ವಿಶೇಷ

ಮದ್ಯವ್ಯಸನಿಗಳ ಮಕ್ಕಳಿಗೆ ಆಶಾಕಿರಣ 'ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ'

Manjula VN

ಮದ್ಯದ ಗೀಳು ಅಥವಾ ಮದ್ಯಪಾನದ ವ್ಯಸನವೆಂದರೆ ಮದ್ಯದ ಮೇಲಿನ ಅವಲಂಬನೆ. ಇದು ಹವ್ಯಾಸವನ್ನು ಚಟವಾಗಿಸುತ್ತದೆ. ಇದರಿಂದಾಗಿ ಮನುಷ್ಯ ತನ್ನ ಮೇಲಿನ ನಿಯಂತ್ರಣ ಕಳೆದುಕೊಂಡು ತನ್ನ ಆರೋಗ್ಯ, ಮಾನಸಿಕ ಸ್ವಾಸ್ಥ್ಯವನ್ನು ಹಾಳು ಮಾಡಿಕೊಳ್ಳುತ್ತಾನಷ್ಟೇ ಅಲ್ಲದೆ, ತನ್ನ ಬದುಕಿನ ಮೌಲ್ಯವನ್ನು ಮರೆತುಬಿಡುತ್ತಾರೆ. ವ್ಯಕ್ತಿಯ ಮದ್ಯವ್ಯಸದ ಗೀಳು ಆತನ ಮೇಲಷ್ಟೇ ಅಲ್ಲದೆ, ಕುಟುಂಬ ಹಾಗೂ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ, ಏಕೆಂದರೆ ಈ ಅಭ್ಯಾಸವು ಪೋಷಕರ ಕರ್ತವ್ಯಗಳಿಗೆ ಅಡ್ಡಿಯುಂಟು ಮಾಡುತ್ತದೆ. ಅಲ್ಲದೆ, ಮಕ್ಕಳು ಭವಿಷ್ಯದ ಮದ್ಯ ವ್ಯಸನಿಗಳಾಗುವ ಅಪಾಯ ಕೂಡ ಹೆಚ್ಚಾಗಿರುತ್ತದೆ. ಮದ್ಯದ ಚಟ ಬಿಡಿಸಲು ಇಂದು ನಾನಾ ಕೇಂದ್ರಗಳು ಎಲ್ಲೆಡೆ ತಲೆ ಎತ್ತಿದ್ದು, ಇದರ ಬಗ್ಗೆ ಅರಿವು ಮೂಡಿಸುವುದು ಮುಖ್ಯವಾಗಿದೆ.

ಉಡುಪಿಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯು ಕಳೆದ ಎರಡು ದಶಕಗಳಿಂದ ಮದ್ಯವ್ಯಸನ ನಿವಾರಣೆ ಶಿಬಿರಗಳನ್ನು ಆಯೋಜಿಸುತ್ತಿದೆ. ಡಾ.ಪಿ.ವಿ.ಭಂಡಾರಿ ಮತ್ತು ಡಾ ವಿರೂಪಾಕ್ಷ ದೇವರಮನೆ ಹಲವು ಶಿಬಿರಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಡಾ.ಭಂಡಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ದೇಶಕ ಮತ್ತು ಮನೋವೈದ್ಯರಾಗಿದ್ದರೆ, ಡಾ.ದೇವರಮನೆ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿದ್ದಾರೆ.

ಮದ್ಯ ವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹ (COA)ವನ್ನು ಫೆಬ್ರವರಿ 11 ರಿಂದ 17 ರವರೆಗೆ ಆಚರಿಸಲಾಗುತ್ತದೆ. ಕಳೆದ ಎರಡು ದಶಕಗಳಲ್ಲಿ 2,000 ಕ್ಕೂ ಹೆಚ್ಚು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಮದ್ಯವ್ಯಸನದಿಂದ ಮುಕ್ತರಾಗಿ ಹೊರ ಬಂದಿದ್ದಾರೆ.

1990ರಲ್ಲಿ ಅಮೆರಿಕಾ-ಯುರೋಪಿಯನ್ ರಾಷ್ಟ್ರಗಳಲ್ಲಿ ಮದ್ಯವ್ಯಸನಿಗಳ ಮಕ್ಕಳ (COA) ಜಾಗೃತಿ ಸಪ್ತಾಹವನ್ನು ನಡೆಸಲಾಗಿತ್ತು. ಅಲ್ಲಿಂದಲೇ ನಮಗೂ ಈ ಬಗ್ಗೆ ಆಲೋಚನೆ ಶುರುವಾಗಿತ್ತು. ಬಳಿಕ ಭಾರತದಲ್ಲಿಯೂ ಆರಂಭಿಸಲಾಯಿತು. ಆದರೆ, ಭಾರತದಲ್ಲಿ ಇದು ಇನ್ನೂ ಜನಪ್ರಿಯವಾಗಿಲ್ಲ.

