ತಿರುವನಂತಪುರಂ: ಕೇರಳದ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದಲ್ಲಿ ನಾಲ್ವರು ಕ್ರೀಡಾಪಟುಗಳ ಆತ್ಮಹತ್ಯೆ ಯತ್ನ ಘಟನೆ ಬೆನ್ನಲ್ಲೇ ಮತ್ತೋರ್ವ ಕ್ರೀಡಾಪಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್ ನಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನನ್ನು ಹಾಗೂ ತನ್ನ ಜೊತೆಗಾರರನ್ನು ವಿಚಾರಣೆ ನಡೆಸಿದ್ದಕ್ಕೆ ಮನನೊಂದು ಯುವ ಕ್ರೀಡಾಪಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಆಸ್ಪತ್ರೆಗೆ ಕರೆತಂದ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದ ಕ್ರೀಡಾಪಟು ಕೈಗೆ ಮೂರು ಹೊಲಿಗೆಗಳನ್ನು ಹಾಕಿರುವ ವೈದ್ಯರು ಆತನನ್ನು ಚಿಕಿತ್ಸೆಗಾಗಿ ಮನೋವೈದ್ಯಕೀಯ ವಿಭಾಗಕ್ಕೆ ಕಳಿಸಿದ್ದಾರೆ. ಆದರೆ ಮ್ ಅನೋವೈದ್ಯರಿಂದ ಹೆಚ್ಚಿನ ಚಿಕಿತ್ಸೆ ಪಡೆಯಲು ನಿರಾಕರಿಸಿರುವ ಕ್ರೀಡಾಪಟು, ಆಸ್ಪತ್ರೆಯಿಂದ ವಾಪಸ್ ತೆರಳಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿದ್ದ 18 ವರ್ಷದ ಬಾಲಕ ಓಟಗಾರನಾಗಲು ಕೇರಳದ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುತ್ತಿದ್ದ.
ಮೇ 7 ರಂದು ಕೇರಳದ ಸಾಯ್ ನಲ್ಲಿ ಹಿರಿಯ ಅಥ್ಲೀಟ್ ಗಳು ನೀಡಿದ ಕಿರುಕುಳದಿಂದ ಬೇಸತ್ತ ನಾಲ್ಕು ಮಹಿಳಾ ಕ್ರೀಡಾಪಟುಗಳು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಪೈಕಿ ಓರ್ವ ಕ್ರೀಡಾಪಟು ಸಾವನ್ನಪ್ಪಿ ಮೂವರು ಬದುಕುಳಿದಿದ್ದರು.