ಪ್ರಯತ್ನಗಳನ್ನು ಮಾಡಬೇಕು ಎಂದು ತಿಳಿಸಿದ್ದಾರೆ.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಪರುಶುರಾಮ ಯಟ್ಟಿಂಗುಡ ಮಾತನಾಡಿ, ಗೋವಿಂದ್ ಅವರ ಒಳ್ಳೆಯ ಕಾರ್ಯ ಬಗ್ಗೆ ತಿಳಿದು ಅವರನ್ನು ಸನ್ಮಾನಿಸಲಾಯಿತು. ಕೆರೆ ಹಾಗೂ ಗೋವಿಂದ ಅವರ ಜಮೀನಿಗೂ ಭೇಟಿ ನೀಡಿದ್ದೆವು. ಗ್ರಾಮದಲ್ಲಿರುವ ಸುಮಾರು 700 ಜಾನುವಾರುಗಳು ಬೇಸಿಗೆಯ ಸಮಯದಲ್ಲಿ ಕೆರೆಯನ್ನು ಅವಲಂಬಿಸಿರುವುದು ತಿಳಿಯಿತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT