ಹಂಪಿ ಎಂದ ತಕ್ಷಣ ನೆನಪಾಗುವುದು ಗತ ಇತಿಹಾಸದ ವೈಭವದ ಕ್ಷಣಗಳು... ವಿಜಯ ನಗರ ಸಾಮ್ರಾಜ್ಯದ ಆಳ್ವಿಕೆಯ ದಿನಗಳು... ಶ್ರೀಕೃಷ್ಣ ದೇವರಾಯನ ಆಳ್ವಿಕೆಯ ಕಾಲದ ಅದ್ಭುತ ಕ್ಷಣಗಳು... ಹೌದು, ಒಂದು ಕಾಲದಲ್ಲಿ ಹಂಪಿಯ ವೈಭವ ವಿದೇಶದಲ್ಲೂ ಖ್ಯಾತಿ ಗಳಿಸಿತ್ತು. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯನ್ನು ನೋಡಲೆಂದೇ ಆ ಕಾಲದಲ್ಲಿ ವಿದೇಶಿಗರು ಬರುತ್ತಿದ್ದರು. ಅಂದಿನ ಈ ವೈಭವದ ಕುರುಹುಗಳು ಹಂಪಿಯಲ್ಲಿ ಇಂದಿಗೂ ನೋಡಬಹುದು. ಈಗಲೂ ಸಾಕಷ್ಟು ಸಂಖ್ಯೆಯಲ್ಲಿ ದೇಶ ವಿದೇಶದ ಜನರು ಹಂಪಿಗೆ ಬರುತ್ತಾರೆ. ಇಲ್ಲಿನ ದೇಗುಲ ಸೇರಿದಂತೆ ಅದ್ಭುತ ಪುರಾತನ ತಾಣಗಳಿಗೆ ಭೇಟಿ ನೀಡುತ್ತಾರೆ.
ಹಂಪಿಗೆ ಇಟಲಿಯಿಂದಲೂ ಸಾಕಷ್ಟು ಪ್ರಜೆಗಳು ಭೇಟಿ ನೀಡುತ್ತಿರುತ್ತಾರೆ. ಈ ಪೈಕಿ ಲೂಸಿಯಾ ಹಾಗೂ ಅನಾ ಎಂಬ ದಂಪತಿಗಳು ಹಂಪಿಯ ವೈಭವಕ್ಕೆ ಮನಸೋತಿದ್ದು, ಇಲ್ಲಿನ ಶ್ರೀಮಂತ ಇತಿಹಾಸ ಹಾಗ ಸಂಸ್ಕೃತಿಗೆ ಆಕರ್ಷಿತರಾಗಿ, ಪೌರತ್ವ ನೀಡಿದರೆ, ಇಲ್ಲಿಯೇ ನೆಲೆಸಲು ಬಯಸಿದ್ದಾರೆ.
ಹಂಪಿಯ ಮೇಲೆ ಅಪಾರ ಗೌರವ ಬೆಳೆಸಿಕೊಂಡಿರುವ ಈ ದಂಪತಿ, ತಮ್ಮ ಸ್ನೇಹಿತರು, ಕುಟುಂಬಸ್ಥರು ಹಾಗೂ ಇತರರಿಗೆ ಹಂಪಿಗೆ ಭೇಟಿ ನೀಡುವಂತೆ ಶಿಫಾರಸು ಮಾಡುತ್ತಿದ್ದಾರೆ.
ಈ ದಂಪತಿಗಳಿಗೆ ಹಂಪಿಯ ಮೇಲಿರುವ ಪ್ರೀತಿ, ಉತ್ಸಾಹದ ಬಗ್ಗೆ ವಿಜಯನಗರ ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು. ಇದೀಗ ಜಿಲ್ಲಾಡಳಿತ ಮಂಡಳಿಯರು ತಾನು ಆಯೋಜಿಸುವ ಪ್ರವಾಸಿ ಮಾರ್ಗದರ್ಶಿ ತರಬೇತಿ ಕಾರ್ಯಕ್ರಮದಲ್ಲಿ ಇವರನ್ನು ತೊಡಗಿಸಿಕೊಂಡು, ಅವರ ಅನುಭವ ಹಂಚಿಕೊಳ್ಳುವ ಅವಕಾಶ ನೀಡಿದೆ ಎಂದು ಇಟಲಿ ಪ್ರಜೆಗಳಿಗೆ ಮಾರ್ಗದರ್ಶಿಯಾಗಿರುವ ವಿರೂಪಾಕ್ಷಿ ವಿ ಹಂಪಿ ಅವರು ಹೇಳಿದ್ದಾರೆ.
ಲೂಸಿಯಾ ಮತ್ತು ಅನಾ ನನ್ನ ಸಾರ್ವಕಾಲಿಕ ನೆಚ್ಚಿನ ಪ್ರವಾಸಿಗರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ನಾನು ಹಂಪಿಯಲ್ಲಿ ಅವರಿಗೆ ಮಾರ್ಗದರ್ಶಿಯಾಗಿದ್ದೇನೆ. ಹಂಪಿಯ ವೈಭವ, ಇತಿಹಾಸ, ಸ್ಥಳೀಯ ಸಂಪ್ರದಾಯಗಳ ಮೇಲಿನ ಅವರ ಪ್ರೀತಿ ಮತ್ತು ನಮ್ಮ ಸಂಸ್ಕೃತಿಯ ಮೇಲಿನ ಗೌರವ ನಿಜಕ್ಕೂ ವಿಶೇಷವಾಗಿದೆ. ಅವರು ಕೊನೆಯ ಬಾರಿಗೆ ಭೇಟಿ ನೀಡಿದಾಗ, ರಂಗೋಲಿ ಹಾಕುತ್ತಿರುವುದು, ಗುಡಿಸಲುಗಳು, ದನಗಳ ಫೋಟೋಗಳನ್ನು ತೆಗೆದುಕೊಂಡರು, ಈ ವೇಳೆ ಗ್ರಾಮೀಣ ಜೀವನದ ವಿವಿಧ ಅಂಶಗಳಿಂದ ಆಕರ್ಷಿತರಾದರು ಎಂದು ತಿಳಿಸಿದರು.
ಹಂಪಿ ಹಾಗೂ ಇಲ್ಲಿನ ನಿವಾಸಿಗಳ ಬಗ್ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ನನ್ನ ಸ್ನೇಹಿತೆ ಲೂಸಿಯಾ ಮತ್ತು ನಾನು ಮೊದಲು ಹಂಪಿಗೆ ಬಂದಾಗ, ಈ ಪ್ರದೇಶ ಸ್ವರ್ಗದಂತೆ ಭಾಸವಾಯಿತು. ಬಳಿಕ ಸ್ಥಳವನ್ನು ಅನ್ವೇಷಿಸಲು ಮತ್ತು ತಿಳಿದುಕೊಳ್ಳಲು ಒಬ್ಬ ಮಾರ್ಗದರ್ಶಿಯನ್ನು ನೇಮಿಸಿಕೊಂಡೆವು. ಹಂಪಿಯ ಇತಿಹಾಸ ಮತ್ತು ಗತ ವೈಭವದ ಬಗ್ಗೆ ವಿವರವಾಗಿ ತಿಳಿಸಿದರು. ಮೊದಲ ಭೇಟಿಯಲ್ಲಿಯೇ ಹಂಪಿ ನಮ್ಮ ಮನಗೆದ್ದಿತ್ತು. ಇದೀಗ ವರ್ಷಕ್ಕೊಮ್ಮೆಯಾದರೂ ಅಥವಾ ವಾರ್ಷಿಕ ಪ್ರವಾಸ ಸಾಧ್ಯವಾಗದಿದ್ದಾಗ ಪ್ರತಿ ಎರಡು ವರ್ಷಗಳಿಗೊಮ್ಮೆಯಾದರೂ ಹಂಪಿಗೆ ಭೇಟಿ ನೀಡುತ್ತೇವೆಂತು ಅನಾ ಹೇಳಿದರು.
