ಬೆಂಗಳೂರು: ಜನಾಂದೋಲನದಲ್ಲಿ ತಮ್ಮನ್ನು ತೊಡಗಿಸಿಕೊಂಡ ನಂತರ, ಜನಪರ ಹೋರಾಟಗಾರರಾದ ಜಿ ಸುಧಾ ಮತ್ತು ಮೋಹನ್ ಕುಮಾರ್ ಜೆ ವಿವಾಹವಾಗಲು 25 ವರ್ಷಗಳ ಸಮಯ ತೆಗೆದುಕೊಂಡಿತು.
ಇಬ್ಬರ ವಯಸ್ಸು 54. ಚಿಕ್ಕಮಗಳೂರು ಜಿಲ್ಲೆಯ ಅಮೃತೇಶ್ವರ ದೇವಸ್ಥಾನದಲ್ಲಿ ಕುವೆಂಪು ಅವರ “ಮಂತ್ರ ಮಾಂಗಲ್ಯ” ವಿಧಿಯಂತೆ ಸರಳ ಸಮಾರಂಭದಲ್ಲಿ ಇವರಿಬ್ಬರು ವಿವಾಹವಾದರು. ದೇವಸ್ಥಾನದ ಆವರಣಕ್ಕೆ ಸ್ಟ್ರೆಚರ್ ಮೇಲೆ ತಮ್ಮ ವಯೋವೃದ್ಧ ತಾಯಂದಿರಾದ ಜಯಾಬಾಯಿ ಹಾಗೂ ಶಾಂತಮ್ಮ ಅವರನ್ನು ಕರೆತಂದು ಅವರ ಆಸೆ ನೆರವೇರಿಸಿದರು.
ಮೋಹನ್ ಒಬ್ಬ ಬ್ರಾಹ್ಮಣ ಮತ್ತು ಸುಧಾ ಕ್ಷತ್ರಿಯ ಮರಾಠ ಸಮುದಾಯದವರು. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಲಕ್ಕೇನಹಳ್ಳಿಯವರಾದ ಮೋಹನ್ ಅವರು 1995 ರಲ್ಲಿ ಅಜ್ಜಂಪುರದಲ್ಲಿ ನಡೆದ ಸಂಪೂರ್ಣ ಸಾಕ್ಷರತಾ ಆಂದೋಲನದ ಸ್ವಯಂಸೇವಕರ ಕಾರ್ಯಾಗಾರದಲ್ಲಿ ಸುಧಾ ಅವರನ್ನು ಮೊದಲ ಬಾರಿಗೆ ಭೇಟಿಯಾದರು. ಸುಧಾ ಅವರ ನಾಯಕತ್ವದ ಗುಣಗಳಿಂದ ಅವರು ಪ್ರಭಾವಿತರಾಗಿದ್ದರು. ಆಗ ಆಕೆಗೆ ಪ್ರಪೋಸ್ ಮಾಡಿದರೂ ಆಕೆ ಆತನ ಜೀವನ ಸಂಗಾತಿಯಾಗಲು ಒಪ್ಪಿದ್ದು 2002ರಲ್ಲಿ. ಮೋಹನ್ ಅವರ ಕುಟುಂಬ ಮತ್ತು ಸಮಾಜದ ಒಂದು ವರ್ಗದ ಪ್ರತಿರೋಧ ಹಾಗೂ ಜನಪರ ಚಳುವಳಿಗಳಲ್ಲಿ ಅವರ ಸಕ್ರಿಯ ಪಾಲ್ಗೋಳ್ಳಬೇಕಾಗಿದ್ದು ಸೇರಿದಂತೆ ಹಲವಾರು ಕಾರಣಗಳಿಂದಾಗಿ ವಿವಾಹವನ್ನು ಮುಂದೂಡಲಾಯಿತು. ಆದರೆ, ಅವರ ವಯಸ್ಸಾದ ತಾಯಂದಿರು ಶೀಘ್ರದಲ್ಲೇ ಮದುವೆಯಾಗಬೇಕೆಂದು ಒತ್ತಡ ಹಾಕುತ್ತಿದ್ದರು.
