ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಕೊಪ್ಪಳ ಜಿಲ್ಲೆಯ ಪ್ರಸಿದ್ಧ ತೊಗಲು ಗೊಂಬೆಯಾಟ ಕಲಾವಿದೆ 96 ವರ್ಷದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ್ ಅವರಿಗೆ ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ. ತೊಗಲು ಗೊಂಬೆಯಾಟ (ಚರ್ಮದ ಗೊಂಬೆಯಾಟ) ದ ಮೇಲಿನ ಅವರ ಸಮರ್ಪಣೆ ಮತ್ತು ಕಲೆಯ ಮೇಲಿನ ಆಕರ್ಷಣೆ ಶತಮಾನದ ಅತ್ಯುತ್ತಮ ಭಾಗವಾಗಿ ಮುಂದುವರಿದುಕೊಂಡು ಬಂದಿದೆ.
ಸಂಜೀವಪ್ಪ ಮತ್ತು ಸೋಮಮ್ಮ ದಂಪತಿಗಳ ಪುತ್ರಿ ಭೀಮವ್ವ ಅವರು ಶಾಲೆಗೆ ಹೋಗಿ ವಿದ್ಯೆ ಕಲಿತವರಲ್ಲ. 1929 ರಲ್ಲಿ ಕೊಪ್ಪಳ ಜಿಲ್ಲೆಯ ಮೊರನಾಲ್ ಗ್ರಾಮದಲ್ಲಿ ಜನಿಸಿದ ಅವರು, ತಲೆಮಾರುಗಳಿಂದ ಬಂದ ತೊಗಲು ಗೊಂಬೆಯಾಟ ಕಲೆಗೆ ಪ್ರಮುಖ ಮುಖವಾಣಿಯಂತಿದ್ದಾರೆ.
ಚರ್ಮದ ಬೊಂಬೆಯಾಟವನ್ನು ಕುಟುಂಬ ಕರಕುಶಲ ಕಲೆಯಾಗಿ ಕೆಲಸ ಮಾಡಲು ಪ್ರಾರಂಭಿಸಿದಾಗ ಭೀಮವ್ವ ಅವರಿಗೆ ಕೇವಲ 14 ವರ್ಷ ವಯಸ್ಸು. ಕುರುಕ್ಷೇತ್ರ, ವಿರಾಟ ಪರ್ವ, ಲವಕುಶ ಕಾಳಗ, ಕರ್ಣ ಪರ್ವ, ದ್ರೌಪದಿ ವಸ್ತ್ರಾಪಹರಣ, ಆದಿ ಪರ್ವ, ಸರ್ಪ ಪರ್ವ ಸೇರಿದಂತೆ ಮಹಾಭಾರತದ 18 ಸಂಚಿಕೆಗಳನ್ನು ಚರ್ಮದ ಬೊಂಬೆಗಳಲ್ಲಿ ಸೆರೆಹಿಡಿದಿದ್ದಾರೆ. 200 ವರ್ಷಗಳಷ್ಟು ಹಳೆಯ ಬೊಂಬೆಗಳು ಅವರ ಸಂಗ್ರಹದಲ್ಲಿವೆ.
ಭೀಮವ್ವ ಈ ಕಲೆಯ ಎಲ್ಲಾ ವಿಭಾಗಗಳಲ್ಲಿ ಪಾರಂಗತರು. ಅವರ ಪ್ರದರ್ಶನಗಳಿಗೆ ಹಾಜರಾದ ಜನರು ಅವರ ಸಾಂಪ್ರದಾಯಿಕ ಗೊಂಬೆಯಾಟವನ್ನು ವೀಕ್ಷಿಸಲು ಮತ್ತು ಆನಂದಿಸಲು ಯೋಗ್ಯವಾಗಿದೆ ಎಂದು ಹೇಳುತ್ತಾರೆ. ಭೀಮವ್ವ ಅವರು ರಾಮಾಯಣ ಮತ್ತು ಮಹಾಭಾರತದ ಪ್ರಸಂಗಗಳಿಂದ ಹಾಡುತ್ತಾರೆ ಮತ್ತು ಬೊಂಬೆಗಳ ಲಯಕ್ಕೆ ತಕ್ಕಂತೆ ರಾಗವನ್ನು ಹೊಂದಿಸುತ್ತಾರೆ.
ಭೀಮವ್ವ ಕೇವಲ ಕರ್ನಾಟಕ ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿಯೂ ಮನ್ನಣೆ ಗಳಿಸಿದ್ದಾರೆ. ಅಮೆರಿಕ, ಪ್ಯಾರಿಸ್, ಇಟಲಿ, ಇರಾನ್, ಇರಾಕ್, ಸ್ವಿಟ್ಜರ್ಲೆಂಡ್ ಮತ್ತು ಹಾಲೆಂಡ್ಗೆ ಭೇಟಿ ನೀಡಿದ್ದಾರೆ. ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ಮತ್ತು ಪ್ರಸ್ತುತ ಘಟನೆಗಳನ್ನು ಬೊಂಬೆಯಾಟದ ಮೂಲಕ ಪ್ರದರ್ಶಿಸುವ ಮೂಲಕ ದೇಶದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿಹಿಡಿದಿದ್ದಾರೆ.
ಖುಷಿ ಮತ್ತು ಅಚ್ಚರಿ
ಅಂದು ಇಳಕಲ್ ಸೀರೆ ಉಟ್ಟುಕೊಂಡು ಕೃಷವಾಗಿದ್ದ ಭೀಮವ್ವಗೆ ಮೊದಲು ಕೊಪ್ಪಳ ಜಿಲ್ಲಾಧಿಕಾರಿಯಿಂದ ನಿಮಗೆ ಪದ್ಮಶ್ರೀ ಪ್ರಶಸ್ತಿ ಬಂದಿದೆ ಎಂದು ಫೋನ್ ಬಂದಾಗ ಗೊಂದಲಕ್ಕೀಡಾದರು. ನಾನು ಮೊರನಾಲ್ ಹಳ್ಳಿಯಿಂದ ಬಂದವಳು. ಅದು ಚಿಕ್ಕ ಹಳ್ಳಿ, ಸಣ್ಣ ಹಳ್ಳಿಗಳ ಕಲಾವಿದರು ಎಂದಿಗೂ ಬೆಳಕಿಗೆ ಬರುವುದಿಲ್ಲ. ಆದರೆ ಕೇಂದ್ರ ಸರ್ಕಾರ ನನ್ನನ್ನು ಇಷ್ಟು ದೊಡ್ಡ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದರೆ ನನಗೆ ಆರಂಭದಲ್ಲಿ ನಂಬೋದಿಕ್ಕೇ ಆಗಲಿಲ್ಲ, ಸರ್ಕಾರಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎನ್ನುತ್ತಾರೆ.
ನನ್ನ ಕುಟುಂಬ ಸದಸ್ಯರು ಸಂತೋಷವಾಗಿದ್ದಾರೆ. ನಮ್ಮ ಯುವ ಪೀಳಿಗೆಗಳು ಬೊಂಬೆಯಾಟದ ಸಂಪ್ರದಾಯವನ್ನು ಮುಂದುವರಿಸುವುದಾಗಿ ಹೇಳುತ್ತಾರೆ. ನನ್ನ ಜೀವನದಲ್ಲಿ ನಾನು 20,000 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದರೂ, ಕೆಲವೇ ಕೆಲವು ಕಲಾ ಪ್ರೇಮಿಗಳು ಮತ್ತು ಸಂಸ್ಥೆಗಳು ನಮ್ಮನ್ನು ಮೆಚ್ಚಿಕೊಂಡವು. ಈ ಕಾರ್ಯಕ್ರಮವನ್ನು ಟಿವಿಯಲ್ಲಿ ಪ್ರಸಾರ ಮಾಡಿದಾಗ ಇಡೀ ಗ್ರಾಮವು ಆಚರಿಸಿತು. ನಮ್ಮ ಕುಟುಂಬ ಸದಸ್ಯರು ಗ್ರಾಮಸ್ಥರಿಗೆ ಸಿಹಿತಿಂಡಿಗಳನ್ನು ಹಂಚಿದರು ಎನ್ನುತ್ತಾರೆ ಭೀಮವ್ವ.
ಪರಂಪರೆ ಕಾಪಾಡಿಕೊಳ್ಳಬೇಕು
ಆಧುನಿಕ ಸಿನಿಮಾ ಮತ್ತು ಸಾಮಾಜಿಕ ಮಾಧ್ಯಮಗಳ ಉತ್ಕರ್ಷದ ನಡುವೆ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದರೂ, ಭೀಮವ್ವ ಮತ್ತು ಅವರ ಕುಟುಂಬವು ತಮ್ಮ ಪರಂಪರೆಯನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ. ಸಂಪ್ರದಾಯವನ್ನು ಮುಂದಕ್ಕೆ ಕೊಂಡೊಯ್ಯಲು ಯುವ ಪೀಳಿಗೆಗೆ ತರಬೇತಿ ನೀಡುವತ್ತಲೂ ಅವರು ಗಮನಹರಿಸಿದ್ದಾರೆ. ಇಂದಿನ ಯುಗದಲ್ಲಿ, ಯುವಕರು ಆಧುನಿಕ ಗ್ಯಾಜೆಟ್ಗಳಿಗೆ ಅಂಟಿಕೊಂಡಿರುವುದರಿಂದ ಸಾಂಪ್ರದಾಯಿಕ ಮನರಂಜನಾ ವಿಧಾನಗಳ ಮಹತ್ವದ ಬಗ್ಗೆ ಕಡಿಮೆ ಅರಿವು ಇರುವುದರಿಂದ ಅನೇಕ ಗ್ರಾಮೀಣ,ಜನಪದ ಕಲೆಗಳು ಮತ್ತು ಕ್ರೀಡೆಗಳು ಕಣ್ಮರೆಯಾಗುತ್ತಿವೆ.
ಭೀಮವ್ವ ಅವರ ಕುಟುಂಬವು ಚರ್ಮದ ಬೊಂಬೆಯಾಟದ ಗ್ರಾಮೀಣ ಕಲೆಗೆ ಸಮಾನಾರ್ಥಕವಾಗಿದೆ ಎನ್ನುತ್ತಾರೆ ಶಂಕರ್ ಇಟಗಿ, ನಿಂಗಪ್ಪ ದೊಡ್ಡಮನಿ ಮತ್ತು ಮೊರಾನಾಲ್ನ ಇತರ ಗ್ರಾಮಸ್ಥರು. ಭೀಮವ್ವನ ಕುಟುಂಬವು ಮೊರಾನಲ್ನಲ್ಲಿ ಮಾತ್ರವಲ್ಲದೆ ಕೊಪ್ಪಳ ಜಿಲ್ಲೆಯಾದ್ಯಂತ ಪ್ರಸಿದ್ಧವಾಗಿದೆ. ಈ ಇಳಿ ವಯಸ್ಸಿನಲ್ಲಿಯೂ ಅವರು ಚುರುಕಾಗಿದ್ದಾರೆ. ಸಾಂಪ್ರದಾಯಿಕ ಬೊಂಬೆಯಾಟದ ಪ್ರಸ್ತುತ ಸಮಸ್ಯೆಗಳ ಕುರಿತು ಮಾತನಾಡುವ ಕಲೆಯನ್ನು ಹೊಂದಿದ್ದಾರೆ. ಅನೇಕ ಕಲೆಗಳು ಕಣ್ಮರೆಯಾಗಿವೆ ಆದರೆ ಈ ಸಾಂಪ್ರದಾಯಿಕ ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ರವಾನಿಸಿದ್ದಕ್ಕಾಗಿ ಭೀಮವ್ವ ಮತ್ತು ಅವರ ಕುಟುಂಬಕ್ಕೆ ಧನ್ಯವಾದ ಹೇಳಬೇಕು ಎನ್ನುತ್ತಾರೆ.