ವಿಜಯ ವಿಠಲ ದೇವಸ್ಥಾನದಲ್ಲಿರುವ ಕಲ್ಲಿನ ರಥ ನಮ್ಮ ಮನಗೆದ್ದಿದೆ. ಅಲ್ಲಿಯೇ ದಿನದ ಅರ್ಧದಷ್ಟು ಸಮಯ ಕಳೆಯುತ್ತೇವೆ. ಸ್ಥಳೀಯರ ಮನೆಗಳಿಗೂ ಭೇಟಿ ನೀಡುತ್ತೇವೆ. ಸಾಂಪ್ರದಾಯಿಕ ಪಾಕಪದ್ಧತಿಗಳನ್ನು ಪ್ರಯತ್ನಿಸುವುದು, ಮಹಿಳೆಯರು ರಂಗೋಲಿ ಬಿಡಿಸುವುದನ್ನು ನೋಡುವುದು, ಕೆಲಸದಲ್ಲಿರುವ ರೈತರು ಮತ್ತು ದನಗಳನ್ನು ನಿರ್ವಹಿಸುವ ವಿಧಾನವನ್ನು ಗಮನಿಸುವುದು ತುಂಬಾ ಇಷ್ಟವಾಗುತ್ತದೆ. ಹಳ್ಳಿ ಜನರ ಸರಳ ಜೀವನ, ಸಂತೋಷಗಳು ಭಾರತದಲ್ಲಿ ನೆಲೆಸಲು ಮನಸ್ಸು ಮಾಡುವಂತೆ ಮಾಡಿದೆ. ಪ್ರವಾಸಿ ಮಾರ್ಗದರ್ಶಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಲು ನಮಗೆ ಆಹ್ವಾನ ನೀಡಿರುವುದು ಗೌರವದ ಸಂಗತಿ ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಪ್ರಭುಲಿಂಗ ತಳಕೆರೆ ಮಾತನಾಡಿ, ಹಂಪಿಯಲ್ಲಿ ಪ್ರವಾಸಿ ಮಾರ್ಗದರ್ಶಕರಿಗೆ ಖಾಸಗಿ ಸಂಘ ಮತ್ತು ವಿಜಯನಗರ ಜಿಲ್ಲಾಡಳಿತದ ಸಹಯೋಗದೊಂದಿಗೆ ತರಬೇತಿ ನೀಡಲಾಗುತ್ತಿದೆ. ಇತ್ತೀಚೆಗೆ, ಆಡಳಿತ ಮಂಡಳಿಯು ಕಳೆದ ಮೂರು ದಶಕಗಳಿಂದ ಹಂಪಿಗೆ ಭೇಟಿ ನೀಡುತ್ತಿರುವ ಇಬ್ಬರು ಇಟಾಲಿಯನ್ ಪ್ರವಾಸಿಗರನ್ನು ಗುರುತಿಸಿದೆ. ಅವರ ಅಭಿಪ್ರಾಯ ಮತ್ತು ಅನುಭವಗಳು ತರಬೇತಿ ಕಾರ್ಯಕ್ರಮದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಹಂಪಿಯೊಂದಿಗಿನ ಅವರ ಆಳವಾದ ಸಂಪರ್ಕವನ್ನು ಕೇಳುವುದು ಅನೇಕ ತರಬೇತಿಗಾರರಿಗೆ ಹೆಚ್ಚು ಪ್ರೇರಣೆಯನ್ನು ನೀಡುತ್ತದೆ ಎಂದು ಹೇಳಿದರು.
ಹಂಪಿಯಲ್ಲಿ ಲೂಸಿಯಾ ಮತ್ತು ಅನಾ ಅವರ ಅನುಭವವು ಅನೇಕ ಯುವ ಪ್ರವಾಸಿ ಮಾರ್ಗದರ್ಶಕರಿಗೆ ಪ್ರೇರಣೆ ನೀಡಿದೆ. ಹಂಪಿಯ ಶ್ರೀಮಂತ ಇತಿಹಾಸವನ್ನು ಉತ್ತಮವಾಗಿ ತಿಳಿಸಲು ಕನಿಷ್ಠ 6-7 ಅಂತರರಾಷ್ಟ್ರೀಯ ಭಾಷೆಗಳನ್ನು ಕಲಿಯುವ ಮಹತ್ವವನ್ನು ಅವರು ಹೊಸ ಮಾರ್ಗದರ್ಶಕರಿಗೆ ಒತ್ತಿ ಹೇಳಿದರು ಎಂದು ತಿಳಿಸಿದರು.