ಭಾರತದಲ್ಲಿ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಇದರ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿಯೇ ಮದ್ಯವ್ಯಸನಿಗಳ ಮಕ್ಕಳ (COA) ಜಾಗೃತಿ ಸಪ್ತಾಹವನ್ನು ಆಚರಿಸಲು ಪ್ರಾರಂಭಿಸಿದ್ದೆವು. ರೇಡಿಯೋ, ಟಿವಿ ಕಾರ್ಯಕ್ರಮಗಳು, ಶಿಕ್ಷಕರು ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಕಾರ್ಯಾಗಾರಗಳು, ಪೋಷಕರಿಗಾಗಿ ಕಾರ್ಯಾಗಾರಗಳಂತಹ, ಚಿತ್ರಕಲೆ ಸ್ಪರ್ಧೆಗಳು, ಫೋನ್-ಇನ್ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಶಾಲಾ ದಿನಗಳಿಂದಲೇ ಮಕ್ಕಳಿಗೆ ಈ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಿರುತ್ತದೆ. ಪೋಷಕರು ಮದ್ಯವ್ಯಸನಿಗಳಾಗಿದ್ದರೆ ಮನೆಯಲ್ಲಿ ಮಕ್ಕಳು ಸಾಕಷ್ಟು ಸಮಸ್ಯೆ ಎದುರಿಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಸಹಾಯ ಹಸ್ತದ ಅಗತ್ಯವಿರುತ್ತದೆ. ಕೆಲವೊಮ್ಮೆ ಮಕ್ಕಳು ಮುಜುಗರ ಪರಿಸ್ಥಿತಿಯನ್ನೂ ಎದುರಿಸುತ್ತಿರುತ್ತಾರೆ. ಇವರಿಗೆ ಸಾಮಾಜಿಕ ಬೆಂಬಲ ನೀಡಬೇಕು. ಹೀಗಾಗಿ ಹೆಚ್ಚಿನ ಡೆಡಿಕ್ಷನ್ ಸೆಂಟರ್‌ಗಳನ್ನು ತೆರೆಯಲು ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನೀಡಬೇಕು ಎಂದು ಡಾ.ಭಂಡಾರಿ ತಿಳಿಸಿದ್ದಾರೆ.

ಮದ್ಯದ ಚಟಕ್ಕೆ ಬಿದ್ದ ಪೋಷಕರು ಮಕ್ಕಳು ಬೆಳೆಯುವ ಹಂತದಲ್ಲೇ ಕಡೆಗಣಿಸಲ್ಪಟ್ಟರೆ, ಅವರ ಜೀವನ ಭಯ, ಆತಂಕ ಹಾಗೂ ಗೊಂದಲದಲ್ಲಿಯೇ ಉಳಿದು ಬಿಡುತ್ತದೆ. ಮದ್ಯವ್ಯಸನಿಗಳ ಮಕ್ಕಳು ಕಲಿಕೆಯ ತೊಂದರೆ ಹಾಗೂ ಖಿನ್ನತೆಗೊಳಗಾಗುವುದು ಹೆಚ್ಚು ಎಂದು ಅಧ್ಯಯನಗಳೂ ಕೂಡ ತಿಳಿಸಿವೆ. ನಮ್ಮ ಜಾಗೃತಿ ಸಪ್ತಾಹ ಇಂತಹ ಮಕ್ಕಳಿಗೆ ಆಶಾಕಿರಣ ಹಾಗೂ ಧ್ವನಿಯಾಗುತ್ತದೆ. ನಮ್ಮ ಕಾರ್ಯಕ್ರಮದ ಮೂಲಕ ಮದ್ಯವ್ಯವಸನಿಗಳ ಮಕ್ಕಳು ಒಬ್ಬಂಟಿಯಲ್ಲ, ಅವರೊಂದಿಗೆ ನಾವಿದ್ದೇವೆಂಬುದನ್ನು ಹೇಳುತ್ತದೆ. ಅವರಿಗೆ ಶಕ್ತಿ ಹಾಗೂ ಭರವಸೆಯನ್ನು ನೀಡುತ್ತದೆ. ನಮ್ಮ ಜಾಗೃತಿ ಕಾರ್ಯಕ್ರಮಗಳನ್ನು ಉಡುಪಿ, ಬೆಳಗಾವಿ, ಶಿವಮೊಗ್ಗ ಮತ್ತು ಚಿತ್ರದುರ್ಗದ ಆಸ್ಪತ್ರೆ ಹಾಗೂ ಟ್ರಸ್ಟ್ ಮೂಲಕ ಪ್ರಾರಂಭಿಸಿದ್ದೇವೆ. ಇದು ಕೇವಲ ಬೀಜ ಬಿತ್ತನೆಯಷ್ಟೇ. ಬೆಳವಣಿಗೆ ದೊಡ್ಡ ಮಟ್ಟದಲ್ಲಿ ಆಗಬೇಕೆಂದು ನಮ್ಮ ಆಶಯ ಎಂದು ಹೇಳಿದ್ದಾರೆ.

SCROLL FOR NEXT