96 ಅಲ್ಲ 103
ಭೀಮವ್ವ ಈಗಾಗಲೇ 100 ವರ್ಷ ದಾಟಿದ್ದಾರೆ ಎಂದು ಕುಟುಂಬ ಸದಸ್ಯರು ಹೇಳುತ್ತಾರೆ ಆದರೆ ದಾಖಲೆಗಳ ಪ್ರಕಾರ ಅವರಿಗೆ 96 ವರ್ಷ. ಅವರ ಮಗ ಕೇಶಪ್ಪ 75 ವರ್ಷ ವಯಸ್ಸಿನವರಾಗಿದ್ದು, ಬೊಂಬೆಯಾಟ ಕಲೆಗಾಗಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಗೌರವಗಳು ಮತ್ತು ಪ್ರಶಸ್ತಿಗಳು
ಭೀಮವ್ವ ಅವರಿಗೆ ಇತ್ತೀಚೆಗೆ ಸಂದ ಅತಿದೊಡ್ಡ ಗೌರವ ಪದ್ಮಶ್ರೀ. "ನನಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದ್ದು ತುಂಬಾ ಸಂತೋಷವಾಗಿದೆ. ಮದುವೆಯ ನಂತರವೂ ನಾನು ಸಾಂಪ್ರದಾಯಿಕ ಗೊಂಬೆಯಾಟವನ್ನು ಮುಂದುವರೆಸಿದೆ. ಈಗ ನನ್ನ ಕುಟುಂಬ ಸದಸ್ಯರು ಸಹ ಈ ಕಲೆಯನ್ನು ಕಲಿತಿದ್ದಾರೆ. ನನ್ನನ್ನು ಗುರುತಿಸಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ ಎನ್ನುತ್ತಾರೆ.
ಇತರ ಗೌರವಗಳು: 1993 ರಲ್ಲಿ ಟೆಹ್ರಾನ್ ಕಂಟ್ರಿ ಪಪೆಟ್ ಫೆಸ್ಟಿವಲ್ ಪ್ರಶಸ್ತಿ, 63 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಪ್ರಾದೇಶಿಕ ರಂಗ ಕಲಾ ಅಧ್ಯಯನ ಪ್ರಶಸ್ತಿ, ಜಾನಪದ ಪ್ರಶಸ್ತಿಗಳು, 2005-06 ರ ಬಯಲಾಟ ಅಕಾಡೆಮಿ ಪ್ರಶಸ್ತಿ, 2010 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2014 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2020-21 ರಲ್ಲಿ ಜಾನಪದ ಶ್ರೀ ಪ್ರಶಸ್ತಿ, 2022 ರಲ್ಲಿ ಹಿರಿಯ ನಾಗರಿಕ ಪ್ರಶಸ್ತಿ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಂಸೆ
ಭೀಮವ್ವ ಶಿಳ್ಳೆಕ್ಯಾತರ್ ಅವರು ಪದ್ಮಶ್ರೀ ಪ್ರಶಸ್ತಿಗೆ ಅರ್ಹರು. ಕಳೆದ ಏಳು ದಶಕಗಳಿಂದ ಬೊಂಬೆಯಾಟಕ್ಕೆ ಅವರ ಬದ್ಧತೆಯನ್ನು ಗುರುತಿಸಲಾಗಿದೆ. ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ್ ಅವರಿಗೆ 2025 ರ ಪದ್ಮಶ್ರೀ ಪ್ರಶಸ್ತಿ ದೊರೆತಿರುವುದಕ್ಕೆ ದೇಶ ಅಪಾರ ಹೆಮ್ಮೆ ಪಡುತ್ತದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಪ್ರದರ್ಶಿಸುತ್ತಾ, ಜೀವನ ವಿಧಾನವಾಗಿ ಪೋಷಿಸಿಕೊಂಡಿರುವ ಕಲಾ ಪ್ರಕಾರಕ್ಕೆ ಅವರ ಸಮರ್ಪಣೆ, ಅವರನ್ನು ಈ ಮನ್ನಣೆಗೆ ನಿಜವಾಗಿಯೂ ಅರ್ಹರನ್ನಾಗಿ ಮಾಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರನ್ನು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ಎಂದು ಕರೆದ ಸಿಎಂ, ಕಲೆಗಳಿಗೆ ಅವರ ಜೀವಮಾನದ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. "ಗ್ರಾಮೀಣ ಕಲೆ ಮತ್ತು ಜಾನಪದ ಸಂಪ್ರದಾಯಗಳು ಮರೆಯಾಗುತ್ತಿರುವ ಯುಗದಲ್ಲಿ, ಭೀಮವ್ವ ಅವರ ಸಮರ್ಪಣೆಯಿಂದ ಬೊಂಬೆ ಕಲೆ ಜೀವಂತವಾಗಿದೆ. ಅವರ ಸಾಧನೆಗಳು ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ ಎಂದರು.