ಬಡವರ ಸಬಲೀಕರಣಕ್ಕಾಗಿ ಸುಧಾ ಅವರಿಗಿರುವ ಬದ್ಧತೆಯಿಂದ ನಾನು ಪ್ರಭಾವಿತನಾಗಿದ್ದೇನೆ ಎಂದು ಮೋಹನ್ ಹೇಳಿದ್ದಾರೆ. ನಾವು ಹಲವಾರು ಜನಪರ ಚಳುವಳಿಗಳಲ್ಲಿ ಭಾಗವಹಿಸಿದ್ದೇವೆ, ಇದು ನಮ್ಮ ಬಾಂಧವ್ಯವನ್ನು ಬಲಪಡಿಸಲು ಸಹಾಯ ಮಾಡಿತು ಎಂದು ಸುಧಾ ಹೇಳಿದರು. ಮೋಹನ್ 90 ರ ದಶಕದಲ್ಲಿ ಎಚ್ಎಎಲ್ನಲ್ಲಿದ್ದಾಗ, ಅವರು ಬಡವರು ಮತ್ತು ದೀನದಲಿತರ ಬಗ್ಗೆ ಆಳವಾದ ಕಾಳಜಿಯನ್ನು ವ್ಯಕ್ತಪಡಿಸಿ ನನಗೆ ಪತ್ರ ಬರೆಯುತ್ತಿದ್ದರು ಎಂದು ಸುಧಾ ತಿಳಿಸಿದ್ದಾರೆ.
ಅವರ ಪ್ರೇಮಕಥೆಯಲ್ಲಿ, ಸುಧಾಳ ಸ್ನೇಹಿತೆ ಸುನೀತಾ ಮತ್ತು ಮೋಹನ್ ಸ್ನೇಹಿತ ಹರ್ಷ ದೊಡ್ಡ ಪಾತ್ರ ವಹಿಸಿದ್ದಾರೆ. ಖ್ಯಾತ ಚಲನಚಿತ್ರ ನಿರ್ದೇಶಕ ಎಂಎಸ್ ಸತ್ಯು ಅವರ ಪ್ರೋತ್ಸಾಹವನ್ನು ಹೊಂದಿರುವ ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್ನಲ್ಲಿ ಇಬ್ಬರೂ ತಮ್ಮ ಸಂಪರ್ಕ ಹೊಂದಿದ್ದಾರೆ. ಚಿಕ್ಕಮಗಳೂರಿನಲ್ಲಿ ಸಿಪಿಐ ಮುಖಂಡ ಬಿ.ಕೆ.ಸುಂದರೇಶ್ ನೇತೃತ್ವದಲ್ಲಿ ನಡೆದ ಚಳವಳಿಗಳಲ್ಲಿ ಕೂಡ ಭಾಗವಹಿಸಿದ್ದರು.
ಅರಣ್ಯವಾಸಿಗಳ ಹಕ್ಕುಗಳಿಗಾಗಿ ಮಾಡಿದ ತಮ್ಮ ಹೋರಾಟವನ್ನು ವಿವರಿಸಿದ ಸುಧಾ, ಒಂದು ಘಟನೆಯಲ್ಲಿ, ಅರಣ್ಯ ಅಧಿಕಾರಿಗಳು ಹತ್ತಿ ಬೆಳೆಯುವ ರೈತ ಮತ್ತು ಅವನ ಹೆಂಡತಿಯನ್ನು ಅವರ ಜಮೀನಿನಿಂದ ಬಲವಂತವಾಗಿ ಹೊರ ಹಾಕಿದ್ದರು. ನಂತರ ನಾವು ಆ ದಂಪತಿಗೆ ಅಧಿಕಾರಿಗಳು ಕ್ಷಮೆ ಕೇಳುವಂತೆ ಮಾಡಿದೆವು ಎಂದು ವಿವರಿಸಿದ್ದಾರೆ. ಅವರು ಅನೇಕ ಗ್ರಾಮೀಣ ಮಹಿಳೆಯರಿಗೆ ಸ್ವ-ಸಹಾಯ ಗುಂಪುಗಳನ್ನು ಸ್ಥಾಪಿಸಲು ಸಹಾಯ ಮಾಡಿದ್ದಾರೆ ಮತ್ತು ಸಹಕಾರಿ ಚಳುವಳಿಯಲ್ಲಿ ಅವರನ್ನು ಪ್ರೋತ್ಸಾಹಿಸಿದ್ದಾರೆ. ಮೋಹನ್ ಮತ್ತು ಸುಧಾ ಅನಾಥ ಮಗುವನ್ನು ದತ್ತು ತೆಗೆದುಕೊಳ್ಳಲು ಯೋಜಿಸಿದ್ದಾರೆ. ಸುಧಾ ಅವರ ತಂದೆ ಎಂಎಸ್ ಗಣೇಶ್ ರಾವ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಮತ್ತು ಸುಧಾ ಅವರ ರೋಲ್ ಮಾಡೆಲ್ ಆಗಿದ್ದರು. ಮೋಹನ್ ಅವರ ತಂದೆ ಮತ್ತು ಚಿಕ್ಕಪ್ಪ ತಮ್ಮ ಹಳ್ಳಿಯಲ್ಲಿ ಶಾಲೆಗಳನ್ನು ನಿರ್ಮಿಸಲು ತಮ್ಮ ಜಮೀನಿನ ಭಾಗವನ್ನು ದಾನ ಮಾಡಿದ್ದರು.